ಬೆಂಗಳೂರು, (ಜೂನ್ 20): ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಟ್ ಕಾಯಿನ್ ಹೂಡಿಕೆ ಹೆಸರಿನಲ್ಲಿ ನಡೆದ ರಾಬರಿ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಟ್ರೇಡಿಂಗ್ನಲ್ಲಿ ಭಾರಿ ಲಾಭ ಕೊಡಿಸುವುದಾಗಿ ನಂಬಿಸಿ ಕೇರಳ ಮೂಲದ ಯುವಕರನ್ನು ಕರೆಸಿ ಲಕ್ಷಾಂತರ ರೂಪಾಯಿ ದೋಚಲು ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಿಟ್ ಕಾಯಿನ್ ಹೂಡಿಕೆ ಹೆಸರಿನಲ್ಲಿ ರಾಬರಿ
ಕೇರಳದ ಯುವಕರನ್ನು ಬಿಟ್ ಕಾಯಿನ್ ಹೆಸರಿನಲ್ಲಿ ನಂಬಿಸಿ ರಾಬರಿ
ಹೋಟೆಲ್ ರೂಮ್ನಲ್ಲಿ 20 ಲಕ್ಷ ಹಣ ಎಣಿಸುವ ವೇಳೆ ದಾಳಿ
ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಪಾತ್ರದ ಬಗ್ಗೆ ತನಿಖೆ
ಮಾಹಿತಿಯ ಪ್ರಕಾರ, ಇಂಡೋನೇಷ್ಯಾದಲ್ಲಿ ಇರುವ ನವೀನ್ ಎಂಬಾತ ಕೇರಳದ ಯುವಕರಿಗೆ ಪರಿಚಯವಾಗಿದ್ದು, ಬಳಿಕ ಅವರನ್ನು ಶಾಹಿನ್ ಎಂಬಾತನಿಗೆ ಪರಿಚಯಿಸಿದ್ದ ಎನ್ನಲಾಗಿದೆ. ಶಾಹಿನ್ ಟ್ರೇಡಿಂಗ್ ಹಾಗೂ ಬಿಟ್ ಕಾಯಿನ್ ಹೂಡಿಕೆಯಲ್ಲಿ ಉತ್ತಮ ಲಾಭ ಸಿಗುತ್ತದೆ ಎಂದು ನಂಬಿಸಿ ಯುವಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ.
ಈ ಯೋಜನೆಯಂತೆ ಕೇರಳದಿಂದ ಜುನೀಶ್ ಬಾಬು, ಸಫೀರ್ ಸೇರಿದಂತೆ ಮೂವರು ಯುವಕರು ಬೆಂಗಳೂರಿಗೆ ಬಂದಿದ್ದರು. ರಾಬರಿ ನಡೆಸುವ ಮೊದಲು ಆರೋಪಿಗಳು ಎರಡು ಬಾರಿ ಭೇಟಿಯಾಗಿ ಯೋಜನೆ ರೂಪಿಸಿದ್ದರು. ಇಂದಿರಾನಗರ ಮತ್ತು ಎಚ್ಎಸ್ಆರ್ ಲೇಔಟ್ ಪ್ರದೇಶಗಳಲ್ಲಿ ಶಾಹಿನ್ ಅವರನ್ನು ಭೇಟಿ ಮಾಡಲಾಗಿತ್ತು.
ಮೊದಲಿಗೆ 10 ಲಕ್ಷ ರೂಪಾಯಿ ಹಣದೊಂದಿಗೆ ಬಂದಿದ್ದ ಅನೀಶ್ ಮತ್ತು ಸಫೀರ್ ಅವರನ್ನು ಶಾಹಿನ್ ಭೇಟಿ ಮಾಡಿದ್ದ. ಆದರೆ 10 ಲಕ್ಷ ಸಾಕಾಗುವುದಿಲ್ಲ, 20 ಲಕ್ಷ ರೂಪಾಯಿ ಇದ್ದರೆ ಮಾತ್ರ ದೊಡ್ಡ ಡೀಲ್ ಮಾಡಬಹುದು ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದ್ದ ಎಂದು ತಿಳಿದುಬಂದಿದೆ.
ನಂತರ ಶಾಹಿನ್ ಮತ್ತೆ ಕರೆ ಮಾಡಿ ಮಡಿವಾಳದ ವೆಸ್ಟ್ರನ್ ಕೀಯಾ ಹೋಟೆಲ್ಗೆ ಬರುವಂತೆ ತಿಳಿಸಿದ್ದ. ಹೋಟೆಲ್ನ ರೂಮ್ ನಂಬರ್ 412ರಲ್ಲಿ ಹಣದ ವ್ಯವಹಾರ ನಡೆಯುತ್ತಿದ್ದ ವೇಳೆ ರಾಬರಿ ನಡೆದಿದೆ. ಸಫೀರ್ ಹೊರಗಡೆ ಇದ್ದಾಗ, ರೂಮ್ ಒಳಗೆ 20 ಲಕ್ಷ ರೂಪಾಯಿ ಹಣ ಎಣಿಸಲಾಗುತ್ತಿತ್ತು.
ಅದೇ ಸಮಯದಲ್ಲಿ ಕುಪೇಂದ್ರ ರೆಡ್ಡಿ ಮತ್ತು ಆತನ ತಂಡ ರೂಮ್ಗೆ ನುಗ್ಗಿ ಹಣವನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಪಾತ್ರದ ಬಗ್ಗೆಯೂ ತನಿಖೆ ಮುಂದುವರೆದಿದೆ. ಸೂಪರ್ ಡೀಲ್ ಇದೆ ಎಂದು ಹೇಳಿ ಕುಪೇಂದ್ರ ರೆಡ್ಡಿಯನ್ನು ಕರೆತಂದಿದ್ದು ಮಹೇಶ್ ಕನಕಗಿರಿ ಎನ್ನಲಾಗಿದೆ.
ಆರೋಪಿಗಳು ಪೊಲೀಸ್ ಜೀಪ್ ಬಳಸಿ ಸ್ಥಳಕ್ಕೆ ಬಂದಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ. ಜೀಪ್ನಲ್ಲೇ ಕುಳಿತು ಇನ್ಸ್ಪೆಕ್ಟರ್ ಪ್ರಕರಣವನ್ನು ನಿರ್ವಹಿಸಿದ್ದ ಆರೋಪ ಕೂಡಾ ಕೇಳಿಬಂದಿದೆ.
ಸದ್ಯ ಕುಪೇಂದ್ರ ರೆಡ್ಡಿ ಮತ್ತು ಮಹೇಶ್ ಕನಕಗಿರಿ ಅವರನ್ನು ಮುಖಾಮುಖಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳ ಪಾತ್ರ ಮತ್ತು ಹಣದ ಹಾದಿ, ಪ್ರಕರಣದ ಹಿಂದೆ ಇರುವ ವ್ಯಕ್ತಿಗಳ ಕುರಿತು ತನಿಖೆ ಮುಂದುವರೆದಿದೆ.
