ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಹೆಸರು ನಾಮಕರಣ: ಸಿಎಂ ಸಿದ್ದರಾಮಯ್ಯ ಭರವಸೆ

"ಬೆಂಗಳೂರಿನ ಮೆಟ್ರೋಗೆ ತಾಯಿ ಮೇರಿಯ ಹೆಸರು: ಕೇಂದ್ರಕ್ಕೆ ಶಿಫಾರಸ್ಸು"

111 (79)

ಬೆಂಗಳೂರು: ಬೆಂಗಳೂರು ನಗರದ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಎಂದು ಹೆಸರಿಡುವ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು, ಮತ್ತು ಅನುಮೋದನೆ ದೊರೆತ ಬಳಿಕ ನಾಮಕರಣದ ದಿನಾಂಕವನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಂದು ಬೆಂಗಳೂರಿನಲ್ಲಿ ನಡೆದ ಸೆಂಟ್ ಮೇರಿಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾನು ತುಂಬಾ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಪ್ರತಿವರ್ಷ ನಾನು ಮುಖ್ಯಮಂತ್ರಿಯಾಗಿ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಯಾಗುತ್ತೇನೆ. ಸೆಂಟ್ ಮೇರಿಯ ಜನ್ಮದಿನದ ಶುಭಾಶಯವನ್ನು ನಾಡಿನ ಜನತೆಗೆ ಕೋರುತ್ತೇನೆ,” ಎಂದರು.

ಸಿಎಂ ಮುಂದುವರೆದು, “ಸೆಂಟ್ ಮೇರಿಯನ್ನು ‘ಆರೋಗ್ಯ ಮಾತೆ’ ಎಂದು ಕರೆಯುತ್ತಾರೆ. ಜನರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆಕೆಯನ್ನು ಪ್ರಾರ್ಥಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಜನರು ಹರಕೆ ಹೊತ್ತು, ನಂತರ ತೀರಿಸುತ್ತಾರೆ. ನಾನೂ ಎಲ್ಲರಿಗೂ ಆರೋಗ್ಯದಾಯಕ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ,” ಎಂದು ತಿಳಿಸಿದರು.

ಸಮಾನತೆ ಮತ್ತು ಸಹಿಷ್ಣುತೆಗೆ ಒತ್ತು

ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಸಹಿಷ್ಣುತೆಯ ಮಹತ್ವವನ್ನು ಒತ್ತಿ ಹೇಳಿದರು. “ನಮ್ಮ ದೇಶದಲ್ಲಿ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕು. ನಮ್ಮ ಸರ್ಕಾರ ಎಲ್ಲ ಧರ್ಮಗಳನ್ನು ಗೌರವದಿಂದ ಕಾಣುತ್ತದೆ. ಜಾತಿ ರಹಿತ, ಮನುಷ್ಯತ್ವದ ಜೀವನವನ್ನು ಸಮಾಜ ಸುಧಾರಕರು ಒತ್ತಾಯಿಸಿದ್ದಾರೆ. ಏಸು ಕ್ರಿಸ್ತ, ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ್, ಮತ್ತು ಗಾಂಧೀಜಿ ಶಾಂತಿಯ ಸಂದೇಶವನ್ನೇ ನೀಡಿದ್ದಾರೆ. ಸೆಂಟ್ ಮೇರಿಯಂತೆ ನಾವೆಲ್ಲರೂ ಪ್ರೀತಿಯಿಂದ, ಶಾಂತಿಯಿಂದ ಬಾಳೋಣ,” ಎಂದು ಕರೆ ನೀಡಿದರು.

ಸರ್ಕಾರದ ಕೆಲವು ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, “ನಮ್ಮ ಸರ್ಕಾರ ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಎಲ್ಲ ಧರ್ಮ ಮತ್ತು ಪಕ್ಷದ ಬಡವರು ಈ ಯೋಜನೆಗಳ ಫಲಾನುಭವಿಗಳಾಗಬಹುದು,” ಎಂದರು.

ಅಲ್ಲದೆ, ಈಡಿಗ ಸಮುದಾಯಕ್ಕೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಭರವಸೆ ನೀಡಿದರು. ಭ್ರಷ್ಟಾಚಾರ ವಿರೋಧಿ ಮಸೂದೆಯ ಬಗ್ಗೆ ಆರ್ಚ್‌ಬಿಷಪ್ ಪೀಟರ್ ಮಚಾಡೋ ಅವರ ಮನವಿಯನ್ನು ಪರಿಗಣಿಸಿ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Exit mobile version