ಪ್ರೀ ವೆಡ್ಡಿಂಗ್ ಶೂಟ್ ಮುಗಿಸಿ ಮನೆಗೆ ಬರುವಾಗ ಭೀಕರ ಅಪಘಾತ: ಮದುವೆ ಆಗಬೇಕಿದ್ದ ಜೋಡಿ ದುರಂತ ಸಾ*ವು

Web 2025 12 08T085037.489

ಮದುವೆಗೆ ಕೇವಲ 13 ದಿನಗಳು ಬಾಕಿ ಇದ್ದಾಗ, ಸವಿನೆನಪಿಗಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮುಗಿಸಿ ಖುಷಿಯಿಂದ ಮನೆಗೆ ಮರಳುತ್ತಿದ್ದ ನವಜೋಡಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿ ಎಲ್ಲರನ್ನೂ ಬೆಚ್ಚಿ ಬಿಳಿಸಿದ್ದಾರೆ. ಈ ದುರಂತ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಂಡ್ರಾಳ-ವೆಂಕಟಗಿರಿ ಕ್ರಾಸ್ ಬಳಿ ನಡೆದಿದೆ.

ಹೊಸಪೇಟೆಯ ಪಂಪಾವನ ಮುನಿರಾಬಾದ್‌ನಲ್ಲಿ ಭಾನುವಾರ ಪ್ರೀ ವೆಡ್ಡಿಂಗ್ ಶೂಟ್ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಕರಿಯಪ್ಪ ಮಡಿವಾಳ (26, ಇರಕಲ್‌ಗಡ್ಡೆ ನಿವಾಸಿ) ಮತ್ತು ಕವಿತಾ ಪವಾಡೆಪ್ಪ ಮಡಿವಾಳ (19, ಕಾರಟಗಿ ತಾಲೂಕು ಮುಷ್ಠೂರು ನಿವಾಸಿ) ಇಬ್ಬರನ್ನೂ ಕಲ್ಲು ಹೊತ್ತೊಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಭೀಕರ ಡಿಕ್ಕಿಯಿಂದ ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಕರಿಯಪ್ಪ ಮತ್ತು ಕವಿತಾ ಅವರ ಮದುವೆ ಇದೇ ತಿಂಗಳು ಡಿಸೆಂಬರ್ 21 ರಂದು ಭರ್ಜರಿ ಸಮಾರಂಭದೊಂದಿಗೆ ನಡೆಯಬೇಕಿತ್ತು. ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಕುಟುಂಬಸ್ಥರು, ಸ್ನೇಹಿತರು, ಹೆಣ್ಣು-ಗಂಡಿನ ಮನೆಯವರು ಎಲ್ಲರೂ ಖುಷಿಯ ಕ್ಷಣಕ್ಕಾಗಿ ಕಾಯುತ್ತಿದ್ದರು. ಆದರೆ ಒಂದೇ ಕ್ಷಣದಲ್ಲಿ ಎಲ್ಲಾ ಕನಸುಗಳು ಛಿದ್ರವಾದವು.

ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಗಂಗಾವತಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅತಿವೇಗ ಮತ್ತು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಕರಿಯಪ್ಪ ಯುವ ರೈತನಾಗಿದ್ದು, ಕವಿತಾ ಇತ್ತೀಚೆಗೆ ಪದವಿ ಪೂರೈಸಿದ್ದಳು. ಇಬ್ಬರೂ ಪ್ರೇಮ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಫೋಟೋಶೂಟ್‌ನಲ್ಲಿ ತೆಗೆದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆ ಖುಷಿಯ ಚಿತ್ರಗಳನ್ನು ನೋಡಿ ಎಲ್ಲರ ಕಣ್ಣಂಚಿಗೂ ನೀರು ತರಿಸುತ್ತಿದೆ.

ಈ ದುರಂತ ಸುದ್ದಿ ತಿಳಿದ ತಕ್ಷಣ ಇಬ್ಬರ ಮನೆಯಲ್ಲಿ ಅಳುವಿನ ಆಂತರ್ಯ ಮನೆ ಮಾಡಿದೆ. ಸಂಬಂಧಿಕರು, ಗ್ರಾಮಸ್ಥರು, ಸ್ನೇಹಿತರು ದಿಗ್ಭ್ರಮೆಗೊಂಡಿದ್ದಾರೆ. “ಇನ್ನೇನು ಮದುವೆ ಮನೆ ತುಂಬಾ ಜನ, ಖುಷಿ-ಹರ್ಷ… ಇದೇನಾಯ್ತು ದೇವರೇ?” ಎಂದು ಕುಟುಂಬದವರು ಗೋಳಾಡುತ್ತಿದ್ದಾರೆ.

ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿ ಮರಳುತ್ತಿದ್ದ ನವಜೋಡಿ ಸಾವು ಎಂಬ ದುಃಖದ ಸುದ್ದಿ ಸಾಮಾಜಿಕಲ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ನೆಟ್ಟಿಗರು “ಓಂ ಶಾಂತಿ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Exit mobile version