ಫೆಬ್ರವರಿ 13ರಂದು ತೆರೆಗೆ ಬರಲಿದೆ ‘ಓ ಸುಂದರ ರಾಕ್ಷಸಿ’: ವಿಭಿನ್ನ ಕಥಾಹಂದರದೊಂದಿಗೆ ಶೇರಾಜ್ ಮೆಹದಿ ಆಗಮನ

BeFunky collage 2026 02 11T122726.133

ನಟನೆಯ ಜೊತೆಗೆ ನಿರ್ದೇಶನ, ಸಂಗೀತ ಸಂಯೋಜನೆ ಹಾಗೂ ಕಥೆಗಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶೇರಾಜ್ ಮೆಹದಿ, ಇದೀಗ ‘ಓ ಸುಂದರ ರಾಕ್ಷಸಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಶೇರಾಜ್ ಮೆಹದಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸ್ಕೈ ಈಸ್ ದಿ ಲಿಮಿಟ್ ಬ್ಯಾನರ್ ಅಡಿಯಲ್ಲಿ ಸುರಿಂದರ್ ಕೌರ್ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 13ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಗೆ ಮುನ್ನ ಆಯೋಜಿಸಲಾಗಿದ್ದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡವು ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದೆ.

ಮನರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ
ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ಹಾಗೂ ನಿರ್ದೇಶಕ ಶೇರಾಜ್ ಮೆಹದಿ, “ವರ್ಷಕ್ಕೆ ಒಮ್ಮೆ ಇಂತಹದೊಂದು ಅತ್ಯುತ್ತಮ ಸಿನಿಮಾ ಬರುತ್ತದೆ. ‘ಓ ಸುಂದರ ರಾಕ್ಷಸಿ’ ಅಂತಹ ಸಾಲಿಗೆ ಸೇರುವ ಚಿತ್ರ. ಕೃತಿ ವರ್ಮಾ, ವಿಹಾನ್ಸಿ ಹೆಗಡೆ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರೇಕ್ಷಕರಿಗೆ ಒಂದು ಕ್ಷಣವೂ ಬೋರ್ ಆಗದಂತೆ ಚಿತ್ರಕಥೆ ಹೆಣೆಯಲಾಗಿದೆ. ಇದರಲ್ಲಿ ಅದ್ಭುತ ಟ್ವಿಸ್ಟ್‌ಗಳಿದ್ದು, ವಿಶೇಷವಾಗಿ ಮಹಿಳೆಯರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳಾ ಪ್ರಧಾನ ಸಬ್ಜೆಕ್ಟ್
ಚಿತ್ರದ ಕಥೆ ಮತ್ತು ಸಂಭಾಷಣೆಗಾರ ಭಾಷ್ಯ ಶ್ರೀ ಮಾತನಾಡಿ, “ಇಂದಿನ ಯುವತಿಯರು ಹೇಗಿರಬೇಕು ಎಂಬ ಪರಿಕಲ್ಪನೆಯ ಮೇಲೆ ಈ ಚಿತ್ರವನ್ನು ರೂಪಿಸಲಾಗಿದೆ. ಶೇರಾಜ್ ಅವರು ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಮ್ಯಾಜಿಕ್ ಮಾಡಿದ್ದಾರೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕರು ಒಂದು ಪಾಸಿಟಿವ್‌ ಫೀಲ್‌ನ ಭಾವನೆಯೊಂದಿಗೆ ಬರುತ್ತಾರೆ” ಎಂದರು.

ಬಲಿಷ್ಠ ಕಥಾಹಂದರ ಮತ್ತು ಮಹಿಳಾ ಸಬಲೀಕರಣ
ಈ ಚಿತ್ರವು ಕೇವಲ ಸಾಧಾರಣ ಪ್ರೇಮಕಥೆಯಲ್ಲದೆ, ಇಂದಿನ ಸಮಾಜದಲ್ಲಿ ಯುವತಿಯರು ಎದುರಿಸುತ್ತಿರುವ ಸವಾಲುಗಳು ಮತ್ತು ಅದಕ್ಕೆ ಅವರು ನೀಡಬೇಕಾದ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ. “ಹುಡುಗಿಯರಿಗೆ ಮೋಸವಾದಾಗ ಅವರ ಸೌಂದರ್ಯವೇ ರಾಕ್ಷಸ ರೂಪ ತಾಳುತ್ತದೆ” ಎಂಬ ವಿಹಾನ್ಸಿ ಹೆಗಡೆ ಅವರ ಮಾತು ಚಿತ್ರದ ತಿರುಳನ್ನು ಸೂಚಿಸುತ್ತದೆ. ಸಮಾಜಕ್ಕೆ ಒಂದು ಬಲವಾದ ಸಂದೇಶವನ್ನು ನೀಡುವ ಉದ್ದೇಶ ಹೊಂದಿರುವ ಈ ಸಿನಿಮಾ, ಮಹಿಳೆಯರು ಆತ್ಮವಿಶ್ವಾಸದಿಂದ ಹೇಗೆ ಬದುಕಬೇಕು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದೆ. ವಿಶೇಷವಾಗಿ ಮಹಿಳಾ ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತಹ ಭಾವನಾತ್ಮಕ ಸನ್ನಿವೇಶಗಳು ಮತ್ತು ಅದಕ್ಕೆ ಪೂರಕವಾದ ಸಂಭಾಷಣೆಗಳು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಎನ್ನಲಾಗಿದೆ.

ತಾರಾಗಣ ಮತ್ತು ತಾಂತ್ರಿಕ ವರ್ಗ
ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಶೇರಾಜ್ ಮೆಹದಿ ಅವರ ಬಹುಮುಖ ಪ್ರದರ್ಶನ. ಅವರು ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮತ್ತು ಸಂಗೀತ ಸಂಯೋಜನೆಯನ್ನೂ ನಿರ್ವಹಿಸಿರುವುದು ಚಿತ್ರದ ಮೇಲೆ ಕುತೂಹಲ ಮೂಡಿಸಿದೆ. ಕೃತಿ ವರ್ಮಾ ಮತ್ತು ಸುಮನ್ ಅವರಂತಹ ಅನುಭವಿ ಕಲಾವಿದರ ಉಪಸ್ಥಿತಿ ಚಿತ್ರದ ತೂಕವನ್ನು ಹೆಚ್ಚಿಸಿದೆ. ಇನ್ನುಳಿದಂತೆ ನೇಹಾ ದೇಶಪಾಂಡೆ, ತಮ್ಮಾರೆಡ್ಡಿ ಭಾರದ್ವಾಜ್ ಮುಂತಾದವರು ಚಿತ್ರದಲ್ಲಿದ್ದಾರೆ. ಪ್ರತಿ ನಿಮಿಷವೂ ಕುತೂಹಲ ಕೆರಳಿಸುವಂತಹ ‘ಟ್ವಿಸ್ಟ್’ಗಳು ಮತ್ತು ಪ್ರೇಕ್ಷಕರಿಗೆ ಬೇಸರವಾಗದಂತೆ ವೇಗವಾಗಿ ಸಾಗುವ ಚಿತ್ರಕಥೆಯು ಸಿನಿಮಾವನ್ನು ಕಂಪ್ಲೀಟ್ ಎಂಟರ್ಟೈನರ್ ಆಗಿ ರೂಪಿಸಿದೆ ಎಂದು ಚಿತ್ರತಂಡ ಭರವಸೆ ನೀಡಿದೆ.

Exit mobile version