7.11 ಕೋಟಿ ದೋಚಿ ಗೋವಾ ಕ್ಯಾಸಿನೊಗೆ ಸುರಿಯಲು ಪ್ಲಾನ್! ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಸತ್ಯ ಬಯಲು

BeFunky collage 2026 02 13T160801.722

ಬೆಂಗಳೂರಿನಲ್ಲಿ 2025ರ ನವೆಂಬರ್ 19ರಂದು ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. 1,328 ಪುಟಗಳ ಈ ದೊಡ್ಡ ದಾಖಲೆಯಲ್ಲಿ ಆರೋಪಿಗಳು ದೋಚಿದ ಹಣವನ್ನು ಗೋವಾ ಕ್ಯಾಸಿನೊಗಳಲ್ಲಿ ಖರ್ಚು ಮಾಡುವ ಯೋಜನೆ ಹೊಂದಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಆರ್‌ಬಿಐ ಅಧಿಕಾರಿಗಳಂತೆ ನಟಿಸಿ ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಹಣ ಸಾಗಾಣಿಕೆ ವ್ಯಾನ್‌ನ್ನು ಅಡ್ಡಗಟ್ಟಿ, ಸಿಬ್ಬಂದಿಯನ್ನು ಬೆದರಿಸಿ 7.11 ಕೋಟಿ ರೂಪಾಯಿ ದರೋಡೆ ಮಾಡಿದ್ದ ಈ ಗ್ಯಾಂಗ್‌ನ ಪ್ರಮುಖ ಸಂಚುಕೋರ ಸಿಎಂಎಸ್‌ನ ಮಾಜಿ ಉದ್ಯೋಗಿ ಜೆ. ಜೇವಿಯರ್ ಎಂದು ತನಿಖೆಯಿಂದ ದೃಢಪಟ್ಟಿದೆ. ಕಂಪನಿಯ ಎಲ್ಲಾ ರೂಟ್‌ಗಳು, ಸಮಯ, ಸಿಬ್ಬಂದಿ ವಿವರಗಳು ಅವನಿಗೆ ಚೆನ್ನಾಗಿ ತಿಳಿದಿದ್ದವು.

ಆರೋಪಿಗಳು ದರೋಡೆಯ ನಂತರ ಕರ್ನಾಟಕದಿಂದ ಆಂಧ್ರಪ್ರದೇಶದ ಮೂಲಕ ಅಥವಾ ನೇರವಾಗಿ ಗೋವಾಕ್ಕೆ ತೆರಳಿ ಕ್ಯಾಸಿನೊಗಳಲ್ಲಿ ಹಣ ಖರ್ಚು ಮಾಡುವ ಯೋಜನೆ ಮಾಡಿಕೊಂಡಿದ್ದರು. ಸಾಲದ ಹಣ ತೀರಿಸುವುದು ಸಹ ಅವರ ಉದ್ದೇಶಗಳಲ್ಲಿ ಒಂದಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದಲ್ಲಿ ಒಂಭತ್ತು ಆರೋಪಿಗಳ ವಿರುದ್ಧ ದರೋಡೆ, ಅಕ್ರಮ ಬಂಧನ, ಸಾಕ್ಷ್ಯ ನಾಶ, ಅಪರಾಧ ಸಂಚು, ಜೀವ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಆರೋಪಗಳನ್ನು ದಾಖಲಿಸಲಾಗಿದೆ.

ಪ್ರಮುಖ ಆರೋಪಿಗಳು:

ಜಯನಗರ ಎಸಿಪಿ ನೇತೃತ್ವದ ತಂಡವು 54 ಗಂಟೆಗಳಲ್ಲೇ ಪ್ರಕರಣ ಭೇದಿಸಿ, 129 ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕಣ್ಣಾರೆ ಕಂಡ ಸಾಕ್ಷಿಗಳ ಹೇಳಿಕೆಗಳು, ಸಿಸಿಟಿವಿ ದೃಶ್ಯಗಳು, ಫೊರೆನ್ಸಿಕ್ ಸಾಕ್ಷ್ಯಗಳು, ಬೆರಳಚ್ಚುಗಳು, ಮೊಬೈಲ್ ಡೇಟಾ ಸೇರಿದಂತೆ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ದರೋಡೆ ಪ್ರಕರಣವು ಬೆಂಗಳೂರಿನಲ್ಲಿ ಇತ್ತೀಚಿನ ಕಾಲದ ಅತಿ ದೊಡ್ಡ ಹಣದ ದರೋಡೆಗಳಲ್ಲಿ ಒಂದಾಗಿದ್ದು, ಆರೋಪಿಗಳು ಹಣವನ್ನು ಕ್ಯಾಸಿನೊಗಳಲ್ಲಿ ಸುರಿಯುವ ಯೋಜನೆ ಹೊಂದಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿರುವುದು ಆಘಾತಕಾರಿ ಸತ್ಯವಾಗಿದೆ.

Exit mobile version