ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ

Untitled design 2026 06 07T121217.898

ತಿರುವನಂತಪುರಂ, ಜೂನ್ 7: ಮಲಯಾಳಂ ಚಿತ್ರರಂಗದ ಹಿರಿಯ ನಟ, ಹಾಸ್ಯ ಕಲಾವಿದ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತಸಲೀಂ ಕುಮಾರ್ (56)ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಯಕೃತ್ತಿನ ಕಾಯಿಲೆ (ಲಿವರ್ ಸಿರೋಸಿಸ್) ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಲೀಂ ಕುಮಾರ್ ಅವರು ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೀರ್ಘಕಾಲದಿಂದ ಲಿವರ್ ಸಿರೋಸಿಸ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರ ಆರೋಗ್ಯ ಇತ್ತೀಚೆಗೆ ಮತ್ತಷ್ಟು ಹದಗೆಟ್ಟಿತ್ತು. ವೈದ್ಯರು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪತ್ನಿ ಸುನಿತಾ ಹಾಗೂ ಪುತ್ರರಾದ ಚಂದು ಮತ್ತು ಆರೋಮಲ್ ಅವರನ್ನು ಸಲೀಂ ಕುಮಾರ್ ಅಗಲಿದ್ದಾರೆ.

1969ರ ಅಕ್ಟೋಬರ್ 10ರಂದು ಕೇರಳದ ನಾರ್ತ್ ಪರವೂರ್‌ನಲ್ಲಿ ಜನಿಸಿದ ಸಲೀಂ ಕುಮಾರ್ ಅವರು ತಮ್ಮ ವಿದ್ಯಾಭ್ಯಾಸವನ್ನು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಬಾಲ್ಯದಿಂದಲೇ ಕಲೆಯತ್ತ ಆಸಕ್ತಿ ಹೊಂದಿದ್ದ ಅವರು ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ನಂತರ ವೇದಿಕೆ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿ, ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು.

ಆರಂಭದಲ್ಲಿ ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯರಾದ ಅವರು ತಮ್ಮ ವಿಶಿಷ್ಟ ಸಂಭಾಷಣಾ ಶೈಲಿ ಹಾಗೂ ಸಹಜ ಅಭಿನಯದಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದರು. ಹಾಸ್ಯ ನಟನಾಗಿ ಮಾತ್ರವಲ್ಲದೆ ಗಂಭೀರ ಪಾತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಬಹುಮುಖ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2010ರಲ್ಲಿ ಬಿಡುಗಡೆಯಾದ ‘ಅದಾಮಿಂಟೆ ಮಕನ್ ಅಬು’ ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿನ ಅದ್ಭುತ ನಟನೆಯ ಮೂಲಕ ಅವರು ಅತ್ಯುತ್ತಮ ನಟ ವಿಭಾಗದ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಸಾಮಾನ್ಯ ವ್ಯಕ್ತಿಯ ಜೀವನ ಹೋರಾಟವನ್ನು ಅವರು ತೆರೆ ಮೇಲೆ ಜೀವಂತವಾಗಿ ಮೂಡಿಸಿದ ರೀತಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಇದಲ್ಲದೆ ‘ಅಚಾನುರಂಗತಾ ವೀಡು’ ಚಿತ್ರದ ಅಭಿನಯಕ್ಕಾಗಿ ಕೇರಳ ರಾಜ್ಯದ ಎರಡನೇ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದರು. ನಟನೆಯ ಜೊತೆಗೆ ನಿರ್ದೇಶನ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದ ಅವರು, 2017ರಲ್ಲಿ ನಿರ್ದೇಶಿಸಿದ ‘ಕರುತ ಜೂಥನ್’ ಚಿತ್ರಕ್ಕೆ ಅತ್ಯುತ್ತಮ ಕಥೆ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಗಳಿಸಿದ್ದರು.

ಸಲೀಂ ಕುಮಾರ್ ಅವರ ಹೆಸರಿನ ಹಿಂದೆಯೂ ಒಂದು ವಿಶಿಷ್ಟ ಕಥೆಯಿದೆ. ಅವರ ತಂದೆ ಗಂಗಾಧರನ್ ಅವರು ನಾಸ್ತಿಕ ಚಿಂತನೆಗಳನ್ನು ಹೊಂದಿದ್ದವರು. ಧರ್ಮದ ಗಡಿ ರೇಖೆಗಳನ್ನು ಮೀರಿ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂಬ ಉದ್ದೇಶದಿಂದ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರತೀಕವಾಗಿ ‘ಸಲೀಂ ಕುಮಾರ್’ ಎಂಬ ಹೆಸರನ್ನು ಇಟ್ಟಿದ್ದರು. 

ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಲೀಂ ಕುಮಾರ್ ಅವರು ನೂರಾರು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. 

Exit mobile version