ಮಕ್ಕಳ ರಕ್ಷಣೆಗೆ ಪೋಷಕರ ‘ರುದ್ರ ಅವತಾರ’: ನಟ ಶಶಿಕುಮಾರ್-ತಾರಾ ಜೋಡಿಯ 26ನೇ ಚಿತ್ರ

Untitled design 2025 11 20T113458.356

ಸವಾದ್ ಮಂಗಳೂರು ನಿರ್ದೇಶನದ ರುದ್ರ ಅವತಾರ ಚಿತ್ರದ ಮೂಲಕ ಹಿರಿಯನಟ ಶಶಿಕುಮಾರ್ ಅವರು ಬಹಳ ದಿನಗಳ ಬಳಿಕ ಚಿತ್ರರಂಗಕ್ಕೆ ಮರಳಿದ್ದಾರೆ. ರುದ್ರ ಅವತಾರ ಚಿತ್ರದಲ್ಲಿ ಅವರು ಒಬ್ಬ ಜವಾಬ್ದಾರಿಯುತ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸವಾದ್ ಮಂಗಳೂರು ಈ ಚಿತ್ರದ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಪ್ರೇಮ್‌ ಜಿ ಪ್ರೊಡಕ್ಷನ್ಸ್ ಮೂಲಕ ದಾಂಡೇಲಿಯ ಉದ್ಯಮಿ ಡಾ.ಪ್ರೇಮಾನಂದ್ ವಿ ಗವಸ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು, ಇದೇ ತಿಂಗಳ 24ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿ ಚಿತ್ರದ ವಿಶೇಷತೆಗಳನ್ನು ಪತ್ರಕರ್ತರ ಮುಂದೆ ಹಂಚಿಕೊಂಡಿತು. ವಿಶೇಷವಾಗಿ ತಯಾರಿಸಲಾದ 2 ನಿಮಿಷಗಳ ಅವಧಿಯ ಈ ಮೋಷನ್ ಪೋಸ್ಟರ್‌ನಲ್ಲಿ ಚಿತ್ರದ ಎಲ್ಲ ಕಲಾವಿದರ ಪಾತ್ರಗಳನ್ನು ಪರಿಚಯಸಲಾಗಿದೆ. ಮತ್ತೊಂದು ವಿಶೇಷ ಎಂದರೆ ಸುಪ್ರೀಂ ಹೀರೋ ಶಶಿಕುಮಾರ್ ಹಾಗೂ ತಾರಾ ನಟಿಸುತ್ತಿರುವ 26ನೇ ಚಿತ್ರವಿದು.

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕ ಪ್ರೇಮಾನಂದ್ ನಾನೊಬ್ಬ ಬ್ಯೂಸಿನೆಸ್ ಮ್ಯಾನ್, ಹಣ ಮಾಡೋದಕ್ಕಿಂತ ಸಮಾಜಕ್ಕೆ ಸಂದೇಶ ಒಳ್ಳೆಯ ನೀಡುವುದು ನನ್ನ ಉದ್ದೇಶ, ಅಲ್ಲದೆ ಸಿನಿಮಾ ಮಾಡಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು, ಚಲನಚಿತ್ರದ ಮೂಲಕ ಸಮಾಜಕ್ಕೆ ಏನಾದರೂ ಮೆಸೇಜ್ ಕೊಡಬೇಕು ಅಂತ ಈ ಚಿತ್ರನಿರ್ಮಾಣಕ್ಕೆ ಮುಂದಾಗಿದ್ದೇನೆ, ನಿರ್ದೇಶಕರು ಹೇಳಿದ ಈ ಕಥೆ ನನಗೆ ತುಂಬಾ ಇಷ್ಟವಾಯ್ತು. ಇದೊಂದೇ ಸಿನಿಮಾ ಅಲ್ಲ, ಮುಂದೆಯೂ ಚಿತ್ರಗಳನ್ನು ಮಾಡುವ ಪ್ಲಾನ್ ಇದೆ, ನಾನೂ ಸಹ ಒಂದು ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ನಿರ್ದೇಶಕ ಸವಾದ್ ಮಂಗಳೂರು ಮಾತನಾಡುತ್ತ ರುದ್ರ ಅವತಾರ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ, ಹೇಗೆ ರುದ್ರ ಅವತಾರ ತಾಳುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ, ಮಕ್ಕಳ ಕನಸುಗಳನ್ನು ಈಡೇರಿಸುವ ಸಲುವಾಗಿ, ಪೋಷಕರು ತಮ್ಮ ಕನಸು, ಆಸೆಗಳನ್ನು ಕಟ್ಟಿಟ್ಟು ಜೀವನ ನಡೆಸುತ್ತಾರೆ, ಅದೇ ತಮ್ಮ ಮಕ್ಕಳಗೆ ತೊಂದರೆ ಎದುರಾದಾಗ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಯಾವರೀತಿ ಹೋರಾಡುತ್ತಾರೆ. ಹೇಗೆ ರುದ್ರ ಅವತಾರ ತಾಳುತ್ತಾರೆ ಎನ್ನುವುದೇ ನಮ್ಮ ಚಿತ್ರದ ಕಥಾಹಂದರ. ಈ ಕಥೆಯಲ್ಲಿ ಪ್ರಮುಖವಾಗಿ ಮೂರು ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು, ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್. ನವೆಂಬರ್ 24ರಿಂದ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಹೇಳಿದರು.

ನಾಯಕನಟ ಶಶಿಕುಮಾರ್ ಮಾತನಾಡುತ್ತ ಇದು ಹೀರೋ, ಹೀರೋಯಿನ್ ಕಥೆಯಲ್ಲ, ಇಲ್ಲಿ ಕಂಟೆಂಟೇ ಹೀರೋ, ಈ ಚಿತ್ರದಲ್ಲಿ ನಾನೊಬ್ಬ ಆಟೋ ಡ್ರೈವರ್ , ಹೆಣ್ಣುಮಗಳ ತಂದೆಯಾಗಿ ನಟಿಸುತ್ತಿದ್ದೇನೆ, ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮಗಳಿಗಾಗಿ ಹೋರಾಡೋ ತಂದೆಯ ಪಾತ್ರ ನನ್ನದು. ಚಿತ್ರದಲ್ಲಿ ಹಾರ್ಟ್ ಟಚಿಂಗ್ ಸೀಕ್ವೇನ್ಸ್ ತುಂಬಾನೇ ಇದೆ, ಈ ಚಿತ್ರದ ಪ್ರಥಮಾರ್ಧ ಕಥೆ ಕೇಳಿದಾಗಲೇ ನನಗೆ ರೋಮಾಂಚನವಾಯಿತು ಎಂದು ಹೇಳಿದರು,
ಹಿರಿಯನಟಿ ತಾರಾ ಮಾತನಾಡುತ್ತ ಈ ಚಿತ್ರದ ಯಾವುದೇ ಪಾತ್ರವಾಗಲೀ ಸುಮ್ಮನೆ ಬಂದು ಹೋಗುವುದಲ್ಲ, ಎಲ್ಲ ಕ್ಯಾರೆಕ್ಟರ್ ಕಥೆಯ ಭಾಗವಾಗಿವೆ, ತುಂಬಾ ವರ್ಷಗಳ ನಂತರ ಶಶಿಕುಮಾರ್, ಸಂಗೀತಾ ಜತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಉಳಿದಂತೆ ಸಂಗೀತಾ, ಯಶ್ ಶೆಟ್ಟಿ, ವರ್ಧನ್ ತೀರ್ಥಳ್ಳಿ, ಅಂಕಿತಾ ಜಯರಾಮ್, ಸಾಧನಾ ಇವರೆಲ್ಲ ತಂತಮ್ಮ ಪಾತ್ರಗಳ ಕುರಿತಂತೆ ಸಂಕ್ಷಿಪ್ತವಾಗಿ ಹೇಳಿಕೊಂಡರು. ಶಶಿಕುಮಾರ್ ಪುತ್ರ ಆದಿತ್ಯ ಕೂಡ ಹಾಜರಿದ್ದು ಶುಭ ಹಾರೈಸಿದರು. ಅಲನ್ ಭರತ್ ಅವರ ಛಾಯಾಗ್ರಹಣ, ಪಾಲ್ ಅಲೆಕ್ಸ್ ಅವರ ಸಂಗೀತ ಸಂಯೋಜನೆ, ಶ್ರೀಕಾಂತ್ ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

Exit mobile version