ಯುವ ನಟನಿಗೆ ನಿರ್ದೇಶಕ ನಂದ ಕಿಶೋರ್ ವಂಚನೆ, ಬೆದರಿಕೆ ಆರೋಪ

ಶಬರೀಶ್‌ಗೆ ನಂದ ಕಿಶೋರ್‌ನಿಂದ ಬೆದರಿಕೆ?

Add a heading (52)

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಂದ ಕಿಶೋರ್ ವಿರುದ್ಧ ಯುವ ನಟ ಶಬರೀಶ್ ಶೆಟ್ಟಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುದೀಪ್ ಅಭಿನಯದ ‘ರನ್ನ’, ‘ವಿಕ್ಟರಿ’, ‘ಅಧ್ಯಕ್ಷ’, ‘ಪೊಗರು’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನಂದ ಕಿಶೋರ್, ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಕಿಚ್ಚ ಸುದೀಪ್ ಅವರ ಹೆಸರನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಶಬರೀಶ್ ನಮ್ಮ ಗ್ಯಾರಂಟಿ ನ್ಯೂಸ್ ತಿಳಿಸಿದ್ದಾರೆ.

ಶಬರೀಶ್ ಶೆಟ್ಟಿ, ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿದ್ದು, ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್‌ನಲ್ಲಿ ನಂದ ಕಿಶೋರ್ ಅವರೊಂದಿಗೆ ಪರಿಚಯವಾಯಿತು ಎಂದು ಹೇಳಿದ್ದಾರೆ. ಈ ಪರಿಚಯ ಗೆಳೆತನವಾಗಿ ಬದಲಾಗಿ, ನಂದ ಕಿಶೋರ್ ಅವರು ಶಬರೀಶ್‌ಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಆಡುವ ಭರವಸೆ ನೀಡಿ 22 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. “ನಾನು 200 ಗ್ರಾಂ ಚಿನ್ನವನ್ನು ಅಡವಿಟ್ಟು ಈ ಹಣವನ್ನು ಕೊಟ್ಟಿದ್ದೆ. ಆದರೆ, ಈವರೆಗೆ ಹಣವನ್ನು ಮರಳಿಸಿಲ್ಲ,” ಎಂದು ಶಬರೀಶ್ ತಿಳಿಸಿದ್ದಾರೆ.

ADVERTISEMENT
ADVERTISEMENT

ಶಬರೀಶ್ ಹಣವನ್ನು ಮರಳಿಸುವಂತೆ ಕೇಳಿದಾಗ ನಂದ ಕಿಶೋರ್ ಸುದೀಪ್ ಅವರ ಹೆಸರನ್ನು ಬಳಸಿ ಬೆದರಿಕೆ ಹಾಕಿದ್ದಾರೆ. “ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರನ್ನು ಎಳೆದುಕೊಂಡು ಯಾಮಾರಿಸಿದರು. ‘ಪೊಗರು’ ಮತ್ತು ‘ರಾಣಾ’ ಚಿತ್ರಗಳಲ್ಲಿ ಅವಕಾಶ ಕೊಡುವುದಾಗಿ ಭರವಸೆ ನೀಡಿದರಾದರೂ ಯಾವುದೇ ಅವಕಾಶ ನೀಡಲಿಲ್ಲ. ಸಿಸಿಎಲ್‌ನಲ್ಲಿ ಆಡುವ ಕನಸಿನೊಂದಿಗೆ ಎರಡು ಸೀಸನ್‌ಗಳಲ್ಲಿ ಭಾಗವಹಿಸಿದೆ, ಆದರೆ ಹಣ ಕೇಳಿದಾಗ ‘ನಿನ್ನನ್ನು ಸಿಸಿಎಲ್‌ನಿಂದ ಹೊರಗೆ ಹಾಕುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ,” ಎಂದು ಶಬರೀಶ್ ಆರೋಪಿಸಿದ್ದಾರೆ.

ಇದರ ಜೊತೆಗೆ, ಚಿನ್ನದ ಲೋನ್‌ಗಾಗಿ ಶಬರೀಶ್ ಕಟ್ಟಬೇಕಿದ್ದ ಬಡ್ಡಿಯನ್ನು ಕಟ್ಟಲು ನಂದ ಕಿಶೋರ್ ಸಹಾಯ ಮಾಡದ ಕಾರಣ, ಚಿನ್ನವನ್ನು ಹರಾಜಿಗೆ ಹಾಕಲಾಯಿತು ಎಂದು ಶಬರೀಶ್ ತಿಳಿಸಿದ್ದಾರೆ. “ನಾನು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇನೆ. ಈಗ ನಾನು ‘ರಾಮಧೂತ’ ಎಂಬ ಸಿನಿಮಾವನ್ನು ಶೂಟಿಂಗ್ ಮುಗಿಸಿದ್ದೇನೆ, ಆದರೆ ರಿಲೀಸ್‌ಗೆ ಹಣವಿಲ್ಲ. ನನ್ನ 22 ಲಕ್ಷ ರೂಪಾಯಿಯನ್ನು ಮರಳಿಸುವಂತೆ ಕೇಳಿದಾಗ ‘ನೀನೇನು ಮಾಡಿಕೊಳ್ಳುತ್ತೀಯಾ, ಮಾಡಿಕೊ’ ಎಂದು ಬೆದರಿಕೆ ಹಾಕಿದ್ದಾರೆ,” ಎಂದು ಶಬರೀಶ್ ಹೇಳಿದ್ದಾರೆ.

ಶಬರೀಶ್ ಶೆಟ್ಟಿ ಈ ವಿಷಯವನ್ನು ಕಿಚ್ಚ ಸುದೀಪ್ ಮತ್ತು ಶಿವರಾಜಕುಮಾರ್ ಅವರ ಗಮನಕ್ಕೆ ತರಲು ಪ್ರಯತ್ನಿಸಿದ್ದರೂ, ಅವರನ್ನು ತಡೆಯಲಾಗಿದೆ ಎಂದು ಆರೋಪಿಸಿದ್ದಾರೆ. “ನಮ್ಮಂತಹ ಪುಟ್ಟ ಕಲಾವಿದರು ಹೇಗೆ ಬದುಕಬೇಕು? ನನ್ನ ಹಣವನ್ನು ಮರಳಿಸದಿದ್ದರೆ, ನಾನು ಕಾನೂನಿನ ಮೊರೆ ಹೋಗುತ್ತೇನೆ ಮತ್ತು ಫಿಲಂ ಚೇಂಬರ್‌ಗೆ ದೂರು ಸಲ್ಲಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.

ನಂದ ಕಿಶೋರ್ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, “ಶಬರೀಶ್ ಶೆಟ್ಟಿ ಬಾಯಿಗೆ ಬಂದಂತೆ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಬೇರೆಯವರ ಹೆಸರನ್ನು ಎಳೆದುಕೊಂಡಿದ್ದಾರೆ. ಈ ಆರೋಪಗಳಿಗೆ ಕಾನೂನಿನ ರೀತಿಯಲ್ಲಿ ಉತ್ತರ ಕೊಡುವೆ,” ಎಂದು ತಿಳಿಸಿದ್ದಾರೆ.

Exit mobile version