ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ತಮ್ಮ ಉದಾರ ಹೃದಯವನ್ನು ಮತ್ತೊಮ್ಮೆ ತೋರಿಸಿದ್ದಾರೆ. ತೆಲಂಗಾಣದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯವಾಗಿ, ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಬಾಲಕೃಷ್ಣ ಅವರು ತಮ್ಮ ತಂದೆ ನಂದಮೂರಿ ತಾರಕ ರಾಮರಾವ್ (NTR) ಅವರ ಸಾಮಾಜಿಕ ಸೇವೆಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸನ್ಮಾನ ಕಾರ್ಯಕ್ರಮದಲ್ಲಿ ತಮ್ಮ 50 ವರ್ಷಗಳ ಸಿನಿಮಾ ಮತ್ತು ಸಾಮಾಜಿಕ ಕೊಡುಗೆಗಾಗಿ ಗೌರವಿಸಲ್ಪಟ್ಟರು. ಈ ವೇದಿಕೆಯಲ್ಲಿ ಮಾತನಾಡಿದ ಬಾಲಯ್ಯ, “ತೆಲಂಗಾಣದಲ್ಲಿ ಪ್ರವಾಹದಿಂದ ರೈತರು ಮತ್ತು ಸಾಮಾನ್ಯ ಜನರು ತೀವ್ರ ನಷ್ಟ ಅನುಭವಿಸಿದ್ದಾರೆ. 50 ಲಕ್ಷ ರೂಪಾಯಿಯ ದೇಣಿಗೆಯಿಂದ ದೊಡ್ಡ ಬದಲಾವಣೆಯಾಗದಿರಬಹುದು, ಆದರೆ ಇದು ಸಣ್ಣ ಪ್ರಯತ್ನ. ಮುಂದೆಯೂ ಸಂತ್ರಸ್ತರಿಗೆ ಸಹಾಯ ಮಾಡಲು ನಾನು ಬದ್ಧನಾಗಿದ್ದೇನೆ,” ಎಂದು ತಿಳಿಸಿದರು.
