ಸೌತ್ ಇಂಡಿಯಾದಿಂದ ಬಾಲಿವುಡ್ವರೆಗೂ ಸದ್ಯ ಡಿಸ್ಟರ್ಬ್ ಮಾಡೋಕಾಗದ ರೇಂಜ್ಗೆ ಹವಾ ಎಬ್ಬಿಸಿರೋ ಕೊಡಗಿನ ಕುವರಿ,ರಶ್ಮಿಕಾ ಮಂದಣ್ಣ ಖಾತೆಗೆ ಈಗ ಮತ್ತೊಂದು ಬ್ರೇಕಿಂಗ್ ಅಪ್ಡೇಟ್ ಬಂದು ಬಿದ್ದಿದೆ. ಸದಾ ಕಮರ್ಷಿಯಲ್, ಆಕ್ಷನ್ ಮತ್ತೆ ಲವ್ ಸಿನಿಮಾಗಳಲ್ಲೇ ಗ್ಲಾಮರಸ್ ಆಗಿ ಮಿಂಚುತ್ತಿದ್ದ ರಶ್ಮಿಕಾ, ಈಗ ಭಾರತೀಯ ಸಂಗೀತ ಲೋಕದ ದಿಗ್ಗಜ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್ನಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಹಾಟ್ ಗಾಸಿಪ್ ಹಬ್ಬಿದೆ. ಅಷ್ಟಕ್ಕೂ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಮಾಡಬೇಕಿದ್ದ ಈ ಕನಸಿನ ಪಾತ್ರ ದಿಢೀರ್ ಅಂತ ರಶ್ಮಿಕಾ ಕೈಗೆ ಹೆಂಗೆ ಹೋಯ್ತು.? ಈ ಮಹಾ ಜ್ಯಾಕ್ಪಾಟ್ನ ಸತ್ಯಾಸತ್ಯತೆ ಏನು? ಇದರ ಫುಲ್ ಡಿಟೇಲ್ಸ್ ಇಲ್ಲಿದೆ…
- ಲೆಜೆಂಡ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ನಲ್ಲಿ ಕನ್ನಡತಿ ರಶ್ಮಿಕಾ
- ನ್ಯಾಚುರಲ್ ಬ್ಯೂಟಿ ಕೈಬಿಟ್ಟ ಪಾತ್ರಕ್ಕೆ ನ್ಯಾಷನಲ್ ಕ್ರಶ್ ಎಂಟ್ರಿ..!
- ಸಾಯಿ ಪಲ್ಲವಿ ಡೇಟ್ಸ್ ಸಮಸ್ಯೆ.. ರಶ್ಮಿಕಾಗೆ ಜಾಕ್ಪಾಟ್
- ಗ್ಲಾಮರ್ ಇಮೇಜ್ಗೆ ಬ್ರೇಕ್.. ಶಾಸ್ತ್ರೀಯ ಪಾತ್ರಕ್ಕೆ ರಶ್ಮಿಕಾ
ಚಿತ್ರರಂಗದಲ್ಲಿ ಟೈಮಿಂಗ್ ಅನ್ನೋದು ಎಷ್ಟು ಮುಖ್ಯ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಭಾರತೀಯ ಶಾಸ್ತ್ರೀಯ ಸಂಗೀತದ ಮೇರು ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀತನಚರಿತ್ರೆಯನ್ನು ಬೆಳ್ಳಿತೆರೆಗೆ ತರಲು ತೆಲುಗಿನ ಬಿಗ್ ಪ್ರೊಡ್ಯೂಸರ್ಸ್ ಅಲ್ಲು ಅರವಿಂದ್, ಬನ್ನಿ ವಾಸ್ ಮತ್ತು ನಮ್ಮ ರಾಕ್ಲೈನ್ ವೆಂಕಟೇಶ್ ಕೈಜೋಡಿಸಿದ್ದಾರೆ. ಆರಂಭದಲ್ಲಿ ಈ ಐಕಾನಿಕ್ ಪಾತ್ರಕ್ಕೆ ಸಾಯಿ ಪಲ್ಲವಿ ಅವರೇ ಫೈನಲ್ ಆಗಿದ್ದರು ಮತ್ತು ಅವರು ಕೂಡ ಈ ಪ್ರಾಜೆಕ್ಟ್ ಬಗ್ಗೆ ಭಾರಿ ಉತ್ಸುಕರಾಗಿದ್ದರು. ಆದರೆ, ‘ರಾಮಾಯಣ’ ಸಿನಿಮಾದ ಸರಣಿ ಚಿತ್ರೀಕರಣದಲ್ಲಿ ಸಾಯಿ ಪಲ್ಲವಿ ಕಂಪ್ಲೀಟ್ ಬ್ಯುಸಿಯಾಗಿರುವುದರಿಂದ, ಈ ಬಯೋಪಿಕ್ಗೆ ಡೇಟ್ಸ್ ಹೊಂದಿಸಲು ಸಾಧ್ಯವಾಗಿಲ್ಲ. ಇದನ್ನೇ ಕಾಯುತ್ತಿದ್ದ ನಿರ್ಮಾಪಕರು, ತಡಮಾಡದೇ ರಶ್ಮಿಕಾ ಮಂದಣ್ಣ ಅವರ ಬಾಗಿಲು ತಟ್ಟಿದ್ದು, ಸಾಯಿ ಪಲ್ಲವಿ ಕೈಬಿಟ್ಟ ರೋಲ್ ಈಗ ರಶ್ಮಿಕಾ ಪಾಲಾಗಿದೆ.
ಅಷ್ಟಕ್ಕೂ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೇಕೆ ಇಷ್ಟೊಂದು ಕ್ರೇಜ್ ಅಂತೀರಾ..? ಭಾರತೀಯ ಕರ್ನಾಟಕ್ ಸಂಗೀತ ಲೋಕದ ಪಿತಾಮಹಿಯಂತಿದ್ದ ಅವರು, ಕೇವಲ ಗಾಯಕಿಯಷ್ಟೇ ಅಲ್ಲ, ಭಾರತದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿ ಪುರಸ್ಕೃತರಾದ ಪ್ರಥಮ ಸಂಗೀತ ಗಾರ್ಗಿ. ಪ್ರತಿದಿನ ಬೆಳಿಗ್ಗೆ ಕೋಟ್ಯಂತರ ಮನೆಗಳಲ್ಲಿ ಮೊಳಗುವ ‘ವೆಂಕಟೇಶ ಸುಪ್ರಭಾತ’ ಮತ್ತು ‘ವಿಷ್ಣು ಸಹಸ್ರನಾಮ’ಕ್ಕೆ ತಮ್ಮ ದಿವ್ಯ ಕಂಠದಿಂದ ಜೀವ ತುಂಬಿದವರು ಇವರೇ. ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತದ ಶಾಸ್ತ್ರೀಯ ಸಂಗೀತದ ಪತಾಕೆ ಹಾರಿಸಿದ್ದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನ ಬರುವ ಸೆಪ್ಟೆಂಬರ್ 16 ರಂದಿದ್ದು, ಅಂದೇ ಈ ಮೆಗಾ ಬಯೋಪಿಕ್ ಅಧಿಕೃತವಾಗಿ ಅನೌನ್ಸ್ ಆಗಲಿದೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ಮೈಸಾ ಸಿನಿಮಾದ ಸಾಹಸ ಸನ್ನಿವೇಶದ ಶೂಟಿಂಗ್ ವೇಳೆ ರಶ್ಮಿಕಾ ಮಂದಣ್ಣ ಅವರ ಸೊಂಟಕ್ಕೆ ತೀವ್ರ ಗಾಯವಾಗಿ, ಸರ್ಜರಿ ಕೂಡ ಆಗಿತ್ತು. ಸದ್ಯ ನಟಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಹೀಗೆ ಬೆಡ್ ರೆಸ್ಟ್ನಲ್ಲಿರುವಾಗಲೇ ರಶ್ಮಿಕಾ ಇಂತಹದೊಂದು ದೈತ್ಯ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿರುವುದು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲೂ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಗೌತಮ್ ತಿನ್ನೂರಿ ನಿರ್ದೇಶನ ಮಾಡಲಿರುವ ಈ ಚಿತ್ರಕ್ಕಾಗಿ ಈಗಾಗಲೇ ಸಂಶೋಧನೆ ಜಾರಿಯಲ್ಲಿದ್ದು, ನಟಿಯ ಜೊತೆ ಮಾತುಕತೆ ಕೂಡ ಮುಗಿದಿದೆಯಂತೆ.
ರಶ್ಮಿಕಾ ಕೈಯಲ್ಲಿ ಸದ್ಯ ಸಾಲು ಸಾಲು ಬ್ಲಾಕ್ಬಸ್ಟರ್ ಸಿನಿಮಾಗಳಿವೆ. ಕಂಪ್ಲೀಟ್ ಲೇಡಿ-ಓರಿಯೆಂಟೆಡ್ ಆಕ್ಷನ್ ಥ್ರಿಲ್ಲರ್ ‘ಮೈಸಾ’ ನವೆಂಬರ್ 27ರಂದು 5 ಭಾಷೆಗಳಲ್ಲಿ ರಿಲೀಸ್ ಆಗಲು ರೆಡಿಯಾಗಿದೆ. ಇದರ ಬೆನ್ನಲ್ಲೇ ಪತಿ ವಿಜಯ್ ದೇವರಕೊಂಡ ಜೊತೆಗಿನ ‘ರಣಬಾಲಿ’ ಸಿನಿಮಾದ ಶೂಟಿಂಗ್ನಲ್ಲೂ ಭಾಗಿಯಾಗಬೇಕಿದೆ. ಇದರ ನಡುವೆ, ಮಾಸ್ ಮತ್ತು ಗ್ಲಾಮರಸ್ ಇಮೇಜ್ ಹೊಂದಿರುವ ರಶ್ಮಿಕಾಗೆ, ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ಪವಿತ್ರ ಹಾಗೂ ಶಾಸ್ತ್ರೀಯ ಶೈಲಿಯ ವ್ಯಕ್ತಿತ್ವವನ್ನು ಪರದೆಯ ಮೇಲೆ ತರುವುದು ವೃತ್ತಿಜೀವನದ ಅತಿ ದೊಡ್ಡ ಸವಾಲಾಗಲಿದೆ.
ಸಾಮಾನ್ಯವಾಗಿ ಮಾಡರ್ನ್ ಹಾಗೂ ಎನರ್ಜಿಟಿಕ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ರಶ್ಮಿಕಾ, ಮಡಿ-ಉಟ್ಟು, ತಂಬೂರಿ ಹಿಡಿದು ಶಾಸ್ತ್ರೀಯ ಗಾಯಕಿಯಾಗಿ ಹೇಗೆ ಕನ್ವಿನ್ಸಿಂಗ್ ಆಗಿ ಕಾಣಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಎಗರಿಬಿದ್ದಿದೆ. ರುಕ್ಮಿಣಿ ವಸಂತ್ ಹೆಸರು ಕೂಡ ರೇಸ್ನಲ್ಲಿದ್ದರೂ, ರಶ್ಮಿಕಾಗೆ ಈ ಆಫರ್ ಹೋಗಿರುವುದು ಅವರ ಕೆರಿಯರ್ಗೆ ಬಹುದೊಡ್ಡ ಮೈಲಿಗಲ್ಲಾಗುವುದರಲ್ಲಿ ಅನುಮಾನವಿಲ್ಲ. ಸೆಪ್ಟೆಂಬರ್ 16ಕ್ಕೆ ಚಿತ್ರತಂಡ ಈ ಬಿಗ್ ಸಪ್ರೈಸ್ ಅನ್ನು ಅಫಿಷಿಯಲ್ ಆಗಿ ರಿವೀಲ್ ಮಾಡುತ್ತಾ? ರಶ್ಮಿಕಾ ಈ ಚಾಲೆಂಜಿಂಗ್ ಪಾತ್ರದಲ್ಲಿ ಗೆದ್ದು ಬೀಗ್ತಾರಾ? ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
