ಪವಿತ್ರಾಗೌಡಗೆ ಅಲರ್ಜಿ, ಸೋಂಕಿನ ಸಮಸ್ಯೆ: ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಲು ಕೋರ್ಟ್‌ಗೆ ಅರ್ಜಿ

Untitled design 2026 09 03T162300.484

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿಯಾಗಿರುವ ನಟಿ ಪವಿತ್ರಾಗೌಡ ಅವರನ್ನು  ಇರಿಸಲಾಗಿರುವ ಬ್ಯಾರಕ್‌ನಿಂದ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಜೈಲಿನಲ್ಲಿರುವ ಬ್ಯಾರಕ್‌ನ ಪರಿಸ್ಥಿತಿಯಿಂದಾಗಿ ಪವಿತ್ರಾಗೌಡ ಅವರಿಗೆ ಅಲರ್ಜಿ ಹಾಗೂ ಸೋಂಕಿನ ಸಮಸ್ಯೆ ಎದುರಾಗುತ್ತಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಬೆಂಗಳೂರಿನ 59ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಸಲ್ಲಿಸಲಾಗಿದ್ದು, ಪವಿತ್ರಾಗೌಡ ಅವರ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಲಾಗಿದೆ. ಪ್ರಸ್ತುತ ಅವರು 16ಕ್ಕೂ ಹೆಚ್ಚು ಆರೋಪಿಗಳಿರುವ ಬ್ಯಾರಕ್‌ನಲ್ಲಿ ಇದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಬ್ಯಾರಕ್‌ನಲ್ಲಿ ಶೌಚಾಲಯದ ಸಮಸ್ಯೆ

ವಕೀಲರ ವಾದದ ಪ್ರಕಾರ, ಪವಿತ್ರಾಗೌಡ ಅವರನ್ನು ಇರಿಸಿರುವ ಬ್ಯಾರಕ್‌ನಲ್ಲಿ ಸುಮಾರು 20ರಿಂದ 30 ಮಂದಿ ಆರೋಪಿಗಳು ಇದ್ದಾರೆ. ಆದರೆ ಇಷ್ಟೊಂದು ಸಂಖ್ಯೆಯ ಕೈದಿಗಳಿಗೆ ಕೇವಲ ಎರಡು ಶೌಚಾಲಯಗಳಿವೆ. ಈ ಪೈಕಿ ಒಂದು ಶೌಚಾಲಯ ದುರಸ್ತಿಯಲ್ಲಿರುವುದರಿಂದ ಬಳಕೆಗೆ ಲಭ್ಯವಿಲ್ಲ. ಇದರಿಂದ ಬ್ಯಾರಕ್‌ನಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ಸಮಸ್ಯೆ ಎದುರಾಗಿದೆ ಎಂದು ವಕೀಲರು ಹೇಳಿದ್ದಾರೆ.

ಈ ಪರಿಸ್ಥಿತಿಯಿಂದಾಗಿ ಪವಿತ್ರಾಗೌಡ ಅವರಿಗೆ ಅಲರ್ಜಿ ಹಾಗೂ ಸೋಂಕಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಈಗಾಗಲೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆ, ಅವರ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ವಕೀಲರು ಮನವಿ ಮಾಡಿದ್ದಾರೆ.

ವಕೀಲರ ಮನವಿಯನ್ನು ಆಲಿಸಿದ ನ್ಯಾಯಾಲಯ, ಈ ಕುರಿತು ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿದೆ. ಹೀಗಾಗಿ ಪವಿತ್ರಾಗೌಡ ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವ ಬಗ್ಗೆ ನ್ಯಾಯಾಲಯದ ಮುಂದಿನ ಆದೇಶದ ಮೇಲೆ ಗಮನ ನೆಟ್ಟಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ A1 ಆರೋಪಿಯಾಗಿದ್ದಾರೆ. 2024ರ ಜೂನ್‌ನಲ್ಲಿ ನಡೆದ ಈ ಪ್ರಕರಣವು ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ನಟ ದರ್ಶನ್‌ ಸೇರಿದಂತೆ ಹಲವರ ವಿರುದ್ಧ ಕೊಲೆ, ಅಪಹರಣ, ಸಾಕ್ಷ್ಯ ನಾಶ ಸೇರಿದಂತೆ ಹಲವು ಗಂಭೀರ ಆರೋಪಗಳ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಸಾಮಾಜಿಕ ಜಾಲತಾಣದ ಸಂದೇಶದಿಂದ ವಿವಾದ?

ಚಿತ್ರದುರ್ಗದ 33 ವರ್ಷದ ರೇಣುಕಾಸ್ವಾಮಿ ನಟ ದರ್ಶನ್‌ ಅವರ ಅಭಿಮಾನಿಯಾಗಿದ್ದರು. ಅವರು ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದರು ಎನ್ನಲಾಗಿದೆ. 

ಬೆಂಗಳೂರಿಗೆ ಕರೆತಂದು ಹಲ್ಲೆ ನಡೆಸಿದ ಆರೋಪ

2024ರ ಜೂನ್‌ನಲ್ಲಿ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯ ಪ್ರಮುಖ ಆರೋಪವಾಗಿದೆ. ಜೂನ್‌ 9ರಂದು ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಅವರ ಮೃತದೇಹ ಪತ್ತೆಯಾಗಿತ್ತು. ಬಳಿಕ ತನಿಖೆ ಚುರುಕುಗೊಂಡಿದ್ದು, ಜೂನ್‌ 11ರಂದು ನಟ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ್ದರು.

 

Exit mobile version