ಭಾರತೀಯ ಸಂಗೀತ ಲೋಕದ ಧ್ರುವತಾರೆ.. ಆರು ದಶಕಗಳ ಕಾಲ ಮಾಧುರ್ಯಭರಿತವಾಗಿ ಹಾಡುತ್ತಲೇ ಇದ್ದ ಗಾನ ಕೋಗಿಲೆ.. ದಕ್ಷಿಣದ ಹಾಡುಹಕ್ಕಿ.. ಸಾರಸತ್ವ ಲೋಕದ ಸ್ವರ ಸಾಮ್ರಾಜ್ಞಿ ಎಸ್ ಜಾನಕಿ ಅವರು ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಹುಟ್ಟಿದ್ದೆಲ್ಲೋ, ಬೆಳೆದದ್ದು ಮತ್ತೆಲ್ಲೋ.. ಆದ್ರೆ ಸಂಗೀತಪ್ರಿಯರ ಕಿವಿಗಳನ್ನ ತಂಪಾಗಿಸಿದ ಗಾನ ಮಾತೆ ಇನ್ನು ನೆನಪು ಮಾತ್ರ. ಇಷ್ಟಕ್ಕೂ ಜಾನಕಮ್ಮನ ಸಾರ್ಥಕ ಜೀವನ ಎಂಥದ್ದು..? ಅವರಿಗೆ ನಿಜಕ್ಕೂ ಏನಾಗಿತ್ತು..? ಮೈಸೂರಲ್ಲೇ ಕೊನೆಯುಸಿರೆಳೆಯಬೇಕು ಅನ್ನೋ ಕೊನೆ ಆಸೆ ಏಕೆ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.
- ಬರೋಬ್ಬರಿ 24 ಭಾಷೆ.. 48 ಸಾವಿರ ಗೀತೆಗಳ ಸ್ವರ ಸಾಮ್ರಾಜ್ಞಿ
- ಭಾಷೆ ಮೀರಿದ ಬಂಧ.. ಮೈಸೂರಿನ ಜೊತೆ ಋಣಾನುಬಂಧ..!
- ಮರಳಿ ಬಾರದೂರಿಗೆ ಹಸನ್ಮುಖಿಯಾಗಿ ಹೊರಟ ‘ಕೋಗಿಲೆ’
- ಗ್ಯಾರಂಟಿ ನ್ಯೂಸ್ನಲ್ಲಿ ಜಾನಕಮ್ಮನ ಕಂಪ್ಲೀಟ್ ಲೈಫ್ ಸ್ಟೋರಿ
ಯಾರೇ ಆಗಲಿ ಹುಟ್ಟಿದಾಗ ಅವ್ರಿಗೆ ಹೆಸರು ಅನ್ನೋದು ಇರಲ್ಲ. ಬರೀ ಉಸಿರಷ್ಟೇ ಇರುತ್ತೆ. ಆದ್ರೆ ಸತ್ತಾಗ ಹೆಸರು ಮಾತ್ರ ಇರುತ್ತೆ.. ಉಸಿರು ನಿಂತಿರುತ್ತೆ. ಹಾಗಾಗಿ ಬದುಕಿ, ಬಾಳಿದ ಜೀವನವನ್ನ ಎಷ್ಟು ಸಾರ್ಥಕಮಯಗೊಳಿಸುತ್ತೇವೆ ಅನ್ನೋದು ಮುಖ್ಯವಾಗುತ್ತೆ. ಸದ್ಯ ಅಂತಹ ಸಾರ್ಥಕ ಜೀವನ ಮುಗಿಸಿ, ಬಾರದೂರಿಗೆ ಪಯಣ ಬೆಳೆಸಿದ್ದಾರೆ ಭಾರತೀಯ ಚಿತ್ರರಂಗದ ಗಾನ ಕೋಗಿಲೆ ಎಸ್ ಜಾನಕಿ ಅಮ್ಮ. ಅವರ ಅಗಲಿಕೆ ಸಾರಸತ್ವ ಲೋಕವನ್ನ ಇನ್ನಿಲ್ಲದೆ ಕಾಡಿದ್ದು, ಸ್ವರಗಳೇ ದೇವಲೋಕದತ್ತ ಪಯಣ ಬೆಳೆಸಿದಂತಿದೆ.
88 ವರ್ಷದ ಹಿರಿಯ ಜೀವ ಎಸ್ ಜಾನಕಿ, ತಮ್ಮ ಇಡೀ ಜೀವಮಾನವನ್ನ ಸಂಗೀತಲೋಕಕ್ಕಾಗಿಯೇ ಮುಡಿಪಾಗಿಟ್ಟವರು. ಭಾರತೀಯ ಚಿತ್ರರಂಗದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಜಾನಕಮ್ಮ ಹಾಡು ಹಾಡದ ಭಾಷೆಯೇ ಇಲ್ಲ. ಹೌದು.. 20ಕ್ಕೂ ಅಧಿಕ ಭಾರತೀಯ ಭಾಷೆಗಳಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹಾಡುಗಳನ್ನ ಹಾಡಿಗ ಗರಿಮೆ ಅವರಿಗಿದೆ.
ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಡಗ, ಬೆಂಗಾಳಿ, ಕೊಂಕಣಿ ಸೇರಿದಂತೆ ಭಾರತದ ಪ್ರಮುಖ ಇಪ್ಪತ್ತು ಭಾಷೆಗಳ ಗಾನ ಮಾತೆ ಎಸ್ ಜಾನಕಿ. ಅಷ್ಟೇ ಅಲ್ಲ, ಇಂಗ್ಲಿಷ್, ಜಾಪನೀಸ್, ಜರ್ಮನ್, ಸಿಂಹಳ, ಲ್ಯಾಟಿನ್, ಅರೇಬಿಕ್ ಸೇರಿದಂತೆ ಹಲವಾರು ವಿದೇಶಿ ಭಾಷೆಗಳಲ್ಲೂ ಹಾಡಿದ ಕೀರ್ತಿ ಇವರಿಗೆ ಸಲ್ಲುತ್ತೆ. ಕ್ವೀನ್ ಆಫ್ ಎಕ್ಸ್ಪ್ರೆಷನ್ ಹಾಗೂ ಮಾಡ್ಯುಲೇಷನ್ ಅಂತಲೇ ಫೇಮಸ್ ಆಗಿರೋ ಇವರು ಸೌತ್ನ ಹಾಡುಹಕ್ಕಿ ಅಂದ್ರೆ ನೈಟಿಂಗೇಲ್ ಆಗಿ ರಾರಾಜಿಸಿದ್ರು.
ಸ್ವತಂತ್ರಪೂರ್ವ ಭಾರತದಲ್ಲಿ ಅಂದ್ರೆ 1938ರ ಏಪ್ರಿಲ್ 23ರಂದು ಆಂಧ್ರದ ಗುಂಟೂರು ಜಿಲ್ಲೆಯ ರೇಪಲ್ಲೇ ಅನ್ನೋ ಗ್ರಾಮದಲ್ಲಿ ಜನಿಸಿದ್ರು ಎಸ್ ಜಾನಕಿ. ತಂದೆ ಶ್ರೀರಾಮಮೂರ್ತಿ ಆಯುರ್ವೇದಿಕ್ ಡಾಕ್ಟರ್ ಕಮ್ ಟೀಚರ್ ಆಗಿದ್ರು. ಮೂರನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ ಜಾನಕಿ, 1956ರಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ರಿಂದ ಬಹುಮಾನ ಸ್ವೀಕರಿಸಿದ್ರು. ನಂತರ ಚೆನ್ನೈಗೆ ಬಂದ ಜಾನಕಿ ಅವರು ಲತಾ ಮಂಗೇಶ್ಕರ್ ಅವರ ರಸಿಕ್ ಬಲಮಾ ಗೀತೆಯನ್ನ ಹಾಡೋ ಮೂಲಕ ಪ್ರತಿಷ್ಟಿತ ಎವಿಎಂ ಸ್ಟುಡಿಯೋಸ್ ಕಾಂಟ್ರಾಕ್ಟ್ ಪಡೆದರು.
ಕಲೆಗೆ ಭಾಷೆಯ ಹಂಗಿಲ್ಲ. ಹಾಗಾಗಿ ಎಲ್ಲಾ ಚಿತ್ರರಂಗಗಳ ಜೊತೆ ಭಾಷೆಗಳನ್ನ ಮೀರಿದ ಬಂಧ, ಅನುಬಂಧ ಬೆಳೆಸಿದ್ರು ಜಾನಕಮ್ಮ. ಮಾತೃಭಾಷೆ ತೆಲುಗು ಆದ್ರೂ ಸಹ, ಕನ್ನಡವನ್ನ ಸುಲಲಿತವಾಗಿ ಬರೆದು, ಓದಿ, ಹಾಡಬಲ್ಲವರಾದ್ರು. ಅಕ್ಷರಶಃ ಕನ್ನಡತಿಯಂತೆ ಎಲ್ಲಾ ಕನ್ನಡಿಗರ ಮನೆ, ಮನ ಗೆದ್ದರು. ಕನ್ನಡ ಒಂದರಲ್ಲೇ 10 ಸಾವಿರಕ್ಕೂ ಅಧಿಕ ಗೀತೆಗಳನ್ನ ಹಾಡಿದ ಆಲ್ ಟೈಂ ರೆಕಾರ್ಡ್ ಮಾಡಿದ್ರು. ಅಷ್ಟೇ ಅಲ್ಲ, ಮೈಸೂರಿನ ಜೊತೆ ವಿಶೇಷ ಋಣಾನುಬಂಧ ಬೆಳೆಸಿಕೊಂಡರು. ತನ್ನ ಕೊನೆಯ ದಿನಗಳನ್ನ ಅರಮನೆ ನಗರಿ ಮೈಸೂರಲ್ಲೇ ಕಳೆಯಲು ನಿರ್ಧರಿಸಿ, ತನ್ನ ಉಸಿರು ಇದೇ ಕನ್ನಡ ಮಣ್ಣಲ್ಲಿ ಚೆಲ್ಲುವ ಇಂಗಿತ ವ್ಯಕ್ತಪಡಿಸಿದ್ರು. ಸತ್ತ ನಂತ್ರ ಇದೇ ಮೈಸೂರಲ್ಲಿ ಸಮಾಧಿ ಕಟ್ಟಬೇಕು ಅನ್ನೋದು ಕೂಡ ಅವ್ರ ಆಶಯವಾಗಿತ್ತು.
- ಅದೊಂದು ಸಾವು ಅರಗಿಸಿಕೊಳ್ಳಲು ಆಗಲೇ ಇಲ್ಲ ‘ಅಮ್ಮ’ನಿಗೆ
- ಮಗನ ಜೊತೆ ಸಹೋದರಿ ಸಾವು.. ಮರೆಯಲಾಗದ ನೋವು..!
ಹೈದ್ರಾಬಾದ್ನಲ್ಲಿರೋ ಮನೆಯನ್ನ ಮಾರಿ ಮೈಸೂರಲ್ಲೇ ಒಂದು ಸ್ವಂತ ಮನೆ ಕಟ್ಟಿಕೊಂಡು, ತನಗಿಷ್ಟವಾದ ಊರಲ್ಲಿ ಕೊನೆಯ ದಿನಗಳನ್ನ ಕಳೆಯಲು ಬಯಸಿದ್ರು ಜಾನಕಮ್ಮ. ಅದ್ರಂತೆ ಮೈಸೂರಿಗೆ ಶಿಫ್ಟ್ ಆಗಿ ಹೊರವಲಯದಲ್ಲೊಂದು ಗೆಸ್ಟ್ ಹೌಸ್ ಮಾಡಿಕೊಂಡಿದ್ರು. ಅದರಲ್ಲಿ ಮುದ್ದಿನ ಮಗ ಮುರಳಿಕೃಷ್ಣ ಜೊತೆ ವಾಸವಿದ್ದರು. ಮಗ-ಸೊಸೆ ಡಿವೋರ್ಸ್ ಪಡೆದಿದ್ದರಿಂದ ಭಾದಿತರಾಗಿದ್ದ ಜಾನಕಮ್ಮ, ಮಗ ಅನಾರೋಗ್ಯಕ್ಕೆ ತುತ್ತಾಗಿ 2026ರ ಜನವರಿಯಲ್ಲಿ ಇಹಲೋಕ ತ್ಯಜಿಸಿದಾಗ ಮತ್ತಷ್ಟು ಕುಗ್ಗಿ ಹೋದರು.
ಚೆನ್ನೈನಲ್ಲಿದ್ದ ಸಹೋದರಿಯ ಸಾವು ಹಾಗೂ ಮಗ ಮುರಳಿಕೃಷ್ಣನ ಅಗಲಿಕೆ ಜಾನಕಿಯವರಿಗೆ ಮಾನಸಿಕವಾಗಿ ಸಿಕ್ಕಾಪಟ್ಟೆ ನೋವುಂಟು ಮಾಡಿತ್ತು. ಅಲ್ಲದೆ, ಸೊಸೆ ಮೊಮ್ಮಗಳು ಬೆಂಗಳೂರಲ್ಲಿ ವಾಸವಿದ್ದರಿಂದ ಕೇರ್ ಟೇಕರ್ ಅಂತ ಬಂದಂತಹ ನವೀನ್ರನ್ನ ಸಾಕು ಮಗನಂತೆ ಟ್ರೀಟ್ ಮಾಡ್ತಿದ್ರು ಜಾನಕಮ್ಮ. ಇನ್ಫ್ಯಾಕ್ಟ್ ಸ್ವಂತ ತಾಯಿಯಂತೆ ನವೀನ್ ಅವರು ಜಾನಕಿ ಅವರ ಆರೈಕೆ ಮಾಡುತ್ತಾ, ಯೋಗ ಕ್ಷೇಮ ನೋಡಿಕೊಳ್ತಿದ್ರು. ಅವ್ರ ಸಹಾಯದಿಂದಲೇ ಕಾಲು ನೋವಿನ ಸಲುವಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಮೊನ್ನೆ.. ಅಂದ್ರೆ ಜುಲೈ 10ರ ಶುಕ್ರವಾರ ದಾಖಲಾಗ್ತಾರೆ. ಕಾಲಿನಲ್ಲಿ ಇನ್ಫೆಕ್ಷನ್ ಇದ್ದ ಕಾರಣ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಲಾರಂಭಿಸ್ತಾರೆ ವೈದ್ಯರು. ಆದ್ರೆ ಜುಲೈ 11ರ ಶನಿವಾರ ಸಂಜೆ 7.25ರ ಸರಿಸುಮಾರಿಗೆ ಹೃದಯಾಘಾತವಾಗಿ ಇಹಲೋಕ ತ್ಯಜಿಸುತ್ತಾರೆ ಎಸ್ ಜಾನಕಿ.
- ಸಾಕು ಮಗ ನವೀನ್ ಜೊತೆ ಮೈಸೂರಲ್ಲಿ ಜೀವನ
- 2 ಎಕರೆ ಜಮೀನು ಖರೀದಿ.. ಅಲ್ಲೇ ಅಂತ್ಯಕ್ರಿಯೆ..!
ಜಾನಕಮ್ಮನವರ ಕಟ್ಟಾಭಿಮಾನಿಯಾಗಿ ಬಂದ ನವೀನ್ ಅದ್ಯಾವ ಜನ್ಮದ ಅನುಬಂಧವೋ ಏನೋ.. ಜಾನಕಿ ಅವ್ರನ್ನ ಸ್ವಂತ ತಾಯಿಯಂತೆ ನೋಡಿಕೊಳ್ಳಲಾರಂಭಿಸ್ತಾರೆ. ಅದೇ ಕಾರಣಕ್ಕೆ ಮೈಸೂರಿನ ತನ್ನ ಫರ್ನಿಚರ್ ಅಂಗಡಿಗೆ ಜಾನಕಿ ಫರ್ನಿಚರ್ಸ್ ಅಂತಲೇ ಹೆಸರು ಕೂಡ ಇಡ್ತಾರೆ ನವೀನ್. ನವೀನ್ಗೆ ಪವನ್ ಅನ್ನೋ ಮತ್ತೊಬ್ಬ ಜಾನಕಮ್ಮನ ಅಭಿಮಾನಿ ಕೂಡ ಸಾಥ್ ನೀಡ್ತಾರೆ.
ಎಸ್ ಜಾನಕಿ ಅವ್ರ ಆಶಯದಂತೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಕಣಿಯನಹುಂಡಿಯಲ್ಲಿ ಸರ್ವೇ ನಂಬರ್ 156ರಲ್ಲಿ ಎರಡು ಎಕರೆ ಜಮೀನು ಕೂಡ ಖರೀದಿ ಮಾಡ್ತಾರೆ ನವೀನ್. ಜಾನಕಮ್ಮ ವಿಡಿಯೋ ಕಾಲ್ನಲ್ಲಿ ಆ ಜಾಗ ನೋಡಿ ಖರೀದಿಸಲು ಗ್ರೀನ್ ಸಿಗ್ನಲ್ ನೀಡಿದ್ರು ಅನ್ನೋದು ವಿಶೇಷ.
ಸದ್ಯ ಅದೇ ತೋಟದಲ್ಲಿ ಎಸ್ ಜಾನಕಿ ಅವ್ರ ಅಂತ್ಯಕ್ರಿಯೆ ನಡೆದಿದ್ದು, ಬ್ರಾಹ್ಮಣ ಸಾಂಪ್ರದಾಯದಂತೆ ಮೊಮ್ಮಗಳ ಮೂಲಕ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.
- ಗಂಡ ರಾಮ್ಪ್ರಸಾದ್ ಅಂದ್ರೆ ರಾಮ.. ತಾನು ಜಾನಕಿ..!!
- ಶ್ರೀಕೃಷ್ಣನ ದೊಡ್ಡ ಭಕ್ತೆ.. ಕೃಷ್ಣನ ಹೆಸರಲ್ಲೇ ಮಗನಿಗೆ ಹೆಸರು
ಎಸ್ ಜಾನಕಿ ಅವರು ಬಹುದೊಡ್ಡ ಶ್ರೀಕೃಷ್ಣನ ಭಕ್ತರಾಗಿದ್ರು. ಅದೇ ಕಾರಣದಿಂದ ಮಗ ಮುರಳಿ ಹೆಸರಲ್ಲಿ ಶ್ರೀಕೃಷ್ಣ ಪರಮಾತ್ಮನ ಹೆಸರನ್ನ ಸೇರಿಸಿ ಮುರಳಿ ಕೃಷ್ಣ ಅಂತ ನಾಮಕರಣ ಮಾಡಿದ್ದರಂತೆ. 1997ರಲ್ಲಿ ಗಂಡ ರಾಮ್ಪ್ರಸಾದ್ ತೀರಿಕೊಂಡ ಬಳಿಕ ಮತ್ತೆ ಮರು ಮದುವೆ ಆಗುವ ಯಾವುದೇ ಯೋಚನೆ ಜಾನಕಿ ಅವರಲ್ಲಿ ಬರಲೇ ಇಲ್ಲ. ಯಾಕಂದ್ರೆ ಆತ ರಾಮನಾದ್ರೆ ಈಕೆ ಜಾನಕಮ್ಮ. ಹಾಗಾಗಿ ಅವ್ರ ಮನಸ್ಸುಗಳು ಆ ಶ್ರೀರಾಮ-ಸೀತಾ ಮಾತೆಯಷ್ಟೇ ಪರಸ್ಪರ ಅರ್ಪಣಾ ಭಾವದಿಂದ ತುಂಬಿತ್ತು ಅನ್ನೋದು ಕಾಕತಾಳೀಯ.
ಮತ್ತೊಂದು ವಿಶೇಷ ಅಂದ್ರೆ ಕನ್ನಡದಲ್ಲಿ ಜಾನಕಮ್ಮ ಹಾಡು ಶುರು ಮಾಡಿದ್ದೇ ಶ್ರೀಕೃಷ್ಣ ಗಾರುಡಿ ಚಿತ್ರದಿಂದ. ಅಲ್ಲಿಯೂ ಶ್ರೀಕೃಷ್ಣನ ಜಪ ಮಾಡಿಯೇ ಹಾಡು ಆರಂಭಿಸಿದ್ರು ಅನ್ನೋದು ಅಚ್ಚರಿಯ ವಿಷಯ.
- 6 ದಶಕದ ಹಾಡುಗಾರಿಕೆ.. 30 ಸ್ಟೇಟ್, 4 ನ್ಯಾಷನಲ್ ಅವಾರ್ಡ್ಸ್
- ಕನ್ನಡದಲ್ಲಿ 5 ವರ್ಷ ಹಾಡಲಿಲ್ಲ.. ಗಾಯಕರಿಗೆ ಗೌರವ ತಂದ ಅಮ್ಮ
ಜಾನಕಮ್ಮನ ಹಾಡುಗಾರಿಕೆ ಒಂದೋ ಎರಡೋ ದಶಕದ್ದಲ್ಲ. ಬರೋಬ್ಬರಿ 60 ವರ್ಷಗಳ ಕಾಲ ಸುಲಲಿತವಾಗಿ, ಸರಾಗವಾಗಿ, ನೀರು ಕುಡಿದಷ್ಟೇ ಸಲೀಸಾಗಿ ಹಾಡಿದವರು. ಲಕ್ಷಾಂತರ ಮಂದಿ ಗಾಯಕರಿಗೆ ಸ್ಫೂರ್ತಿಯ ಚಿಲುಮೆ ಆದವರು ಎಸ್ ಜಾನಕಿ. ಅವ್ರ ಗಾಯನ ಮೆಚ್ಚಿ ಸಾಲು ಸಾಲು ಪ್ರಶಸ್ತಿಗಳು ಮನೆ ಬಾಗಿಲಿಗೆ ಬಂದವು. ಸುಮಾರು 30 ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಹಾಗೂ 4 ನ್ಯಾಷನಲ್ ಅವಾರ್ಡ್ಸ್ ಅನ್ನೋದು ಖುಷಿಯ ವಿಚಾರ.
ಕನ್ನಡದಲ್ಲಿ ಇಂದು ಗಾಯಕ, ಗಾಯಕಿಯರು ಏನಾದ್ರೂ ಸ್ಟೇಟ್ ಫಿಲ್ಮ್ ಅವಾರ್ಡ್ಗಳನ್ನ ಪಡೀತಿದ್ದಾರೆ ಅಂದ್ರೆ ಅದಕ್ಕೆ ಒನ್ ಅಂಡ್ ಓನ್ಲಿ ಕಾರಣ ಎಸ್ ಜಾನಕಮ್ಮ. ಹೌದು.. ಗಾಯಕರನ್ನೂ ರಾಜ್ಯ ಸರ್ಕಾರ ಗುರ್ತಿಸುವಂತಾಗಬೇಕು. ಅವರ ಕಲೆಗೂ ಸೂಕ್ತ ಉತ್ತೇಜನ, ಗೌರನ ಸಿಗಬೇಕು ಅನ್ನೋ ಕಾರಣದಿಂದ ಕನ್ನಡದಲ್ಲಿ ಸುಮಾರು ಐದು ವರ್ಷಗಳ ಕಾಲ ಹಾಡಲೇ ಇಲ್ಲ. ಜಾನಕಿ ಅಂತಹ ಲೆಜೆಂಡ್ ಕನ್ನಡದಲ್ಲಿ ಹಾಡೋದನ್ನೇ ನಿಲ್ಲಿಸಿದ್ದನ್ನ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಗಾಯಕರಿಗೆ ಸ್ಟೇಟ್ ಫಿಲ್ಮ್ ಅವಾರ್ಡ್ಸ್ ನೀಡಲು ಮುಂದಾಯ್ತು. ಇದು ಎಷ್ಟೋ ಮಂದಿಗೆ ಗೊತ್ತಿಲ್ಲ.
- ಸೌತ್ಗೆ ಅಪಮಾನ.. ಸ್ವೀಕರಿಸಲೇ ಇಲ್ಲ ‘ಪದ್ಮಭೂಷಣ’..!
- ಶಾರದಾ ಮಾತೆ ಕಾಣಿಕೆ ಜಾನಕಮ್ಮ ರೂಪದ ಗಾನ ಮಾತೆ
ಎಸ್ ಜಾನಕಿ ಅವರಿಗೆ ಪದ್ಮ ಪ್ರಶಸ್ತಿಗಳು ಬಂದೇ ಇಲ್ವಲ್ಲಾ ಅನ್ನೋ ಅನುಮಾನ ಎಂಥವ್ರನ್ನೂ ಕಾಡುತ್ತೆ. ಅವರಿಗೆ ಪ್ರಶಸ್ತಿ ಬಂದದ್ದು ನಿಜ. ಆದ್ರೆ ಅದನ್ನ ಅಷ್ಟೇ ನಯವಾಗಿ ಅವರು ತಿರಸ್ಕರಿಸಿದ್ದೂ ಸಹ ಅಷ್ಟೇ ಸತ್ಯ. ಅದಕ್ಕೊಂದು ಬಲವಾದ ಕಾರಣವಿದೆ. ಅದೇನಪ್ಪಾ ಅಂದ್ರೆ, ಸೌತ್ನ ಗಾಯಕರಿಗೆ ಕೊನೆಯ ಪ್ರಾಶಸ್ತ್ಯ ನೀಡ್ತಿದ್ದ ಕೇಂದ್ರ ಸರ್ಕಾರದ ನಡೆ ಬಗ್ಗೆ ಜಾನಕಮ್ಮ ಅಸಮಾಧಾನ ಹೊರಹಾಕಿದ್ರು. ಹಾಗಾಗಿಯೇ ಹಿಂದಿ ಕ್ಷೇತ್ರದ ಗಾಯಕರಿಗೆಲ್ಲಾ ನೀಡಿದ ಬಳಿಕ ನಮ್ಮ ದಕ್ಷಿಣದ ಗಾಯಕರಿಗೆ ಪದ್ಮ ಪ್ರಶಸ್ತಿಗಳನ್ನ ನೀಡ್ತಿದ್ದ ಅವರ ದೋರಣೆಯನ್ನ ತೀವ್ರವಾಗಿ ಖಂಡಿಸಿದ್ರು. ಅದೇ ಕಾರಣಕ್ಕೆ ತಮಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ಘೋಷಿಸಿದಾಗ ಸ್ವೀಕರಿಸಲೇ ಇಲ್ಲ ಜಾನಕಮ್ಮ.
ಒಟ್ಟಾರೆ ಶಾರದಾ ಮಾತೆಯ ಕಾಣಿಕೆ ಗಾನ ಮಾತೆ ರೂಪದಲ್ಲಿ ಬಂದ ಈ ಜಾನಕಮ್ಮ ಅನ್ನೋದು ವಿಶೇಷ. ಇವರ ನಡೆ, ನುಡಿ, ಆಚಾರ, ವಿಚಾರ, ಸೌಮ್ಯ ಸ್ವಭಾವ, ಸಂಗೀತೋತ್ಸಾಹಿಗಳಿಗೆ ಅವ್ರು ನೀಡುವ ಉತ್ತೇಜನ, ಮಾರ್ಗದರ್ಶನ, ಸ್ಫೂರ್ತಿ, ಪ್ರೇರಣೆ ಅನನ್ಯ ಅವರ್ಣನೀಯ. ಗಾಯನ ಲೋಕದ ದಂತಕಥೆ ಆಗಿರೋ ಎಸ್ ಜಾನಕಿ ಪದಗಳಿಗೆ ನಿಲುಕದ ಯೂನಿವರ್ಸಿಟಿ ಅಂದ್ರೆ ತಪ್ಪಾಗಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
