ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಮಹೇಶ್ ನಾಯ್ಕ್ ಎಂಬಾತನ ಪತ್ನಿ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಮಹೇಶ್ ನಾಯ್ಕ್ನನ್ನು ಕೊಲೆ ಮಾಡುವ ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಪ್ಲಾನ್ ಫೇಲ್ ಆಗಿ ತಪ್ಪಿಸಿಕೊಂಡ ಮಹೇಶ್ ಬದಲಿಗೆ ಅವನ ಅಣ್ಣ ವಸಂತ್ ನಾಯ್ಕ್ ಬರ್ಬರವಾಗಿ ಕೊಲೆಯಾಗಿದ್ದಾರೆ.
ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಅನೈತಿಕ ಸಂಬಂಧ ಇದ್ದು, ಇದರ ಬಗ್ಗೆ ಪ್ರಶ್ನಿಸಿದ ಮಹೇಶ್ ನಾಯ್ಕ್ನನ್ನು ತೆಗೆದುಹಾಕುವ ಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. ಸುಚಿತ್ರಾ, ಅವಳ ತಂದೆ ಲೋಕನಾಥ್ ಮತ್ತು ಕಮಲಾಕರ್ ಭಟ್ ಸೇರಿದಂತೆ ಕೆಲವರು ಈ ಕೊಲೆ ಪ್ಲಾನ್ನಲ್ಲಿ ಭಾಗಿಯಾಗಿದ್ದರು. ಗ್ಯಾಂಗ್ ಏಕಾಏಕಿ ಮಹೇಶ್ ಮೇಲೆ ಹಲ್ಲೆಗೆ ಮುಂದಾಗಿತ್ತು.
ಆದರೆ ತಮ್ಮನನ್ನು ಕಾಪಾಡಲು ಓಡೋಡಿ ಬಂದ ಅಣ್ಣ ವಸಂತ್ ನಾಯ್ಕ್ ಗಲಾಟೆಯಲ್ಲಿ ಸಿಲುಕಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಮಹೇಶ್ ನಾಯ್ಕ್ ಗಾಯಗೊಂಡು ತಪ್ಪಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆಯಲ್ಲಿ 24 ಗಂಟೆಗಳೊಳಗೆ ನಾಲ್ವರನ್ನು ಬಂಧಿಸಲಾಗಿದೆ. ಸುಚಿತ್ರಾ, ಅವಳ ತಂದೆ ಲೋಕನಾಥ್, ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಇನ್ನೊಬ್ಬರು. ಸಿದ್ದಾಪುರ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಅನೈತಿಕ ಸಂಬಂಧ ಮತ್ತು ಕೊಲೆ ಯೋಜನೆಯ ಹಿನ್ನೆಲೆಯನ್ನು ಆಳವಾಗಿ ಪರಿಶೀಲಿಸಲಾಗುತ್ತಿದೆ.
ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಜ್ಯೋತಿಷಿ ಕಮಲಾಕರ್ ಭಟ್ ಅವರಂತಹ ಖ್ಯಾತ ವ್ಯಕ್ತಿಯ ಮೇಲಿನ ಆರೋಪಗಳು ಗಂಭೀರ ಚರ್ಚೆಗೆ ಕಾರಣವಾಗಿವೆ.
