ಟ್ರೇಲರ್‌‌‌‌‌‌‌‌‌‌‌‌‌‌‌‌‌‌‌‌‌ನಲ್ಲೇ ಕುತೂಹಲ ಮೂಡಿಸಿದ “ತಿಮ್ಮನ ಮೊಟ್ಟೆಗಳು”

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಜೂನ್ 27 ರಂದು ತೆರೆಗೆ

Web 2025 06 13t193743.984

ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ, ಆದರ್ಶ ಅಯ್ಯಂಗಾರ್ ನಿರ್ಮಾಣದ “ತಿಮ್ಮನ ಮೊಟ್ಟೆಗಳು” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ‌. ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಉರಗ ತಜ್ಞ ಗೌರಿ ಶಂಕರ್, ಪ್ರೆಸ್ ಕ್ಲಬ್ ಆಫ್ ಕೌನ್ಸಿಲ್ ನ ಅಧ್ಯಕ್ಷರಾದ ಶಿವಕುಮಾರ್ ನಾಗರನವಿಲೆ ಹಾಗೂ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಅತಿಥಿಗಳು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ನಾನು ಈ ಚಿತ್ರವನ್ನು ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ್ದೇನೆ. ಈಗಿನ ಪರಿಸ್ಥಿತಿಗೆ ತಕ್ಕಂತಹ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ‌. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಈಗ ದಿನಕ್ಕೊಂದು ಚಿತ್ರದಂತೆ ವರ್ಷಕ್ಕೆ 360 ಚಿತ್ರಗಳು ಬಿಡುಗಡೆಯಾಗುತ್ತಿದೆ. ಆದರಿಂದ ಚಿತ್ರಮಂದಿರಕ್ಕೆ ಜನರು ಬರುವ ಸಂಖ್ಯೆ ಕಡಿಮೆಯಾಗಿದೆ. ಚಿತ್ರ ಬಿಡುಗಡೆ ಸಂಖ್ಯೆ ಕಡಿಮೆಯಾಗಬೇಕು. ಆಗ ಇಂತಹ ಸದಭಿರುಚಿಯ ಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳಿಗೆ ಬರುತ್ತಾರೆ ಎಂದರು.

ADVERTISEMENT
ADVERTISEMENT

ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹಾಕಿದ್ದಾರೆ. ನಾನೇ ಬರೆದಿರುವ “ಕಾಡಿನ ನೆಂಟರು” ಕಥಾ ಸಂಕಲನದಿಂದ ಆಯ್ದ ಒಂದು ಕಥೆ “ತಿಮ್ಮನ ಮೊಟ್ಟೆಗಳು” ಸಿನಿಮಾವಾಗಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತು ಚಿತ್ರದ ಪ್ರಮುಖ ಕಥೆಯಿದ್ದು, ಮನುಷ್ಯನಲ್ಲಿರುವ ಹಾಗೆ ಪ್ರಾಣಿಗಳಲ್ಲೂ ಬಾಂಧವ್ಯವಿದೆ.

ಈತರಹದ ವಿಚಾರಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕರು ಇತ್ತೀಚೆಗೆ ಅಮೇರಿಕಾದ ಡಾಲಸ್ ನಲ್ಲಿ ಪ್ರಿಮೀಯರ್ ಶೋ ಸಹ ಆಯೋಜಿಸಿದ್ದರು. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಪ್ರಸಿದ್ದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಗಿರುವ ನಮ್ಮ ಚಿತ್ರ ಜೂನ್ 27 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ.

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಹಿರಿಯ ನಟ ಸುಚೇಂದ್ರ ಪ್ರಸಾದ್ ತಿಳಿಸಿದರು.

ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಘು ರಾಮನಕೊಪ್ಪ ಹಾಗೂ ಸಂಗೀತ ನಿರ್ದೇಶಕ ಹೇಮಂತ್ ಜೋಯಿಷ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version