ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ

Untitled design 2026 04 20T205224.129

ಪ್ರಸಿದ್ಧ್ ನಿರ್ದೇಶನದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸಿರುವ ಚಿತ್ರ “ಶೇರ್”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ. ಸುದರ್ಶನ್ ಸುಂದರರಾಜ್ ಈ ಚಿತ್ರ ನಿರ್ಮಾಣ‌ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಹೆಚ್.ಕುಮಾರ್ (ರಾಟೆ) ಜತೆಯಾಗಿದ್ದಾರೆ. ಕಿರಣ್ ರಾಜ್ , ಸುರೇಖಾ, ಕ್ರಿಶ್, ತನಿಷಾ ಕುಪ್ಪಂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪ್ರಸಿದ್ದ್, “ಶೇರ್”, ನನ್ನ ನಿರ್ದೇಶನದ ಮೂರನೇ ಚಿತ್ರ. ಕಿರಣ್ ರಾಜ್ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ನಾರ್ಮಲ್ ಕಥೆಯಾದರು, ಸಾಕಷ್ಟು ಕುತೂಹಲಕರ ಅಂಶಗಳು ಚಿತ್ರದಲ್ಲಿದೆ. ಅನಾಥ ಮಕ್ಕಳ ಜೀವನದಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.‌ ಈ ಚಿತ್ರದಲ್ಲಿ ನಿರ್ಮಾಪಕರ ಪುತ್ರ ಕ್ರಿಶ್ ರಾಡ್ರಿಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅವರ ಡೆಡಿಕೇಶನ್ ತುಂಬಾ ಇದೆ. ತನಿಷಾ ಕುಪ್ಪಂಡ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ನಮಗೆ ಎ ಪ್ರಮಾಣಪತ್ರ ನೀಡಿದೆ. ಚಿತ್ರ ಮೇ 15 ರಂದು ಬಿಡುಗಡೆಯಾಗಲಿದೆ ಎಂದರು.

ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದೇನೆ. “ದುನಿಯಾ” ಚಿತ್ರದಲ್ಲಿ ಯೋಗಿ ಅವರು ಮಾಡಿದಂತಹ ಪಾತ್ರವಿದು. ತುಂಬಾ ತಯಾರಿ ಮಾಡಿಕೊಂಡು ಅಭಿನಯಿಸಿರುವುದಾಗಿ ಹೇಳಿದರು ನಟ ಕ್ರಿಶ್. ನಿರ್ದೇಶಕ ಪ್ರಸಿದ್ದ್ ಅವರು ನನ್ನನ್ನು ಆಕ್ಷನ್ ಹೀರೋ ಆಗಿ ಪರಿಚಯ ಮಾಡಿಸಿದ್ದರು. ನಾನು ಈ ಚಿತ್ರದಲ್ಲಿ ಅನಾಥ ಹುಡುಗನಾಗಿ ನಟಿಸಿದ್ದೇನೆ. ಇದೊಂದು ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರ. ಎಲ್ಲರಿಗೂ ಈ ಚಿತ್ರ ಇಷ್ಟವಾಗಲಿದೆ ಎಂದು ನಟ ಕಿರಣ್ ರಾಜ್ ತಿಳಿಸಿದರು. ‌

ನಿರ್ಮಾಪಕ ಡಾಕ್ಟರ್ ಸುದರ್ಶನ್ ಸುಂದರ ರಾಜ್ ಮಾತನಾಡಿ, ವೃತ್ತಿಯಲ್ಲಿ ನಾನು ವಕೀಲ. ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಸೇರಿ ಮಗನಿಗಾಗಿ ಈ ಸಿನಿಮಾ ಮಾಡಿದ್ದೇವೆ. ಅವನಿಗಾಗಿ ಪ್ರೊಡಕ್ಷನ್ ಹೌಸ್ ಪ್ರಾರಂಭ ಮಾಡಿದೆವು. ಈಗ ಮೇ 15 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ. ಫಿಲಂಸ್ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದರು.

ನಾಯಕಿ ಸುರೇಖಾ ಮಾತನಾಡಿ ಇದು ಎರಡನೇ ಸಿನಿಮಾ. ಈ ಮೊದಲು “ಭರ್ಜರಿ ಗಂಡು” ಸಿನಿಮಾದಲ್ಲಿ ಅಭಿನಯಿಸಿದ್ದೆ. ಇದರಲ್ಲಿ ನನಗೆ ಎರಡು ಶೇಡ್ ಪಾತ್ರವಿದೆ ಎಂದರು.

ನಟಿ ತನಿಷಾ ಕುಪ್ಪಂಡ ಮಾತನಾಡಿ, ನಾನು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ಆನಂತರ “ಪೆನ್ ಡ್ರೈವ್” ಚಿತ್ರದಲ್ಲಿ ಮಾಡಿದ್ದೆ ಎಂದರು.

‌ಕಾರ್ಯಕಾರಿ ನಿರ್ಮಾಪಕ ರಾಟೆ ಕುಮಾರ್, ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ನಟ ಶೋಭನ್ ಚಿತ್ರದ ಕುರಿತಂತೆ ಮಾತನಾಡಿದರು. ವಿಜಯ್ ಗುಮ್ಮಿನೇನಿ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.‌‌‌‌ ಡಾಗ್ ಸತೀಶ್ , ಕಿರಣ್ ಕುಮಾರ್ (ಕಾಂಗ್ರೆಸ್ ಮುಖಂಡರು) ಹಾಗೂ ರಾಜೇಶ್ ಅತಿಥಿಗಳಾಗಿ ಆಗಮಿಸಿದ್ದರು.

Exit mobile version