ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

Untitled design (79)

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಫೌಜಿ. ಸೀತಾರಾಮಂ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕತ್ತಿ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಭರ್ಜರಿ ಆಕ್ಷನ್ ಹಾಗೂ ಭಾವನಾತ್ಮಕ ಪ್ರೇಮಕತೆಯ ಸಂಯೋಜನೆಯೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾ ಡಿಸೆಂಬರ್ 3 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಪ್ರಭಾಸ್ ಪ್ರಸ್ತುತ ‘ಕಲ್ಕಿ 2898 ಎಡಿ’, ‘ಸ್ಪಿರಿಟ್’ ಹಾಗೂ ‘ಫೌಜಿ’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷವೆಂದರೆ, ಇತರೆ ಸಿನಿಮಾಗಳ ಕಥೆಗಳನ್ನು ಮೊದಲೇ ಕೇಳಿದ್ದರೂ, ‘ಫೌಜಿ’ ಚಿತ್ರದ ಕಥೆ ಅವರಿಗೆ ಹೆಚ್ಚು ಇಷ್ಟವಾಗಿದ್ದರಿಂದ ಇದೇ ಚಿತ್ರದ ಚಿತ್ರೀಕರಣವನ್ನು ಮೊದಲು ಆರಂಭಿಸಿದ್ದರು ಎನ್ನಲಾಗಿದೆ. ಈ ಸಿನಿಮಾದ ಮೇಲೆ ಪ್ರಭಾಸ್ ವಿಶೇಷ ನಿರೀಕ್ಷೆ ಹೊಂದಿದ್ದಾರೆ ಎಂದು ಸಿನಿ ವಲಯದಲ್ಲಿ ಮಾತು ಕೇಳಿಬರುತ್ತಿದೆ.

‘ಸೀತಾ ರಾಮಂ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡ ನಿರ್ದೇಶಕ ಹನು ರಾಘವಪುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಿಂದಿನ ಚಿತ್ರದಂತೆಯೇ ಈ ಸಿನಿಮಾದಲ್ಲೂ ಸೈನಿಕನ ಜೀವನ ಮತ್ತು ಪ್ರೇಮಕತೆಗೆ ಮಹತ್ವ ನೀಡಲಾಗಿದೆ. ಆದರೆ ಈ ಬಾರಿ ಕಥೆಯನ್ನು ಹೆಚ್ಚು ಆಕ್ಷನ್ ಹಾಗೂ ಭಾವನಾತ್ಮಕ ಹಿನ್ನೆಲೆಯೊಂದಿಗೆ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.

ಬಿಡುಗಡೆಯಾದ ಹೊಸ ಪೋಸ್ಟರ್‌ನಲ್ಲಿ ಪ್ರಭಾಸ್ ಸಂಪೂರ್ಣ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚೆ ಧರಿಸಿ ಮದುವೆ ವರನ ವೇಷದಲ್ಲಿರುವ ಅವರು ಕೈಯಲ್ಲಿ ಬಂದೂಕು ಹಿಡಿದು ಕುಳಿತಿದ್ದು, ದೇಹದ ಮೇಲೆ ರಕ್ತದ ಕಲೆಗಳು ಕಾಣಿಸುತ್ತವೆ. ಅವರ ಹಿಂದೆ ಹಲವು ಶವಗಳು ಬಿದ್ದಿರುವ ದೃಶ್ಯ ಕುತೂಹಲ ಹೆಚ್ಚಿಸಿದೆ. “Battalion Who Fights Alone” ಎಂಬ ಟ್ಯಾಗ್‌ಲೈನ್ ಚಿತ್ರದ ಕಥೆಯ ಬಗ್ಗೆ ಹೊಸ ಕುತೂಹಲ ಮೂಡಿಸಿದೆ.

ಚಿತ್ರದಲ್ಲಿ ಪ್ರಭಾಸ್ ಸೈನಿಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಎದುರು ನಾಯಕಿಯಾಗಿ ಇಮಾನ್ವಿ ಇಸ್ಮಾಯಿಲ್ ಅಭಿನಯಿಸಿದ್ದಾರೆ. ಅಮೆರಿಕದಲ್ಲಿ ಡ್ಯಾನ್ಸ್ ಸ್ಟುಡಿಯೋ ನಡೆಸುತ್ತಿರುವ ಇಮಾನ್ವಿಗೆ ಇದು ಮೊದಲ ಸಿನಿಮಾ. ಉತ್ತಮ ನೃತ್ಯಗಾರ್ತಿಯಾಗಿರುವ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ನೀಡುತ್ತಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದ, ರಾಹುಲ್ ರವಿಂದ್ರನ್ ಸೇರಿ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್ ಅವರು ಟಿ-ಸೀರೀಸ್ ಫಿಲ್ಮ್ಸ್‌ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿದ್ದಾರೆ. ‘ಫೌಜಿ’ ಚಿತ್ರದಲ್ಲಿ ಭರ್ಜರಿ ಆಕ್ಷನ್, ದೇಶಭಕ್ತಿ ಹಾಗೂ ಪ್ರೇಮಕತೆಯ ಸಮನ್ವಯ ಇರಲಿದ್ದು, ಡಿಸೆಂಬರ್ 3ರಂದು ಪ್ರಭಾಸ್ ಅಭಿಮಾನಿಗಳಿಗೆ ವಿಶೇಷ ಸಿನಿ ಹಬ್ಬವಾಗುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಸುದೀಪ್ ಚಟರ್ಜಿ ಅವರ ಛಾಯಾಗ್ರಹಣ, ವಿಶಾಲ್ ಚಂದ್ರಶೇಖರ್ ಅವರ ಸಂಗೀತ, ಅನಿಲ್ ವಿಲಾಸ್ ಜಾಧವ್ ಅವರ ನಿರ್ಮಾಣ ವಿನ್ಯಾಸ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ.

Exit mobile version