ಬೆಳಗಾವಿ ತಾಲ್ಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ತೀವ್ರ ದುಃಖಕ್ಕೆ ಕಾರಣವಾದ ಘಟನೆ ನಡೆದಿದೆ. ಕೇವಲ ಎರಡು ಸಿಗರೇಟ್ ಮತ್ತು ವಾಟರ್ ಬಾಟಲ್ಗೆ ಹಣ ಕೊಡದಿದ್ದಕ್ಕೆ ಪಾನ್ ಶಾಪ್ ಮಾಲೀಕನನ್ನು ಯುವಕರು ಕೊಚ್ಚಿ ಕೊಂದಿದ್ದಾರೆ. ಈ ದುರಂತ ಘಟನೆಯಲ್ಲಿ 48 ವರ್ಷದ ಯಲ್ಲಪ್ಪ ನಾಯಕ್ ಸಾವನ್ನಪ್ಪಿದ್ದಾರೆ.
ರಾತ್ರಿ ಜಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದ ನಾಲ್ವರು ಯುವಕರು ಘೋಡಕೆನಟ್ಟಿ ಗ್ರಾಮದಲ್ಲಿರುವ ಯಲ್ಲಪ್ಪ ನಾಯಕ್ ಅವರ ಪಾನ್ ಶಾಪ್ ಬಳಿ ನಿಂತು ಎರಡು ಸಿಗರೇಟ್ ಮತ್ತು ಒಂದು ವಾಟರ್ ಬಾಟಲ್ ತೆಗೆದುಕೊಂಡರು. ಆದರೆ ಹಣ ಕೊಡದೆ ಹೋಗುತ್ತಿದ್ದಾಗ ಯಲ್ಲಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ರೇಗಿದ ಯುವಕರು ಅವಾಚ್ಯ ಭಾಷೆಯಲ್ಲಿ ನಿಂದಿಸಿ, ಯಲ್ಲಪ್ಪನ ಮೇಲೆ ತೀವ್ರ ಹಲ್ಲೆ ನಡೆಸಿದರು.
ಚಾಕು, ಕೊಲು, ಕಲ್ಲುಗಳಿಂದ ಹಲ್ಲೆ ನಡೆಸಿದ ನಂತರ ಗಂಭೀರ ಗಾಯಗೊಂಡ ಯಲ್ಲಪ್ಪನನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದ ಕುಟುಂಬಸ್ಥರು ಆಕ್ರಂದನ ಮಾಡುತ್ತಿದ್ದಾರೆ.
ಪೊಲೀಸ್ ಕ್ರಮ :
ಕಾಕತಿ ಪೊಲೀಸ್ ಠಾಣೆಯ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು: ಪ್ರಜ್ವಲ್ ಪಾಟೀಲ್ (22), ನಿಖಿಲ್ ಚೌಗಲೆ (22), ವಿವೇಕ್ ಚೌಗಲೆ, ಶ್ರೀಧರ್ ಪಾಟೀಲ್ ಆರೋಪಿಗಳ ವಿರುದ್ಧ ಕೊಲೆ , ಹಲ್ಲೆ ಮತ್ತು ಇತರ ಸಂಬಂಧಿತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಘಟನೆಯು ಸಣ್ಣ ವಿಷಯಕ್ಕೆ ದೊಡ್ಡ ಹಿಂಸಾಚಾರಕ್ಕೆ ತಿರುಗುವ ರೀತಿಯನ್ನು ತೋರಿಸುತ್ತಿದ್ದು, ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಮೂಡಿಸಿದೆ.
