ಆನೇಕಲ್, ಫೆಬ್ರವರಿ 24: ಜೀವನದ ಹಾದಿಯಲ್ಲಿ ಎದುರಾಗುವ ಕಲ್ಲು-ಮುಳ್ಳುಗಳನ್ನು ಸೋಪಾನವಾಗಿಸಿಕೊಂಡು ಸಾಧನೆಯ ಶಿಖರಕ್ಕೇರಿದ ಅಪರೂಪದ ಕಥೆಯಿದು. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಎಂಬ ಪುಟ್ಟ ಹಳ್ಳಿಯ ಹೆಣ್ಣುಮಗಳು ನಾಗಿಣಿ ಎಲ್, ಇಂದು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಆಟೋ ಚಾಲಕನ ಮಗಳಾಗಿ ಬೆಳೆದು, ಹೂವು ಮಾರುತ್ತಲೇ ಓದಿ, ಇಂದು ನ್ಯಾಯದ ಸೀಟಿನಲ್ಲಿ ಕುಳಿತುಕೊಳ್ಳಲು ಸಜ್ಜಾಗಿರುವುದು ಕೇವಲ ಒಂದು ಕುಟುಂಬದ ಯಶಸ್ಸಲ್ಲ, ಬದಲಿಗೆ ಹೋರಾಟದ ಹಾದಿಯಲ್ಲಿರುವ ಕೋಟ್ಯಂತರ ಯುವಜನತೆಯ ಸ್ಪೂರ್ತಿಯ ಸಂಕೇತ.
ನಾಗಿಣಿ ಅವರ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಬರುವ ಆದಾಯದಲ್ಲಿ ಸಂಸಾರ ನಡೆಸುತ್ತಿದ್ದರೆ, ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದರೂ, ಮಗಳ ವಿದ್ಯಾಭ್ಯಾಸಕ್ಕೆ ಪೋಷಕರು ಎಂದೂ ಅಡ್ಡಿಯಾಗಲಿಲ್ಲ. ನಾಗಿಣಿ ಕೂಡ ಬಾಲ್ಯದಿಂದಲೇ ತಾಯಿಗೆ ಹೂವಿನ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಒಂದು ಕೈಯಲ್ಲಿ ಹೂವಿನ ಮಾರು ಇರುತ್ತಿದ್ದರೆ, ಕಣ್ಣುಗಳು ಪುಸ್ತಕದ ಸಾಲುಗಳ ಮೇಲೆ ಇರುತ್ತಿದ್ದವು. 1ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ.
ನನ್ನ ಮಗಳು ಉನ್ನತ ಅಧಿಕಾರಿಯಾಗಬೇಕು, ಸಮಾಜಕ್ಕೆ ನ್ಯಾಯ ನೀಡುವ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂಬುದು ತಂದೆ ಲಕ್ಷ್ಮಣ್ ಅವರ ದೊಡ್ಡ ಕನಸಾಗಿತ್ತು. ತಂದೆಯ ಈ ಆಸೆಯನ್ನು ನನಸು ಮಾಡುವುದನ್ನೇ ಗುರಿಯಾಗಿಸಿಕೊಂಡ ನಾಗಿಣಿ, ಡಾ. ರಾಮ್ ಮನೋಹರ್ ಲೋಹಿಯಾ ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು. ಆದರೆ, ನ್ಯಾಯಾಧೀಶರ ಪರೀಕ್ಷೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.
ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ನಾಗಿಣಿ ಅವರಿಗೆ ಕಡಿಮೆ ಅಂತರದಿಂದ ಯಶಸ್ಸು ಕೈತಪ್ಪಿತ್ತು. ಅನೇಕರು ಈ ಹಂತದಲ್ಲಿ ಧೃತಿಗೆಡುವುದು ಸಹಜ. ಆದರೆ, ನಾಗಿಣಿ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಪೋಷಕರು ಪಡುತ್ತಿರುವ ಕಷ್ಟವೇ ಅವರಿಗೆ ಸ್ಪೂರ್ತಿ ನೀಡುತ್ತಿತ್ತು. ಛಲಬಿಡದೆ ಮೂರನೇ ಬಾರಿಗೆ ಪರೀಕ್ಷೆ ಎದುರಿಸಿದ ಇವರು, ಈ ಬಾರಿ ರಾಜ್ಯಮಟ್ಟದಲ್ಲಿ 48ನೇ ರ್ಯಾಂಕ್ ಪಡೆಯುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ರಾಜ್ಯಕ್ಕೆ ಮಾದರಿಯಾದ ಆನೇಕಲ್ನ ಪುತ್ರಿ
ಆಟೋ ಚಾಲಕನ ಮಗಳು ಜಡ್ಜ್ ಆಗಿದ್ದಾಳೆ ಎಂಬ ಸುದ್ದಿ ಕೇಳಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. “ನನ್ನ ಈ ಸಾಧನೆಗೆ ಪೋಷಕರ ತ್ಯಾಗವೇ ಕಾರಣ. ಅವರ ಕಷ್ಟ ನೋಡುತ್ತಲೇ ನಾನು ಬೆಳೆದಿದ್ದರಿಂದ, ಅವರಿಗೆ ಗೌರವ ತರಬೇಕು ಎಂಬ ಹಠ ನನ್ನಲ್ಲಿತ್ತು ಎಂದು ನಾಗಿಣಿ ಹೇಳಿದ್ದಾರೆ.
ಬಡತನ ಎನ್ನುವುದು ಸಾಧನೆಗೆ ನೆಪವಾಗಬಾರದು ಎಂಬುದನ್ನು ನಾಗಿಣಿ ತೋರಿಸಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದರೂ, ಸಾಮಾನ್ಯ ಕುಟುಂಬದಿಂದ ಬಂದರೂ ಕಠಿಣ ಪರಿಶ್ರಮವಿದ್ದರೆ ಆಕಾಶವನ್ನೂ ತಲುಪಬಹುದು ಎಂಬುದಕ್ಕೆ ಇವರೇ ಜ್ವಲಂತ ಉದಾಹರಣೆ.