ವಿಜಯ್ ದೇವರಕೊಂಡ ಕಾರು ಅಪಘಾತ..! ಪ್ರಾಣಾಪಾಯದಿಂದ ಪಾರಾದ ರಶ್ಮಿಕಾ ಭಾವಿ ಪತಿ

Untitled design 2025 10 06t215727.018

ಹೈದರಾಬಾದ್: ಟಾಲಿವುಡ್ ಯಂಗ್ ಟೈಗರ್ ಎಂದೇ ಖ್ಯಾತರಾದ ನಟ ವಿಜಯ್ ದೇವರಕೊಂಡ ಅವರ ಕಾರು ಸೋಮವಾರ (ಅ.6) ರಾತ್ರಿ ಗದ್ವಾಲ್ ಜಿಲ್ಲೆಯಲ್ಲಿ ಅಪಘಾತಕ್ಕೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ, ವರಸಿದ್ಧಿ ವಿನಾಯಕ ಕಾಟನ್ ಮಿಲ್ ಸಮೀಪ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಅಪಘಾತದಲ್ಲಿ ವಿಜಯ್ ದೇವರಕೊಂಡ ಹಾಗೂ ಅವರ ಸಹಚರರಿಗೆ ಯಾವುದೇ ಪ್ರಾಣಪಾಯವಿಲ್ಲ.

ವಿಜಯ್ ದೇವರಕೊಂಡ ಅವರು ಇಂದು ಪುಟ್ಟಪರ್ತಿಗೆ ಭೇಟಿ ನೀಡಿದ್ದರು. ಪುಟ್ಟಪರ್ತಿಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿಜಯ್ ಅವರು ಸತ್ಯ ಸಾಯಿ ಬಾಬಾ ಸಮಾಧಿಯಲ್ಲಿ ನಮಸ್ಕರಿಸಿ ಆಶೀರ್ವಾದ ಪಡೆದು ಹೈದರಾಬಾದ್‌ಗೆ ಹಿಂದಿರುಗುತ್ತಿದ್ದರು. ಗದ್ವಾಲ್ ಜಿಲ್ಲೆಯ ಉಂಡವಳ್ಳಿ ಪ್ರದೇಶದಲ್ಲಿ ಅವರ ವಾಹನ ಅಪಘಾತಕ್ಕೀಡಾಯಿತು.

ಅಪಘಾತದ ಸಮಯದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಅವರ ಸಹಾಯಕ ರವಿಕಾಂತ್ ಯಾದವ್ ಮತ್ತು ಕಾರಿನ ಚಾಲಕ ಶ್ರೀಕಾಂತ್ ಪ್ರಯಾಣಿಸುತ್ತಿದ್ದರು. ಮೂಲಗಳ ಪ್ರಕಾರ ಎದುರು ದಿಕ್ಕಿನಿಂದ ಬರುತ್ತಿದ್ದ ಒಂದು ಟ್ರಕ್ ಹಠಾತ್ ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ, ವಿಜಯ್ ದೇವರಕೊಂಡ ಅವರ ಕಾರು ಮುಂದಿದ್ದ ಇನ್ನೊಂದು ಕಾರನ್ನು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹೀಗಾಗಿ ವಿಜಯ್ ದೇವರಕೊಂಡ ಅವರ ಕಾರು ಹಾನಿಯಾಗಿದೆ.

ಘಟನೆಯ ನಂತರ, ಕಾರಿನ ಚಾಲಕ ಶ್ರೀಕಾಂತ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧವಾಗಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಅಪಘಾತದ ನಂತರ ವಿಜಯ್ ದೇವರಕೊಂಡ ಬೇರೊಂದು ವಾಹನದಲ್ಲಿ ಹೈದರಾಬಾದ್‌ಗೆ ಸುರಕ್ಷಿತವಾಗಿ ತೆರಳಿದ್ದಾರೆ.

Exit mobile version