ನಟ ಧನ್ವೀರ್ ಗೌಡ ಅಭಿನಯದ ‘ವಾಮನ’ ಸಿನಿಮಾ ಏಪ್ರಿಲ್ 10, ರಂದು ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಈ ಚಿತ್ರದ ಪ್ರೀಮಿಯರ್ ನೋಡಲು ನಟ ದರ್ಶನ್ ಹಾಜರಾಗಿದ್ದು, ಇಂದು ‘ವಾಮನ’ ಸಿನಿಮಾ ವೀಕ್ಷಿಸಿದ್ದಾರೆ. ದರ್ಶನ್, ತಮ್ಮ ಆಪ್ತ ಶಿಷ್ಯ ಧನ್ವೀರ್ ಚಿತ್ರಕ್ಕೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ.
ದರ್ಶನ್ ಅವರು ಈ ಹಿಂದೆ ‘ವಾಮನ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಧನ್ವೀರ್ ಅವರ ವಿಭಿನ್ನ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ. ಅವರ ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ‘ವಾಮನ’ ನೋಡುತ್ತೇವೆ ಎಂದು ದರ್ಶನ್ ಹೇಳಿದರು.
‘ವಾಮನ’ ಚಿತ್ರದಲ್ಲಿ ಧನ್ವೀರ್ ಗೌಡನ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಸಂಪತ್ ರಾಜ್, ಅಚ್ಯುತ್ ಕುಮಾರ್, ತಾರಾ, ಅವಿನಾಶ್, ಆದಿತ್ಯ ಮೆನನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಶಂಕರ್ ರಮಣ ಎಸ್ ನಿರ್ದೇಶಿಸಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.
ಚಿತ್ರದ ಕಥೆ ತಾಯಿ-ಮಗನ ನಡುವಿನ ಸಂಬಂಧ ಮತ್ತು ಆಕ್ಷನ್ ದೃಶ್ಯಗಳ ಸುತ್ತ ತಿರುಗುತ್ತದೆ. ಈ ಹಿನ್ನೆಲೆಯಲ್ಲಿ, ದರ್ಶನ್ ತಮ್ಮ ಅನುಭವ ಹಂಚಿಕೊಂಡು, “ಮುದ್ದು ರಾಕ್ಷಸಿ ನನಗೆ ಇಷ್ಟವಾದ ಸಾಂಗ್. ನನ್ನ ಹೆಂಡತಿಗೂ ನಾನು ರೇಗಿಸುತ್ತಾ ಇರ್ತೀನಿ, ‘ಮುದ್ದು ರಾಕ್ಷಸಿ ಥರ ಇದ್ದೀಯಾ ಕಣೆ’ ಅಂತ,” ಎಂದು ಹೇಳಿದರು.
‘ವಾಮನ’ ಚಿತ್ರದ ಹಾಡುಗಳು, ವಿಶೇಷವಾಗಿ ‘ಮುದ್ದು ರಾಕ್ಷಸಿ’ ಮತ್ತು ‘ವಾ ವಾ ವಾಮನ’, ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಈ ಹಾಡುಗಳು ಮತ್ತು ಟ್ರೇಲರ್ ಮೂಲಕ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಟ ದರ್ಶನ್, ಜೈಲಿನಿಂದ ಬಿಡುಗಡೆಯಾದ ನಂತರ, ‘ರಾಯಲ್’ ಸಿನಿಮಾದ ಪ್ರೀಮಿಯರ್ಗೂ ಹಾಜರಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಈಗ ‘ವಾಮನ’ ಚಿತ್ರಕ್ಕೂ ತಮ್ಮ ಸಾಥ್ ನೀಡಿದ್ದಾರೆ.
