ಬೆಂ-ಮೈ ಎಕ್ಸ್‌ಪ್ರೆಸ್‌‌‌‌ವೇನಲ್ಲಿ ದುರಂತ: ಒಂದೇ ಕುಟುಂಬದ ನಾಲ್ವರ ಸಾವು!

Film 2025 04 03t161826.207

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌‌‌‌‌‌ವೇನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ದುರಂತ ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ತೂಬಿನಕೆರೆ ಎಕ್ಸಿಟ್ ಬಳಿ ನಡೆದ ಈ ದಾರುಣ ಘಟನೆ ನಡೆದಿದೆ. KSRTC ಐರಾವತ ಬಸ್‌ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತ ಹೇಗೆ ಸಂಭವಿಸಿತು?

ಬೆಂಗಳೂರಿನ ಜೆ.ಪಿ ನಗರದಿಂದ ಮೈಸೂರಿನ ಪಿರಿಯಾಪಟ್ಟಣದ ಸಿಗೂರು ಗ್ರಾಮಕ್ಕೆ ತೆರಳುತ್ತಿದ್ದ ಕುಟುಂಬವು ತಮ್ಮ ಸೋದರ ಮಾವನ ಅಂತಿಮ ದರ್ಶನಕ್ಕಾಗಿ ಪ್ರಯಾಣಿಸುತ್ತಿತ್ತು. ತೂಬಿನಕೆರೆ ಎಕ್ಸಿಟ್ ಪಾಯಿಂಟ್‌ನಲ್ಲಿ ಎಕ್ಸ್‌ಪ್ರೆಸ್‌‌‌ವೇನಿಂದ ಹೊರಬರಲು ಕಾರು ಚಾಲಕ ಚಂದ್ರರಾಜೇ ಅರಸ್ ವೇಗವನ್ನು ಕಡಿಮೆ ಮಾಡಿದ್ದರು. ಆದರೆ, ಎಕ್ಸಿಟ್ ಆಗುವಾಗ ಗೊಂದಲಕ್ಕೊಳಗಾಗಿ ಕಾರನ್ನು ಮತ್ತೆ ಎಕ್ಸ್‌ಪ್ರೆಸ್‌ ವೇಗೆ ತಿರುಗಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ KSRTC ಐರಾವತ ಬಸ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಒಳಗಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಯಾರು?

ಅಪಘಾತದಲ್ಲಿ ಮೃತಪಟ್ಟವರು ಬೆಂಗಳೂರಿನ ಜೆ.ಪಿ ನಗರದ ನಿವಾಸಿಗಳಾದ ಸತ್ಯಾನಂದರಾಜೇ ಅರಸ್ (51), ಅವರ ಪತ್ನಿ ನಿಶ್ಚಿತ (45), ಚಂದ್ರರಾಜೇ ಅರಸ್ (62) ಮತ್ತು ಚಂದ್ರರಾಜೇ ಅವರ ಪತ್ನಿ ಸುವೇದಿನಿ ರಾಣಿ (50). ಸತ್ಯಾನಂದರಾಜೇ ಅರಸ್ ಎಲೆಕ್ಟ್ರಿಕ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಚಂದ್ರರಾಜೇ ಅರಸ್ ಮತ್ತು ಸತ್ಯಾನಂದರಾಜೇ ಅರಸ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದರು. ಈ ಕುಟುಂಬವು ಸತ್ಯಾನಂದರಾಜೇ ಅವರ ಸೋದರ ಮಾವನ ಅಂತ್ಯ ಸಂಸ್ಕಾರಕ್ಕಾಗಿ ಪಿರಿಯಾಪಟ್ಟಣಕ್ಕೆ ತೆರಳುತ್ತಿತ್ತು.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಧ್ವಂಸವಾಗಿದ್ದು, ಮೃತದೇಹಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಎಕ್ಸಿಟ್ ಸಮಯದಲ್ಲಿ ಚಾಲಕನ ಗೊಂದಲ ಮತ್ತು ಬಸ್‌ನ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ತೆರೆದಾಗಿನಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅತಿವೇಗ, ರಸ್ತೆ ಶಿಸ್ತಿನ ಕೊರತೆ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಸೂಕ್ತ ಸೂಚನೆಗಳ ಕೊರತೆ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಈ ಘಟನೆಯು ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆ ಎತ್ತಿದೆ.

Exit mobile version