ಬಾಲಿವುಡ್ನ ಗಾಯಕ ಉದಿತ್ ನಾರಾಯಣ್ ಅವರ ವಿರುದ್ದ ಇದ್ದ ಹಳೆಯ ವಿವಾದವೊಂದು ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ಮೊದಲ ಪತ್ನಿ ರಂಜನಾ ನಾರಾಯಣ್, ಗಾಯಕ ಉದಿತ್ ನಾರಾಯಣ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಫೆಬ್ರವರಿ 10, 2026ರಂದು ರಂಜನಾ ನಾರಾಯಣ್ ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಉದಿತ್ ನಾರಾಯಣ್, ಅವರ ಸಹೋದರರಾದ ಸಂಜಯ್ ಕುಮಾರ್ ಝಾ, ಲಲಿತ್ ನಾರಾಯಣ್ ಝಾ ಮತ್ತು ಉದಿತ್ ಅವರ ಎರಡನೇ ಪತ್ನಿ ದೀಪಾ ನಾರಾಯಣ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ದೂರಿನಲ್ಲಿ, ತನ್ನ ಅರಿವಿಲ್ಲದಂತೆ ಮತ್ತು ಅನುಮತಿ ಇಲ್ಲದೆ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಗರ್ಭಕೋಶವನ್ನು (Uterus) ತೆಗೆಸಲಾಗಿದೆ ಎಂದು ತಿಳಿಸಿದ್ದಾರೆ.
ರಂಜನಾ ಅವರು ತಿಳಿಸಿದಂತೆ, ಈ ಘಟನೆ ನಡೆದದ್ದು 1996ರಲ್ಲಿ ದೆಹಲಿಯ ಆಸ್ಪತ್ರೆಯೊಂದರಲ್ಲಿ. ಆ ಸಮಯದಲ್ಲಿ ಉದಿತ್ ನಾರಾಯಣ್ ಅವರ ಎರಡನೇ ಪತ್ನಿ ದೀಪಾ ನಾರಾಯಣ್ ಕೂಡ ಅಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದಿತ್ ಮತ್ತು ರಂಜನಾ ಅವರ ಮದುವೆಯು ಡಿಸೆಂಬರ್ 7, 1984 ರಂದು ಹಿಂದೂ ಸಂಪ್ರದಾಯದಂತೆ ನಡೆದಿತ್ತು. ಆದರೆ, ವೃತ್ತಿಜೀವನಕ್ಕಾಗಿ ಮುಂಬೈಗೆ ಹೋದ ಉದಿತ್, ಅಲ್ಲಿ ದೀಪಾ ಅವರನ್ನು ಎರಡನೇ ಮದುವೆಯಾಗಿದ್ದರು.
2006ರಲ್ಲಿ ರಂಜನಾ ಅವರು ತಮ್ಮ ಹಕ್ಕನ್ನು ಕೇಳಲು ಮುಂಬೈಗೆ ಹೋದಾಗ, ಉದಿತ್ ಮತ್ತು ದೀಪಾ ಅವರಿಗೆ ಅವಮಾನಿಸಿ ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ. ನಂತರ ನೇಪಾಳದ ಅತ್ತೆ ಮನೆಯಿಂದಲೂ ಅವರನ್ನು ಹೊರದಬ್ಬಲಾಯಿತು. ಅಂದಿನಿಂದ ರಂಜನಾ ತವರು ಮನೆಯಲ್ಲೇ ವಾಸಿಸುತ್ತಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಮಧ್ಯಸ್ಥಿಕೆಯಲ್ಲಿ ಉದಿತ್ ಅವರು ರಂಜನಾ ತನ್ನ ಪತ್ನಿ ಎಂದು ಒಪ್ಪಿಕೊಂಡು, ಜೊತೆಯಲ್ಲಿ ಇರಿಸಿಕೊಳ್ಳುವ ಭರವಸೆ ನೀಡಿದ್ದರು ಆದರೆ ಅದರಂತೆ ಅವರು ನನ್ನನ್ನ ತಮ್ಮೊಟಿಗೆ ಇರಿಸೊಕೊಂಡಿದ್ದ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 2025 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಉದಿತ್ ನಾರಾಯಣ್, ಸಂಧಾನದ ಸಾಧ್ಯತೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರಂಜನಾ ಕೇವಲ ಹಣಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ. ಸದ್ಯ ಉದಿತ್ ಅವರು ರಂಜನಾ ಅವರಿಗೆ ತಿಂಗಳಿಗೆ 25,000 ರೂ. ಜೀವನಾಂಶ ಹಾಗೂ ಒಂದು ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಕೃಷಿ ಭೂಮಿಯನ್ನು ನೀಡಿದ್ದಾರೆ ಎಂದು ಮಹಿಳಾ ಆಯೋಗದ ವರದಿ ತಿಳಿಸಿದೆ.
ಈ ಪ್ರಕರಣವು ಸುಮಾರು 30 ವರ್ಷಗಳಷ್ಟು ಹಳೆಯದಾದ ಕಾರಣ, ಪೊಲೀಸರು ಅತ್ಯಂತ ಜಾಗರೂಕತೆಯಿಂದ ತನಿಖೆ ನಡೆಸುತ್ತಿದ್ದಾರೆ. ಹಳೆಯ ವೈದ್ಯಕೀಯ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
