ಬ್ರಹ್ಮಾಂಡ ವೆಚ್ಚದ ‘ರಾಮಾಯಣ’ ಸಿನಿಮಾ ಕೇವಲ ತಾರಾಗಣದಿಂದ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ಶ್ರೀಮಂತಿಕೆಯಿಂದಲೂ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಅದರಲ್ಲೂ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತರು ಮ್ಯೂಸಿಕ್ ಕಂಪೋಸ್ ಮಾಡ್ತಿರೋದು ಸಿನೆಮಾ ಮೇಲಿನ ಹೈಪ್ ಅನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ದಿದೆ. ಇದರ ಜೊತೆಗೆ ದೇಶದ ಲಕ್ಷಾಂತರ ಮಕ್ಕಳನ್ನು ತಲುಪಿರೋ ಆ ಬಿಗ್ ಕ್ಯಾಂಪೇನ್ ಯಾವುದು? ಈ ಮಹಾಕಾವ್ಯದ ಮೊದಲ ಭಾಗ ಯಾವಾಗ ರಿಲೀಸ್ ಆಗಲಿದೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
- 500ಕ್ಕೂ ಹೆಚ್ಚು ಶಾಲೆಗಳಲ್ಲಿ ರಾಮಾಯಣ ಅಭಿಯಾನ
- ಹ್ಯಾನ್ಸ್ ಝಿಮ್ಮರ್-ರೆಹಮಾನ್ ಮ್ಯೂಸಿಕ್ ಮ್ಯಾಜಿಕ್
- ರಾಮಾಯಣಕ್ಕೆ ವಿಶ್ವದ ಬೆಸ್ಟ್ ಟೆಕ್ನಿಕಲ್ ಟೀಮ್
- ದೀಪಾವಳಿ 2026ಕ್ಕೆ ರಾಮಾಯಣ ಮಹಾ ರಿಲೀಸ್
ಈ ರಾಮಾಯಣದ ಪಯಣ ಕೇವಲ ಚಿತ್ರಮಂದಿರಕ್ಕೆ ಸೀಮಿತವಾಗದೆ, ರಾಮಾಯಣ ಸ್ಕೂಲ್ಸ್ ಪ್ರೋಗ್ರಾಮ್ ಮೂಲಕ ದೇಶದಾದ್ಯಂತ ಸುಮಾರು 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳನ್ನು ತಲುಪಿದೆ. ಇವರಲ್ಲಿ ಆಯ್ಕೆಯಾದ ಪ್ರತಿಭಾವಂತ ವಿಜೇತ ವಿದ್ಯಾರ್ಥಿಗಳು ಮತ್ತು ದೇಶದ 20 ಪ್ರಮುಖ ನಗರಗಳ ಸಾವಿರಾರು ಅಭಿಮಾನಿಗಳು ಈ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದು ಕೇವಲ ಚಿತ್ರದ ಆರಂಭವಲ್ಲ, ಭಾರತದ ಶ್ರೀಮಂತ ಸಂಸ್ಕೃತಿಯನ್ನು ವಿಶ್ವಕ್ಕೆ ಹಂಚುವ ಮಹಾನ್ ಪ್ರಯತ್ನವಾಗಿದೆ.
ಇವರಷ್ಟೇ ಅಲ್ಲದೆ, ಚಿತ್ರದಲ್ಲಿ ಹಿರಿಯ ನಟಿ ಶೋಭನಾ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಮತ್ತು ನಟಿ ರಕುಲ್ ಪ್ರೀತ್ ಸಿಂಗ್ ಕೂಡ ದೆಹಲಿಯ ಈ ಭವ್ಯ ವೇದಿಕೆಯಲ್ಲಿ ಜೊತೆಯಾಗಿದ್ದರು. ಚಿತ್ರದಲ್ಲಿ ಕೈಕೇಯಿ, ಮಂಥರೆ, ಶೂರ್ಪನಖಿ ಅಥವಾ ವಿಭೀಷಣನಂತಹ ಮಹತ್ವದ ಪಾತ್ರಗಳಲ್ಲಿ ಈ ಘಟನಾಘಟಿಗಳು ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಆಳವನ್ನು ಹೆಚ್ಚಿಸಿದ್ದಾರೆ.
ಇನ್ನು ಈ ಭವ್ಯ ದೃಶ್ಯ ವೈಭವಕ್ಕೆ ಅಂತರಾಷ್ಟ್ರೀಯ ಮಟ್ಟದ ದಿವ್ಯ ಸ್ಪರ್ಶ ನೀಡಲು ವಿಶ್ವದ ಶ್ರೇಷ್ಠ ಸಂಗೀತ ದಿಗ್ಗಜರು ಒಂದಾಗಿದ್ದಾರೆ. ಹೌದು, ಹಾಲಿವುಡ್ನ ಎಪಿಕ್ ಚಿತ್ರಗಳಿಗೆ ಮ್ಯೂಸಿಕ್ ನೀಡಿರೋ ಆಸ್ಕರ್ ಪ್ರಶಸ್ತಿ ವಿಜೇತ ಪ್ರಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಹಾಗೂ ಭಾರತದ ಹೆಮ್ಮೆ, ಇಸಂ ಆಫ್ ಮ್ಯೂಸಿಕ್ ಎ.ಆರ್. ರೆಹಮಾನ್ ಇಬ್ಬರೂ ಜೊತೆಯಾಗಿ ಈ ಚಿತ್ರಕ್ಕೆ ಬ್ಯಾಕ್ಗ್ರೌಂಡ್ ಸ್ಕೋರ್ ಮತ್ತು ಸಂಗೀತ ನೀಡುತ್ತಿದ್ದಾರೆ. ಈ ಇಬ್ಬರು ಜಾಗತಿಕ ದಿಗ್ಗಜರ ಜುಗಲ್ಬಂದಿ ಚಿತ್ರದ ಭಾವನಾತ್ಮಕ ಆಳವನ್ನು ವಿಶ್ವದ ಪ್ರೇಕ್ಷಕರಿಗೆ ನೆಕ್ಸ್ಟ್ ಲೆವೆಲ್ನಲ್ಲಿ ತಲುಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಈ ಐತಿಹಾಸಿಕ ತಾರಾ ಸಂಗಮಕ್ಕೆ ದೇಶದ ವಿವಿಧ ರಂಗಗಳ ಪ್ರಮುಖ ಗಣ್ಯರು ಸಾಕ್ಷಿಯಾಗಿದ್ದರು. ಯೋಗ ಗುರು ಬಾಬಾ ರಾಮ್ದೇವ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಹಲವು ವಿವಿಐಪಿಗಳು ಭಾಗವಹಿಸಿ ಚಿತ್ರತಂಡಕ್ಕೆ ಭರ್ಜರಿ ಶುಭ ಹಾರೈಸಿದರು. ಇವರ ಸಮ್ಮುಖದಲ್ಲಿ ಪ್ರಖ್ಯಾತ ಸಿತಾರ್ ವಾದಕ ರಿಷಬ್ ಅವರ ಲೈವ್ ಪರ್ಫಾಮೆನ್ಸ್ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿತು. ಇದರ ಜೊತೆಗೆ ಅಜಿಂಕ್ಯ ದೇವ್, ಕುನಾಲ್ ಮತ್ತು ರವಿ ದುಬೆ ಅವರಂತಹ ಅನುಭವಿ ನಟರ ಸಮೂಹವೇ ಈ ಚಿತ್ರದಲ್ಲಿ ಭಾಗಿಯಾಗಿ ಚಿತ್ರದ ತೂಕವನ್ನು ಹೆಚ್ಚಿಸಿದೆ.
ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ, ಎರಡು ಭಾಗಗಳಾಗಿ ಮೂಡಿಬರುತ್ತಿರುವ ಈ ಮಹಾ ದೃಶ್ಯಕಾವ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರಸ್ತುತಪಡಿಸಲು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಕಟಿಬದ್ಧವಾಗಿದೆ. ಜುಲೈ 24 ರಂದು ಅಮೆರಿಕಾದಲ್ಲಿ ಜಾಗತಿಕ ಟ್ರೇಲರ್ ಲಾಂಚ್ ಆದ ಬಳಿಕ ಇಡೀ ವಿಶ್ವದಲ್ಲೇ ರಾಮಾಯಣ ಜ್ವರ ಶುರುವಾಗಲಿದ್ದು, ಮುಂಬರುವ 2026ರ ದೀಪಾವಳಿ ಹಬ್ಬದ ಸೌರಭಕ್ಕೆ ಚಿತ್ರದ ಮೊದಲ ಭಾಗ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಲಿದೆ.
