ಅಪ್ಪು ಅಗಲಿ ಇಂದಿಗೆ 4 ವರ್ಷ..ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ

ನಾಲ್ಕು ವರ್ಷಗಳ ಹಿಂದೆ, ಕನ್ನಡ ಚಿತ್ರರಂಗದ ಧ್ರುವತಾರೆ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಡೀ ರಾಜ್ಯವನ್ನು ದಿಗ್ಭ್ರಮೆಗೊಳಿಸಿ ತೀರಿಕೊಂಡರು. 2021ರ ಅಕ್ಟೋಬರ್ 29ರಂದು ಅವರ ಅಕಾಲಿಕ ನಿಧನವು ಚಿತ್ರರಂಗ ಮಾತ್ರವಲ್ಲ, ಅವರ ಅಭಿಮಾನಿಗಳ ಹೃದಯದಲ್ಲೂ ಶಾಶ್ವತವಾದ ಗಾಯವನ್ನುಂಟು ಮಾಡಿತು. ಆದರೂ, ಅವರ ಆದರ್ಶಗಳು, ಕಲಾಪ್ರೀತಿ ಮತ್ತು ಸಾಮಾಜಿಕ ಕಾಳಜಿಯು ಇಂದಿಗೂ ಅವರ ಅಭಿಮಾನಿಗಳ ಮೂಲಕ ಜೀವಂತವಾಗಿದೆ. ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ಪುಣ್ಯಸ್ಮರಣೆಯ ದಿನದಂದು, ರಾಜ್ಯಾದ್ಯಂತ ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ಮರಿಸುತ್ತಿದ್ದಾರೆ.

ಅಪ್ಪು ಸಮಾಧಿಯಲ್ಲಿ ಪೂಜೆ ಮತ್ತು ಅಭಿಮಾನಿಗಳ ಸಮಾಗಮ

ಇಂದು ಬೆಳಗ್ಗೆ 9 ಗಂಟೆಗೆ, ದೊಡ್ಮನೆ ಕುಟುಂಬದವರು ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಕಂಠೀರವ ಸ್ಟುಡಿಯೋದ ಬಳಿಯಿರುವ ಸಮಾಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ಸಾಧ್ಯತೆಯಿದೆ. ಅನ್ನದಾನ, ರಕ್ತದಾನ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದಾರೆ. ಪುನೀತ್ ಅವರ ಸರಳತೆ, ಸಮಾಜಮುಖಿ ಕಾರ್ಯಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಈ ಕಾರ್ಯಕ್ರಮಗಳು, ಅವರ ಆದರ್ಶಗಳನ್ನು ಮುಂದುವರೆಸುವ ಪ್ರಯತ್ನವಾಗಿದೆ.

ನಾಲ್ಕು ವರ್ಷಗಳ ಹಿಂದೆ ನಡೆದ ದುರಂತ

2021ರ ಅಕ್ಟೋಬರ್ 28ರಂದು, ಪುನೀತ್ ತಮ್ಮ ಆಪ್ತ ಸ್ನೇಹಿತ ಹಾಗೂ ಸಂಗೀತ ಸಂಯೋಜಕ ಗುರುಕಿರಣ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆ ರಾತ್ರಿ ಸಂತೋಷದಿಂದ ಕಳೆದ ಅವರು, ಮನೆಗೆ ಮರಳಿದ್ದರು. ಮರುದಿನ, ಅಕ್ಟೋಬರ್ 29ರ ಬೆಳಗ್ಗೆ, ಅಣ್ಣ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಪುನೀತ್ ಟ್ವಿಟರ್‌ನಲ್ಲಿ ಶುಭ ಕೋರಿದ್ದರು. ಆದರೆ, ಬೆಳಗ್ಗೆ 10 ಗಂಟೆ ಸುಮಾರಿಗೆ, ಅವರಿಗೆ ಏಕಾಏಕಿ ಹೃದಯಾಘಾತವಾಯಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರ ಎಲ್ಲ ಪ್ರಯತ್ನಗಳೂ ವಿಫಲವಾದವು. ಮಧ್ಯಾಹ್ನ 12 ಗಂಟೆಯ ವೇಳೆಗೆ, ಅವರು ಇನ್ನಿಲ್ಲ ಎಂಬ ದುಃಖದ ಸುದ್ದಿ ಖಚಿತವಾಯಿತು.

ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್‌ಗೆ ಹೆಸರಾದವರು. ಜಿಮ್‌ನಲ್ಲಿ ತಮ್ಮ ದಿನವನ್ನು ಆರಂಭಿಸುವುದು ಅವರ ದೈನಂದಿನ ಚಟುವಟಿಕೆಯಾಗಿತ್ತು. ಆದರೆ, ಅವರಿಗೆ ಹೃದಯಾಘಾತವಾದ ದಿನ ಜಿಮ್ ಮಾಡಿದ್ದರೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಅವರು ಜಿಮ್ ಮಾಡಿದ್ದರು ಎಂದರೆ, ಅವರ ಬಾಡಿಗಾರ್ಡ್ ಈ ವಿಷಯವನ್ನು ನಿರಾಕರಿಸಿದ್ದಾರೆ. “ಅಂದು ಅವರಿಗೆ ಆರೋಗ್ಯದಲ್ಲಿ ಏನೋ ಸರಿಯಿಲ್ಲವೆಂದು ಅನಿಸಿತ್ತು, ಹೀಗಾಗಿ ಜಿಮ್ ಮಾಡಿರಲಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪುನೀತ್ ಅವರ ನಿಧನದ ನಂತರ, ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣ ಸಂಸ್ಥೆಯಾದ ಪಿಆರ್‌ಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ‘ಗಂಧದಗುಡಿ’, ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’ ಮುಂತಾದ ಚಿತ್ರಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ. ಕೆಲವು ಚಿತ್ರಗಳ ಕಥೆಯನ್ನು ಪುನೀತ್ ಆಯ್ಕೆ ಮಾಡಿದ್ದರೆ, ಇನ್ನು ಕೆಲವನ್ನು ಅಶ್ವಿನಿ ಫೈನಲ್ ಮಾಡಿದ್ದಾರೆ. ‘ಗಂಧದಗುಡಿ’ ಡಾಕ್ಯುಮೆಂಟರಿಯ ಟೈಟಲ್ ಅನೌನ್ಸ್‌ಮೆಂಟ್ ನವೆಂಬರ್ 1, 2021ಕ್ಕೆ ನಿಗದಿಯಾಗಿತ್ತು, ಆದರೆ ವಿಧಿಯಾಟದಿಂದಾಗಿ ಅದು ಸಾಧ್ಯವಾಗಲಿಲ್ಲ.

Exit mobile version