ಬೆಳಗಾವಿಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು: ತಪ್ಪಿದ ಭಾರೀ ಅನಾಹುತ

11 (100)

ಬೆಳಗಾವಿ, ಏಪ್ರಿಲ್ 15: ಬೆಳಗಾವಿ ರೈಲ್ವೆ ನಿಲ್ದಾಣದ ಸಮೀಪ ಗೂಡ್ಸ್ ರೈಲು ಹಳಿ ತಪ್ಪಿದ್ದು, ನಾಲ್ಕು ಗಂಟೆಗಳ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ರಾಣಿ ಚೆನ್ನಮ್ಮ ರೈಲು ಸಂಚರಿಸಬೇಕಿತ್ತು. ಆದರೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ರಾಣಿ ಚೆನ್ನಮ್ಮ ರೈಲು ನಿಲುಗಡೆಗೊಳಿಸಲಾಯಿತು. ಇದರಿಂದ ಭಾರೀ ದುರ್ಘಟನೆ ತಪ್ಪಿದಂತಾಯಿತು.

 ಗೂಡ್ಸ್ ರೈಲು ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ವೇಳೆ ಹಳಿ ತಪ್ಪಿ ಮೂರು ಬೋಗಿಗಳು ಪಕ್ಕಕ್ಕೆ ಜರುಗಿವೆ. ಈ ಘಟನೆಯು ಬೆಳಗಿನ ಜಾವ ಸಂಭವಿಸಿದ್ದು, ಆ ಸಮಯದಲ್ಲಿ ಅದೇ ಹಳಿಯಲ್ಲಿ ಬೆಂಗಳೂರಿನಿಂದ ಕೊಲ್ಹಾಪುರದತ್ತ ಸಾಗುತ್ತಿರುವ ಪ್ರಸಿದ್ಧ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಬರುತ್ತಿತ್ತು. ಆದರೆ ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ರೈಲನ್ನು ದೇಸೂರ ನಿಲ್ದಾಣದಲ್ಲಿ ನಿಲುಗಡೆ ಮಾಡಿದರು. ಅಧಿಕಾರಿಗಳ ಜಾಗೃತೆಯಿಂದ ಅಪಾಯ ತಪ್ಪಿದಂತಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಘಟನೆಯ ಪರಿಣಾಮವಾಗಿ ಕನಿಷ್ಠ ಐದು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿನಿಂದ ಕೊಲ್ಹಾಪುರಕ್ಕೆ ಸಾಗುವ ರಾಣಿ ಚೆನ್ನಮ್ಮ ರೈಲು, ಮುಂಬೈ-ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್, ಮುಂಬೈ-ಬೆಂಗಳೂರು ಚಾಲುಕ್ಯ ಎಕ್ಸ್‌ಪ್ರೆಸ್, ಗೋವಾ-ಮಿರಜ್ ಪ್ಯಾಸೆಂಜರ್ ರೈಲು ಮತ್ತು ಬೆಳಗಾವಿ–ಬೆಂಗಳೂರು–ಮೈಸೂರು ನಡುವಿನ ರೈಲು ಸಂಚಾರವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ರೈಲ್ವೆ ಅಧಿಕಾರಿಗಳು, ಪೊಲೀಸರು ಹಾಗೂ ತಾಂತ್ರಿಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಹಳಿ ತೆರವು ಕಾರ್ಯ ಆರಂಭಿಸಿದ್ದಾರೆ. ಹಳಿ ತಪ್ಪಿದ ಭಾಗದ ಸರಿಪಡಿಸುವ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಅಪಘಾತದ ಸ್ಥಳದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಹಳಿ ತೆರವು ಕಾರ್ಯವು ಅಂತಿಮ ಹಂತದಲ್ಲಿದ್ದು, ಕೆಲವೇ ಗಂಟೆಗಳಲ್ಲಿ ರೈಲು ಸಂಚಾರ ಪುನಃ ಸಹಜ ಸ್ಥಿತಿಗೆ ಬರಲಿದೆ. ಪ್ರಮುಖವಾಗಿ ಸ್ಥಗಿತಗೊಂಡ ರೈಲುಗಳು ಪುನಃ ತಮ್ಮ ನಿಯಮಿತ ಮಾರ್ಗದಲ್ಲಿ ಚಲಿಸಲು ಸಿದ್ಧವಾಗುತ್ತವೆ. ಈ ನಡುವೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆಗಳನ್ನೂ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version