ಬೆಂಗಳೂರು: ಬೆಂಗಳೂರು ನಗರದ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಎಂದು ಹೆಸರಿಡುವ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು, ಮತ್ತು ಅನುಮೋದನೆ ದೊರೆತ ಬಳಿಕ ನಾಮಕರಣದ ದಿನಾಂಕವನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇಂದು ಬೆಂಗಳೂರಿನಲ್ಲಿ ನಡೆದ ಸೆಂಟ್ ಮೇರಿಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾನು ತುಂಬಾ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಪ್ರತಿವರ್ಷ ನಾನು ಮುಖ್ಯಮಂತ್ರಿಯಾಗಿ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಯಾಗುತ್ತೇನೆ. ಸೆಂಟ್ ಮೇರಿಯ ಜನ್ಮದಿನದ ಶುಭಾಶಯವನ್ನು ನಾಡಿನ ಜನತೆಗೆ ಕೋರುತ್ತೇನೆ,” ಎಂದರು.
ಸಮಾನತೆ ಮತ್ತು ಸಹಿಷ್ಣುತೆಗೆ ಒತ್ತು
ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಸಹಿಷ್ಣುತೆಯ ಮಹತ್ವವನ್ನು ಒತ್ತಿ ಹೇಳಿದರು. “ನಮ್ಮ ದೇಶದಲ್ಲಿ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕು. ನಮ್ಮ ಸರ್ಕಾರ ಎಲ್ಲ ಧರ್ಮಗಳನ್ನು ಗೌರವದಿಂದ ಕಾಣುತ್ತದೆ. ಜಾತಿ ರಹಿತ, ಮನುಷ್ಯತ್ವದ ಜೀವನವನ್ನು ಸಮಾಜ ಸುಧಾರಕರು ಒತ್ತಾಯಿಸಿದ್ದಾರೆ. ಏಸು ಕ್ರಿಸ್ತ, ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ್, ಮತ್ತು ಗಾಂಧೀಜಿ ಶಾಂತಿಯ ಸಂದೇಶವನ್ನೇ ನೀಡಿದ್ದಾರೆ. ಸೆಂಟ್ ಮೇರಿಯಂತೆ ನಾವೆಲ್ಲರೂ ಪ್ರೀತಿಯಿಂದ, ಶಾಂತಿಯಿಂದ ಬಾಳೋಣ,” ಎಂದು ಕರೆ ನೀಡಿದರು.
