ಮದುವೆ ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ

Untitled design 2026 03 02T201654.631

ತೆಲುಗು ಚಿತ್ರರಂಗದ ಮೆಚ್ಚುಗೆಯ ಜೋಡಿ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಮದುವೆಯ ಸಂಭ್ರಮದ ನಡುವೆ ಮಹತ್ವದ ಘೋಷಣೆ ಮಾಡಿದ್ದಾರೆ. ಮದುವೆಯ ಬಳಿಕ ಮೊದಲ ಬಾರಿಗೆ ವಿಜಯ್ ತಮ್ಮ ಹುಟ್ಟೂರು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಬಲ್ಮೂರ್ ಮಂಡಲದ ತುಮ್ಮನ್‌ಪೇಟಿಗೆ ಭೇಟಿ ನೀಡಿದ್ದು, ಈ ವೇಳೆ ವಿಜಯ್ ಅವರು ತಮ್ಮ ದೇವರಕೊಂಡ ಫೌಂಡೇಷನ್ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವುದಾಗಿ ಅವರು ಘೋಷಿಸಿದರು.

ವಿಜಯ್ ದೇವರಕೊಂಡ ಹುಟ್ಟೂರಿನಲ್ಲಿ ಹೊಸದಾಗಿ ನಿರ್ಮಿಸಿದ ತೋಟದ ಮನೆಯಲ್ಲಿ ನವ ದಂಪತಿ ಸತ್ಯನಾರಾಯಣ ಪೂಜೆ ನೆರವೇರಿಸಿದರು. ತುಳಸಿ ಪೂಜೆ ಹಾಗೂ ಸತ್ಯನಾರಾಯಣ ವ್ರತದಲ್ಲಿ ಭಾಗಿಯಾದ ವಿಜಯ್-ರಶ್ಮಿಕಾ ಸಂಪ್ರದಾಯಬದ್ಧ ವೇಷಭೂಷಣದಲ್ಲಿ ಗಮನ ಸೆಳೆದರು. ಮದುವೆಯ ನಂತರ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಬಂದ ರಶ್ಮಿಕಾಗ ಅವರನ್ನು ಗ್ರಾಮಸ್ಥರು ಆತ್ಮೀಯ ಸ್ವಾಗತ ಕೋರಿದರು. ಕುಟುಂಬದವರು, ಬಂಧುಗಳು, ಊರಿನ ಹಿರಿಯರು ಹಾಗೂ ಅಭಿಮಾನಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡು ದಂಪತಿಗಳಿಗೆ ಆಶೀರ್ವಾದ ನೀಡಿದರು.

ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಹ ಹಾಜರಿದ್ದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಊರಿನ ಜನರಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ದಂಪತಿ ಗ್ರಾಮಸ್ಥರೊಂದಿಗೆ ಸಂಭ್ರಮ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ದೇವರಕೊಂಡ, ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. “ಈ ನೆಲ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಬೆಳೆದದ್ದು ಈ ಊರಿನಲ್ಲಿ. ನನ್ನ ಯಶಸ್ಸಿಗೆ ಈ ನೆಲದ ಆಶೀರ್ವಾದವೇ ಕಾರಣ,” ಎಂದು ಭಾವುಕರಾದರು. ಇದೇ ಸಂದರ್ಭದಲ್ಲಿ ಅವರು ಮಹತ್ವದ ಘೋಷಣೆ ಮಾಡಿದರು.

ವಿಜಯ್ ಸ್ಥಾಪಿಸಿರುವ ದೇವರಕೊಂಡ ಫೌಂಡೇಷನ್ ಮೂಲಕ ಅಚಂಪೇಟ್ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಶಾಲೆಗಳ 9 ಮತ್ತು 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುವುದು ಎಂದು ಘೋಷಿಸಿದರು. ಪ್ರತಿ ಶಾಲೆಯಲ್ಲೂ ಫಸ್ಟ್ ರ್ಯಾಂಕ್ ಹಾಗೂ ಸೆಕೆಂಡ್ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

“ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರತಿಭೆ ಇದೆ, ಆದರೆ ಅವಕಾಶಗಳ ಕೊರತೆ ಇದೆ. ಅವರ ಕನಸುಗಳಿಗೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿ,” ಎಂದು ವಿಜಯ್ ಹೇಳಿದರು.

ರಶ್ಮಿಕಾ ಮಂದಣ್ಣ ಕೂಡ ಮಾತನಾಡಿ, ಶಿಕ್ಷಣವೇ ಬದುಕಿನ ದಿಕ್ಕು ತೋರಿಸುವ ದೀಪ ಎಂದು ಹೇಳಿದರು. “ನಾವು ಪಡೆದ ಪ್ರೀತಿ ಮತ್ತು ಆಶೀರ್ವಾದಕ್ಕೆ ಪ್ರತಿಯಾಗಿ ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ,” ಎಂದು ಅವರು ಹೇಳಿದರು.

Exit mobile version