ಬೆಂಗಳೂರಿನ ವಿಲ್ಲಾ ಪಾರ್ಟಿ ಅ*ತ್ಯಾಚಾ*ರ ಪ್ರಕರಣ: ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್ ಬಂಧನ

ಬೆಂಗಳೂರಿನ ವಿಲ್ಲಾ ಪಾರ್ಟಿ ಅತ್ಯಾಚಾರ ಪ್ರಕರಣ

ಅಮೃತಹಳ್ಳಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನು ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್ ಎಂದು ಗುರುತಿಸಲಾಗಿದೆ. ಈತ ಪ್ರಮುಖ ಆರೋಪಿ ನಿಖಿಲ್‌ನ ಸ್ನೇಹಿತನಾಗಿದ್ದು, ಅತ್ಯಾಚಾರ ನಡೆದಿದೆ ಎನ್ನಲಾದ ವಿಲ್ಲಾವನ್ನು ಬುಕ್ ಮಾಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನಿರುಧ್ ಬಂಧನದ ವಿವರ : ಅನಿರುಧ್ ದಾವಣಗೆರೆ ಮೂಲದ ನಿವಾಸಿಯಾಗಿದ್ದು, ಅವನ ತಂದೆ ದಾವಣಗೆರೆಯ ಮಾಜಿ ನಗರ ಪಾಲಿಕೆ ಸದಸ್ಯರಾಗಿದ್ದಾರೆ. ಗುತ್ತಿಗೆದಾರನಾಗಿರುವ ಅನಿರುಧ್‌ಗೆ ಪೊಲೀಸರು ಮೊದಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ವಿಲ್ಲಾ ಬುಕಿಂಗ್ ಸಂಬಂಧ ವಿವರಗಳನ್ನು ಪಡೆಯಲು ನೋಟಿಸ್ ನೀಡಲಾಗಿತ್ತು. ವಿಚಾರಣೆಯ ನಂತರ ಹೆಚ್ಚಿನ ತನಿಖೆಗಾಗಿ ಅನಿರುಧ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಖಿಲ್ ಸ್ನೇಹಿತನಾಗಿರುವ ಅನಿರುಧ್: ಪ್ರಮುಖ ಆರೋಪಿ ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಮೂಲದವನಾಗಿದ್ದು, ರಾಜಾಜಿನಗರದ ಸಮೀಪ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯನ್ನು ನಡೆಸುತ್ತಿದ್ದಾನೆ. ಮಲ್ಲೇಶ್ವರದಲ್ಲಿ ವಾಸವಾಗಿರುವ ನಿಖಿಲ್ ವಾರಾಂತ್ಯಗಳಲ್ಲಿ ಪಾರ್ಟಿಗಳು ಮತ್ತು ಆಫ್ಟರ್ ಪಾರ್ಟಿಗಳನ್ನು ಆಯೋಜಿಸುವುದರಲ್ಲಿ ತೊಡಗಿದ್ದನು. ಅನಿರುಧ್ ಈ ಪಾರ್ಟಿಗಳಲ್ಲಿ ಸಕ್ರಿಯನಾಗಿದ್ದನು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಇತರ ಆರೋಪಿಗಳು: ಈ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿದ್ದು, ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್ ಸಹ ಆರೋಪಿಯಾಗಿದ್ದಾನೆ. ಡಿಕ್ಸೆನ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಪರಿಚಯಿಸಿಕೊಂಡು ಡೇಟಿಂಗ್ ಮತ್ತು ಫೋಟೋಶೂಟ್ ಹೆಸರಿನಲ್ಲಿ ಸಲುಗೆ ಬೆಳೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಹೆಚ್ಚಿನ ಆರೋಪಿಗಳ ಬಂಧನಕ್ಕೆ ಯೋಜನೆ ರೂಪಿಸುತ್ತಿದ್ದಾರೆ. ಈ ಘಟನೆಯಿಂದ ಬೆಂಗಳೂರಿನಲ್ಲಿ ಯುವಕರ ಪಾರ್ಟಿ ಸಂಸ್ಕೃತಿ ಮತ್ತು ಸುರಕ್ಷತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Exit mobile version