ಹೀರೋ ಸೆಂಟ್ರಿಕ್ ಆಗಿಬಿಟ್ಟಿದೆಯಾ ಸ್ಯಾಂಡಲ್‌ವುಡ್ ?

ಹೀರೋ ಮಾತೇ ಮಾತು.. ಅವರ ಮಾತೇ ಶಾಸನ..?

Untitled design (32)

ಸ್ಯಾಂಡಲ್‌ವುಡ್‌ನಲ್ಲಿ ಉತ್ತರಗಳೇ ಸಿಗದ ಸಾಕಷ್ಟು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿವೆ. ಕೇಳುವ ಧೈರ್ಯ ಯಾರಿಗೂ ಇಲ್ಲ. ಕಿರಾತಕ-2, ಬೆಲ್‌ಬಾಟಂ-2 ಯಾಕೆ ಆಗಲಿಲ್ಲ..? ಸುದೀಪ್-ಎನ್ ಕುಮಾರ್, ಧ್ರುವ- ಉದಯ್ ಕೆ ಮೆಹ್ತಾ ಸಮಸ್ಯೆಗಳಿಗೆ ಪರಿಹಾರ ಸಿಕ್ತಾ ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನನ್ನ ಈ ಇಬ್ಬರೂ ಮಕ್ಕಳಿಗೆ ಸಿಂಹಾಸನದ ಮೇಲೆ ಸಮಾನ ಹಕ್ಕಿದೆ. ಬೆಳೆದು, ದೊಡ್ಡವರಾದ ಬಳಿಕ ಯಾರು ವೀರನಾಗುತ್ತಾನೋ, ಯಾರು ದೇಶ ಪ್ರಜೆಗಳ ಮನ್ನಣೆಗೆ ಒಳಗಾಗುತ್ತಾನೋ ಅವನೇ ಮಹಾರಾಜ ಆಗ್ತಾನೆ. ಇದು ನನ್ನ ಮಾತು. ನನ್ನ ಮಾತೇ ಶಾಸನ.. ಇದು ಬಾಹುಬಲಿ ಮೊದಲ ಭಾಗದ ಚಿತ್ರದಲ್ಲಿ ರಮ್ಯಾಕೃಷ್ಣ ಮಾಸ್ ಡೈಲಾಗ್.

ADVERTISEMENT
ADVERTISEMENT

ಅಂದಹಾಗೆ ಇದನ್ನ ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ ಕನ್ನಡ ಚಿತ್ರರಂಗದ ಪರಿಸ್ಥಿತಿಗೆ ಈ ಡೈಲಾಗ್ ಹೇಳಿ ಬರೆಸಿದಂತಿದೆ. ಹೌದು.. ಸ್ಟಾರ್‌ಗಳು ಚಿತ್ರರಂಗದ ಒಂದು ಭಾಗ. ಆದ್ರೆ ಸ್ಟಾರ್ ಕಲಾವಿದರಿಂದಲೇ ಕನ್ನಡ ಚಿತ್ರರಂಗ ಅನ್ನುವಂತಾಗಿದೆ. ಅವರು ಹೇಳಿದ್ದೇ ರೆಮ್ಯೂನರೇಷನ್. ಅವರು ಹೇಳಿದ್ದೇ ಕಥೆ. ಅವರು ಹೇಳಿದ್ದೇ ಲೊಕೇಷನ್ಸ್. ಅವರು ಹೇಳಿದವರೇ ತಂತ್ರಜ್ಞರು ಹಾಗೂ ಕಲಾವಿದರು ಅಂದಂತಾಗಿದೆ. ಅವರ ಮಾತೇ ಶಾಸನ ಆಗಿಬಿಟ್ಟಿದೆ.

ಇದು ಎಲ್ಲಾ ಸ್ಟಾರ್ ನಟರು ಹೇಳದಿದ್ದರೂ ಬಹುತೇಕ ಮಂದಿ ಅದೇ ರೀತಿ ವರ್ತಿಸುತ್ತಾರಂತೆ. ಅದನ್ನ ಪ್ರಶ್ನಿಸುವ, ಖಂಡಿಸುವ ಅಥ್ವಾ ಪ್ರತಿಭಟಿಸುವ ಧೈರ್ಯ ಯಾರಿಗೂ ಇಲ್ಲದಿರೋದು ದುರಂತ. ಹೌದು.. ಕಥೆಗಾಗಿ ಕಲಾವಿದನ ಆಯ್ಕೆ ಆಗಬೇಕೇ ಹೊರತು, ಒಬ್ಬ ಕಲಾವಿದನಿಗಾಗಿಯೇ ಕಥೆ ಬರೆಯಲಾಗ್ತಿದೆ. ಅದರಲ್ಲಿ ಸಿಕ್ಕಾಪಟ್ಟೆ ಬಿಲ್ಡಪ್ಸ್, ಡ್ಯಾನ್ಸ್, ಫೈಟ್ಸ್ ಮಸ್ಟ್ ಇರಲೇಬೇಕು. ಕಥೆಗೆ ಅವಶ್ಯಕತೆ ಇಲ್ಲ ಅಂದ್ರೂ ಇಡಲೇಬೇಕು. ಅದೇ ಕಾರಣದಿಂ ಸಕ್ಸಸ್ ರೇಟ್ 10 ಟು 25 ಪರ್ಸೆಂಟ್‌ಗೆ ಇಳಿದಿದೆ.

ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದಲ್ಲಿ ಕಿರಾತಕ ಸಿನಿಮಾದ ಸೀಕ್ವೆಲ್ ಕಿರಾತಕ-2 ಶುರುವಾಗಿತ್ತು. ಒಂದಷ್ಟು ದಿನ ಶೂಟಿಂಗ್ ಕೂಡ ನಡೆದಿತ್ತು. ದಿಲ್‌ವಾಲಾ ಅನಿಲ್ ನಿರ್ದೇಶನಕ್ಕಾಗಿ ಯಶ್ ಕೆಜಿಎಫ್ ಮೊದಲ ಭಾಗ ಮುಗಿಸಿ, ಹೇರ್‌ ಕಟ್ ಮಾಡಿಸಿ, ಗಡ್ಡಕ್ಕೆ ಮುಕ್ತಿ ಕೂಡ ನೀಡಿದ್ರು. ಆ ಗೆಟಪ್ ಬದಲಿಸಿದ ವಿಡಿಯೋ ಕೂಡ ಪ್ರಮೋಷನ್ಸ್ ಮಾಡಿತ್ತು ಚಿತ್ರತಂಡ.

ಆದ್ರೆ ಎಲ್ಲರೂ ಅಂದುಕೊಂಡಂತೆ ಕಿರಾತಕ-2ನಲ್ಲಿ ಯಶ್ ಮುಂದುವರೆಯಲೇ ಇಲ್ಲ. ಅದಕ್ಕೆ ಕಾರಣ ಕೆಜಿಎಫ್ ಚಾಪ್ಟರ್-2. ಹೌದು, ಕೆಜಿಎಫ್‌-1ನಂತಹ ಬಿಗ್ ಸ್ಕೇಲ್ ಮೂವಿ ಮಾಡಿದ್ದ ಯಶ್, ನಂತ್ರ ಕಿರಾತಕ ಸೀಕ್ವೆಲ್ ಮಾಡಿದ್ರೆ ಪ್ಯಾನ್ ಇಂಡಿಯಾ ಫ್ಯಾನ್ಸ್ ಒಪ್ಪಲ್ಲ ಅಂತ ಅದನ್ನು ಅಲ್ಲಿಗೇ ಕೈಬಿಟ್ಟರು. ಆದ್ರೆ 2021ರಲ್ಲೇ ಕಿರಾತಕ ಸೀಕ್ವೆಲ್‌ಗಾಗಿ ನಿರ್ಮಾಪಕ ಜಯಣ್ಣ ಖರ್ಚು ಮಾಡಿದ್ದ 13 ಕೋಟಿ ರೂಪಾಯಿಗಳನ್ನು ಬಡ್ಡಿ ಸಮೇತ ರಿಟರ್ನ್‌ ಮಾಡಿದ್ರು ರಾಕಿಂಗ್ ಸ್ಟಾರ್ ಯಶ್.

ಬೆಲ್ ಬಾಟಂ.. 2019ರ ಬ್ಲಾಕ್ ಬಸ್ಟರ್ ಹಿಟ್ ಮೂವಿ. ಜಯತೀರ್ಥ ನಿರ್ದೇಶನದಲ್ಲಿ ಸಂತೋಷ್ ಕುಮಾರ್ ಕೆ.ಸಿ ನಿರ್ಮಾಣದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ರೆಟ್ರೋ ಸ್ಟೈಲ್‌‌ನಲ್ಲಿ ಡಿಟೆಕ್ಟೀವ್ ದಿವಾಕರ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾ ಬಳಿಕ ಬೆಲ್‌ಬಾಟಂ ಸೀಕ್ವೆಲ್‌‌ ಶುರುವಾಗಬೇಕಿತ್ತು. ಸಿನಿಮಾದ ಮುಹೂರ್ತ ಸಮಾರಂಭ ಚೆಂಡು ಹೂಗಳಿಂದ ಅದ್ಧೂರಿಯಾಗಿ ನೆರವೇರಿಸಲಾಯ್ತು.

ಆದ್ರೆ ಬೆಲ್‌ಬಾಟಂ-2 ಬರೀ ಪೂಜೆಗಷ್ಟೇ ಸೀಮಿತವಾಯ್ತು. ಕಾಂತಾರ ಸಿನಿಮಾದ ಸಲುವಾಗಿ ರಿಷಬ್ ಶೆಟ್ಟಿ ಬೆಲ್‌ಬಾಟಂ ಸೀಕ್ವೆಲ್‌‌ನ ಕೈಬಿಟ್ಟರು. ಕಾಂತಾರ ಬಳಿಕವಾದ್ರೂ ಬೆಲ್‌ಬಾಟಂ ಶೂಟಿಂಗ್ ಶುರುವಾಗುತ್ತಾ ಅಂದುಕೊಂಡ್ರೆ ಅದು ಕೂಡ ಆಗಲಿಲ್ಲ. ಕಾಂತಾರ ಪ್ರೀಕ್ವೆಲ್‌ ಕಿಕ್‌ಸ್ಟಾರ್ಟ್‌ ಮಾಡಿದ್ರು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಇಂದಿಗೂ ಪ್ರೊಡ್ಯೂಸರ್‌ಗೆ ತನ್ನ ಬೆಲ್‌ಬಾಟಂ-2 ಯಾವಾಗ ಶುರುವಾಗುತ್ತೆ ಅನ್ನೋದ್ರ ಬಗ್ಗೆ ಕ್ಲ್ಯಾರಿಟಿ ಇಲ್ಲ.

ಮುಕುಂದ ಮುರಾರಿ, ಮಾಣಿಕ್ಯ ಹಾಗೂ ರಂಗ ಎಸ್‌ಎಸ್‌ಎಲ್‌ಸಿ, ಕಾಶಿ ಫ್ರಮ್ ವಿಲೇಜ್ ಅಂತಹ ಹಿಟ್ ಸಿನಿಮಾಗಳನ್ನ ಕಿಚ್ಚ ಸುದೀಪ್‌ಗೆ ನಿರ್ಮಾಣ ಮಾಡಿರೋ ಎನ್ ಕುಮಾರ್, ಕೊನೆಗೆ ಅದೇ ಸ್ಟಾರ್ ನಟನಿಂದಾಗಿ ಕೋರ್ಟ್‌ ಮೆಟ್ಟಿಲೇರುವಂತಾಯಿತು. ಹಣಕಾಸಿವ ವ್ಯವಹಾರ ನಡೆಸಿದ್ದ ಕುಮಾರ್, ಸುದೀಪ್‌ರಿಂದ ಡೇಟ್ಸ್ ಪಡೆಯಲಾಗದೆ, ಹಣವೂ ಇಲ್ಲದೆ ಹೆಣಗಾಡಿದ್ದರಂತೆ. ಅದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ, ಕೆರಳಿದ ಸುದೀಪ್, ನಿರ್ಮಾಪಕ ಎನ್ ಕುಮಾರ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

ಅಡ್ವಾನ್ಸ್ ಪಡೆದು, ಡೇಟ್ಸ್ ನೀಡ್ತಿಲ್ಲ ಸುದೀಪ್ ಅಂತ ಆರೋಪಿಸಿದ್ದರು ಎನ್ ಕುಮಾರ್. ಇದು ಚಿತ್ರರಂಗದಲ್ಲಿ ಬಹುದೊಡ್ಡ ವಿವಾದವಾಗಿ ಸದ್ದು ಮಾಡಿತು. ಇಂದಿಗೂ ಇದಕ್ಕೊಂದು ತಾರ್ಕಿಕ ಅಂತ್ಯ ಸಿಕ್ತಾ ಅನ್ನೋದೇ ಗೊತ್ತಿಲ್ಲ. ಫಿಲ್ಮ್ ಚೇಂಬರ್‌‌ನಲ್ಲಿ ನೀತಿ ಸಂಹಿತೆ ಕಮಿಟಿ ಇದೆ. ಅಧ್ಯಕ್ಷರಿದ್ದಾರೆ. ನಿರ್ಮಾಪಕರ ಸಂಘವಿದೆ. ಆದಾಗ್ಯೂ ಯಾರಿಂದ ಯಾರಿಗೆ ಅನ್ಯಾಯವಾಗಿದೆ ಅನ್ನೋದು ಇಂದಿಗೂ ಗೊಂದಲದ ಗೂಡಾಗಿದೆ.

ನೂರು ಕೋಟಿ ಬಜೆಟ್‌‌ನಲ್ಲಿ ತಯಾರಾದ ಸಿನಿಮಾ ಮಾರ್ಟಿನ್. ಎಪಿ ಅರ್ಜುನ್ ನಿರ್ದೇಶನ, ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಧ್ರುವ ಸರ್ಜಾ ಲೀಡ್‌‌ನಲ್ಲಿ ನಟಿಸಿದ್ದರು. ಆದ್ರೆ ಬ್ಯಾಡ್ ಟೈಂ ಸಿನಿಮಾ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಹಾಕಿದ ಬಂಡವಾಳದಲ್ಲಿ ಕಾಲು ಭಾಗ ಕೂಡ ವಾಪಸ್ ನಿರ್ಮಾಪಕರ ಜೇಬಿಗೆ ಬರಲಿಲ್ಲ. ಒಳ್ಳೆಯ ಸಿನಿಮಾ ಮಾಡ್ಬೇಕು ಅಂತಲೇ ಎಲ್ಲರೂ ಎಫರ್ಟ್‌ ಹಾಕಿದ್ರು. ಆದ್ರೆ ಎಲ್ಲವೂ ಉಲ್ಟಾ ಪಲ್ಟಾ ಆಯ್ತು.

ಡೈರೆಕ್ಟರ್ ಮೇಲೆ ಪ್ರೊಡ್ಯೂಸರ್, ಪ್ರೊಡ್ಯೂಸರ್ ಮೇಲೆ ಡೈರೆಕ್ಟರ್ ಆರೋಪ, ಪ್ರತ್ಯಾರೋಪಗಳನ್ನ ಮಾಡ್ತಾ ಕೊನೆಗೆ ಅದರಲ್ಲಿ ಬಡವಾಗಿದ್ದು ಮಾತ್ರ ನಿರ್ಮಾಪಕ ಉದಯ್ ಕೆ ಮೆಹ್ತಾ. ಕೋಟ್ಯಂತರ ರೂಪಾಯಿ ಲಾಸ್ ಮಾಡಿಕೊಂಡ ಉದಯ್ ಮೆಹ್ತಾಗಾಗಿ ಧ್ರುವ ಕೂಡಲೇ ಡೇಟ್ಸ್ ನೀಡ್ತಾರೆ ಎನ್ನಲಾಗಿತ್ತು. ಅದಕ್ಕಾಗಿ ಶಿವಣ್ಣ ಹಾಗೂ ಕೆಪಿ ಶ್ರೀಕಾಂತ್ ಮಾತುಕತೆ ಕೂಡ ನಡೆಸಿದ್ರು ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಮಾರ್ಟಿನ್ ಬಳಿಕ ಕೆಡಿ ಸಿನಿಮಾದಲ್ಲಿ ಬ್ಯುಸಿಯಾದ್ರು ಧ್ರುವ. ಅಷ್ಟೇ ಅಲ್ಲ 2028ರ ವರೆಗೂ ಧ್ರುವ ಡೇಟ್ಸ್ ಇಲ್ಲ. ನರ್ತನ್, ರಾಜ್‌ಗುರು ಹಾಗೂ ರಾಘವೇಂದ್ರ ಹೆಗ್ಡೆ.. ಹೀಗೆ ಮೂವರು ಡೈರೆಕ್ಟರ್ಸ್‌ ಜೊತೆ ಮೂರು ಸಿನಿಮಾ ಕಮಿಟ್ ಆಗಿದ್ದಾರೆ ನಟ ಧ್ರುವ.

ಹೀಗೆ ಒಂದಾ ಎರಡಾ.. ಹತ್ತು ಹಲವು ಪ್ರಕರಣಗಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವು. ಅದ್ರೆ ಅವ್ಯಾವುಗಳಿಗೂ ಸೆಲ್ಯೂಷನ್ ಮಾತ್ರ ಸಿಗ್ತಿಲ್ಲ. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಹಾಗೂ ನೀಡುವಲ್ಲಿ ಚಿತ್ರರಂಗದ ವ್ಯವಸ್ಥೆ ನಿರಂತರವಾಗಿ ವಿಫಲವಾಗ್ತಿದೆ. ಇದು ನಿಜಕ್ಕೂ ಹೀಗೆಯೇ ಮುಂದುವರೆದರೆ ಕನ್ನಡ ಚಿತ್ರರಂಗ ದೊಡ್ಡ ಪ್ರಪಾತಕ್ಕೆ ಬೀಳಲಿದೆ. ಆಲ್‌ರೆಡಿ ಬಿದ್ದಾಗಿದೆ. ಅದನ್ನ ಮೇಲಕ್ಕೆ ಎತ್ತುವ ಕಾರ್ಯ ಒಬ್ಬರೂ ಮಾಡ್ತಿಲ್ಲ.

ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ. ಫಿಲ್ಮ್ ಚೇಂಬರ್‌‌ನಲ್ಲಿ ಗತ್ತಿನಿಂದ ಅಧಿಕಾರ ನಡೆಸುವ ಅಧ್ಯಕ್ಷರ ಕೊರತೆಯಿದೆ. ಸರ್ಕಾರದಿಂದ ಬೇಕಾದ್ದನ್ನು ಕೇಳಿ ಪಡೆಯುವಂತಹ ಒಬ್ಬೇ ಒಬ್ಬ ಪವರ್‌‌ಫುಲ್ ಲೀಡರ್ ಕನ್ನಡ ಚಿತ್ರರಂಗದ ಸಂಘ ಸಂಸ್ಥೆಗಳಲ್ಲಿಲ್ಲ. ಕೇಳಿದವರಿಗೆ ಸರ್ಕಾರದಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸೋ.. ಪವನ್ ಒಡೆಯರ್ ಅವರ ಬದಲಾಗು ನೀನು.. ಬದಲಾಯಿಸು ನೀನು ಸಾಂಗ್ ಕೊರೋನಾ ಸಮಯಕ್ಕೆ ಬಂತಾದ್ರೂ ಇಂದಿಗೆ ಪ್ರಸ್ತುತ ಅನಿಸ್ತಿದೆ. ನಿಜಕ್ಕೂ ಚಿತ್ರರಂಗ ಬದಲಾಗಬೇಕಿದೆ. ವ್ಯವಸ್ಥೆ ಗಟ್ಟಿಗೊಳ್ಳಬೇಕಿದೆ. ತೂಕದ ನಿರ್ಧಾರಗಳಿಂದ ಮಾತ್ರ ಈ ಸ್ಯಾಂಡಲ್‌ವುಡ್‌ ಏಳಿಗೆ ಸಾಧ್ಯವಾಗಲಿದೆ.

Exit mobile version