‘ಸಂಜು & ಗೀತಾ’ ರೀ-ರಿಲೀಸ್ ಗುಂಗು.. ಶಿವಣ್ಣ ಸಾಥ್

ಬದಲಾದ ರೂಪದಲ್ಲಿ ಸಂಜು ವೆಡ್ಸ್ ಗೀತಾ 2 ಮತ್ತೆ ತೆರೆಗೆ

Befunky collage 2025 06 03t165120.641

ಶಿಡ್ಲಘಟ್ಟ ಟು ಸ್ವಿಟ್ಜರ್ಲೆಂಡ್‌‌ವರೆಗಿನ ಭಾವನಾತ್ಮಕ ರೇಷ್ಮೆ ನೂಲಿನ ಕಥೆಯನ್ನ ಬಿಚ್ಚಿಟ್ಟಿದ್ದ ಮೈನಾ ನಾಗಶೇಖರ್, ಅದೇ ಸಿನಿಮಾದ ಮತ್ತೊಮ್ಮೆ ರೀ- ರಿಲೀಸ್ ಮಾಡ್ತಿದ್ದಾರೆ. ಯೆಸ್.. ಬದಲಾದ ರೂಪದಲ್ಲಿ ಹೃದಯಸ್ಪರ್ಶಿ ದೃಶ್ಯಗಳೊಂದಿಗೆ ಮತ್ತೆ ಬರ್ತಿದೆ ಸಂಜು ವೆಡ್ಸ್ ಗೀತಾ-2. ಅದಕ್ಕೀಗ ಲಿವಿಂಗ್ ಲೆಜೆಂಡ್ ಶಿವಣ್ಣನ ಆಶೀರ್ವಾದ ಕೂಡ ಸಿಕ್ಕಿದೆ.

ಸಂಜು ವೆಡ್ಸ್ ಗೀತಾ-2.. ಈ ಹಿಂದೆ ಬಿಗ್ಗೆಸ್ಟ್ ಹಿಟ್ ಆಗಿ, ಮಕ್ಕಳಿಂದ ಮುದುಕರವರೆಗೂ ಎಲ್ಲರ ದಿಲ್ ದೋಚಿದ್ದ ಮೋಹಕತಾರೆ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಕಾಂಬೋನ ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್. ಅಂದಹಾಗೆ ಈ ಬಾರಿ ರಮ್ಯಾ ಬದಲಿಗೆ ಮತ್ತೊಬ್ಬ ರಾ ಕ್ವೀನ್ ರಚಿತಾ ರಾಮ್ ಲೀಡ್‌‌ನಲ್ಲಿ ಬಚ್ಚ ಹಚ್ಚಿದ್ದಾರೆ. ಡೈರೆಕ್ಟರ್ ಅದೇ ನಾಗಶೇಖರ್ ಇದ್ದರೂ ಸಹ, ಹಾಡುಗಳು ಹಾಗೂ ಮೇಕಿಂಗ್‌ನಿಂದ ಮೊದಲಿನ ಭಾಗದಷ್ಟು ನೋಡುಗರನ್ನ ಗ್ರಿಪ್ಪಿಂಗ್ ಆಗಿ ಹಿಡಿದು ಕೂರಿಸುವಲ್ಲಿ ಎಡವಿದ್ರು.

ADVERTISEMENT
ADVERTISEMENT

ಯೆಸ್.. ಜನವರಿ 17ಕ್ಕೆ ಈ ಸಿನಿಮಾ ಒಮ್ಮೆ ಗ್ರ್ಯಾಂಡ್ ಆಗಿ ರಿಲೀಸ್ ಆಯ್ತು. ಆದ್ರೆ ಬಿಡುಗಡೆಗೊಂಡ ಮೂರೇ ದಿನದಲ್ಲಿ ಥಿಯೇಟರ್‌ನಿಂದ ಎತ್ತಂಗಡಿ ಆಯ್ತು. ಸ್ವತಃ ಸಿನಿಮಾನ ಸ್ಟಾಪ್ ಮಾಡಿಸಿದ್ದೇ ಚಿತ್ರತಂಡ. ಅದಕ್ಕೆ ಕಾರಣ ಜನರಿಂದ ಬಂದ ಮಿಶ್ರ ಪ್ರತಿಕ್ರಿಯೆ. ಇದೀಗ ಸಿನಿಮಾಗೆ ಹೊಸ ರೂಪ ನೀಡಲಾಗಿದೆ. 21 ನಿಮಿಷಗಳ ಹೃದಯಸ್ಪರ್ಶಿ ಭಾವನಾತ್ಮಕ ಅಂಶಗಳಿರೋ ದೃಶ್ಯಗಳ ಜೋಡಣೆ ಆಗಿದೆ. ಹಾಗಾಗಿ ಸಿನಿಮಾ ಈಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿದೆ. ಇತ್ತೀಚೆಗೆ ಅದರ ರೀ- ರಿಲೀಸ್ ಇವೆಂಟ್ ಕೂಡ ನಡೆಸಿತ್ತು ಚಿತ್ರತಂಡ.

ಛಲವಾದಿ ಕುಮಾರ್ ನಿರ್ಮಾಣದ ಮಧುರ ಪ್ರೇಮ ದೃಶ್ಯಕಾವ್ಯವಾಗಿರೋ ಸಂಜು ವೆಡ್ಸ್ ಗೀತಾ-2ನಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಮನಸ್ಸಿಗೆ ಮುದ ನೀಡುವಂತಹ ಮ್ಯೂಸಿಕ್ ಇದೆ. ಕಣ್ಣು ತಂಪಾಗಿಸುವ ಕಲರ್‌ಫುಲ್ ದೃಶ್ಯಗಳಿವೆ. ಅದೇ ಕಾರಣಕ್ಕೆ ಚಿತ್ರತಂಡಕ್ಕೆ ಶಿವಣ್ಣ, ಎಸ್ ಮಹೇಂದರ್ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಸಾಥ್ ನೀಡಿದ್ದಾರೆ. ನಾಗಶೇಖರ್ ಚಿತ್ರಗಳ ಬಗ್ಗೆ ಕೊಂಡಾಡಿದ ಸ್ಟಾರ್ಸ್‌, ಸಂಜು ವೆಡ್ಸ್ ಗೀತಾ-2 ಬದಲಾದ ರೂಪದ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಅನಾರೋಗ್ಯದ ನಡುವೆಯೂ ನಿರ್ದೇಶಕ ನಾಗಶೇಖರ್ ಈ ಸಿನಿಮಾನ ರೀ-ರಿಲೀಸ್ ಮಾಡೋಕೆ ಮುಂದಾಗಿರೋದು ಅವರ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದ್ರ ಕೈಗನ್ನಡಿ ಆಗಿದೆ. ನಿರ್ಮಾಪಕ ಛಲವಾದಿ ಕುಮಾರ್ ಸಾಲ ಸೋಲ ಮಾಡಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದು, ಈ ಬಾರಿ ಮತ್ತಷ್ಟು ಕಾನ್ಫಿಡೆಂಟ್ ಆಗಿದ್ದಾರೆ.

ಒಟ್ಟಾರೆ ಇಷ್ಟು ಕಲರ್‌‌ಫುಲ್ ಆಗಿರೋ ಸಂಜು ವೆಡ್ಸ್ ಗೀತಾ-2 ಸಿನಿಮಾ ಈ ಬಾರಿ ಕಂಟೆಂಟ್ ಜೊತೆ ಮತ್ತೊಮ್ಮೆ ಇದೇ ಜೂನ್ 6ಕ್ಕೆ ಎಲ್ಲೆಡೆ ರೀ- ರಿಲೀಸ್ ಆಗ್ತಿದೆ. ಜನ ಈ ಬಾರಿ ಕೈ ಹಿಡೀತಾರಾ..? ನಿರ್ಮಾಪಕರು ಸೇಫ್ ಆಗ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ಆದ್ರೆ ಪ್ರಾಮಾಣಿಕ ಪ್ರಯತ್ನಗಳು ಸೋಲಬಾರದು. ಜನ ಕೈ ಹಿಡಿಯಬೇಕು. ಆಗಲೇ ಆ ತಂಡದಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ಹೊರಬರೋಕೆ ಸಾಧ್ಯ.

Exit mobile version