ನಟ ಮಡೆನೂರು ಮನು ಜೈಲಿನಿಂದ ರಿಲೀಸ್ ಬಳಿಕ ಸ್ಫೋಟಕ ಹೇಳಿಕೆ!

Web 2025 06 07t150452.621

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪದಡಿ ಜೈಲುವಾಸ ಅನುಭವಿಸಿದ್ದ ಮನು, ಜಾಮೀನಿನ ಮೇಲೆ ರಿಲೀಸ್ ಆಗಿದ್ದು, ಬಿಡುಗಡೆಯ ಬಳಿಕ ಮಾಧ್ಯಮಗಳಿಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ಮನು, ತಮ್ಮ ಸಿನಿಮಾ ರಿಲೀಸ್‌‌‌ಗೆ ಮುಂಚೆಯೇ ತಮ್ಮನ್ನು ಮುಗಿಸಲು ಯತ್ನಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಿವರಾಜ್‌ಕುಮಾರ್, ದರ್ಶನ್, ಮತ್ತು ಧ್ರುವ ಸರ್ಜಾ ಬಗ್ಗೆ ಆಡಿಯೋದಲ್ಲಿ ತಾವು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಡೆನೂರು ಮನು, ತಮ್ಮ ವಿರುದ್ಧ ಯೋಜಿತ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. “ನನ್ನ ವಿರುದ್ಧ ಪ್ರತಿ ಹಂತದಲ್ಲಿಯೂ ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್‌ಗೆ ಮುಂಚೆ ಕುಣಿಗಲ್ ಬಳಿ ಮೊಟ್ಟೆ ಎಸೆದರು, ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಗಿದ್ದವರೇ ಕೇಸ್ ಮಾಡಿಸಿದರು. ರೇಪ್ ಕೇಸ್‌‌‌‌‌ನಲ್ಲಿ ತಪ್ಪಿಸಿಕೊಂಡವರು, 50 ಸಾವಿರ ಖರ್ಚು ಮಾಡಿ ಆಡಿಯೋ ರೆಡಿಮಾಡಿ, ನನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದರು,” ಎಂದು ಆರೋಪಿಸಿದ್ದಾರೆ.

ADVERTISEMENT
ADVERTISEMENT

“ನಾನು ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಏನೂ ಮಾತನಾಡಿಲ್ಲ. ಆ ಆಡಿಯೋ ಕೇಳಿದರೆ ಅದರಲ್ಲೇ ಗೊತ್ತಾಗುತ್ತದೆ, ಮಧ್ಯೆ ಮಧ್ಯೆ ಕಟ್ ಮಾಡಿ ಜೋಡಿಸಿ ಏನೇನೋ ಮಾಡಿದ್ದಾರೆ. ಟೈಂ ಬಂದಾಗ ಎಲ್ಲ ನಿಜವನ್ನೂ ಹೊರಗೆ ತರ್ತೀನಿ.”

ಮನು ತಮ್ಮ ಕುಟುಂಬದ ಬಗ್ಗೆಯೂ ಮಾತನಾಡಿದ್ದು, “ಈಗ ಸದ್ಯಕ್ಕೆ ನನಗೆ ಊರಿಗೆ ಹೋಗಿ ನನ್ನ ಅಮ್ಮ ಮತ್ತು ಅಜ್ಜಿಯನ್ನು ನೋಡ್ಬೇಕು. ಯಾಕಂದ್ರೆ, ಅವರಿಗೆ ಗದ್ದ ಊದಿಕೊಂಡಿದೆಯಂತೆ, ಹುಶಾರಿಲ್ಲವಂತೆ. ಈ ವಿಷಯದ ಬಗ್ಗೆ ಆಮೇಲೆ ನೋಡ್ಕೋತೀನಿ,” ಎಂದಿದ್ದಾರೆ. ಜೊತೆಗೆ, ತಾವು ಮೊದಲು ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಸತ್ಯವನ್ನು ವಿವರಿಸಿ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.

ಮಡೆನೂರು ಮನು ತಮ್ಮ ಮೇಲಿನ ಅತ್ಯಾಚಾರ ಆರೋಪದ ಬಗ್ಗೆ ಕಾನೂನು ಹೋರಾಟ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ. “ನಾನು ಸಾಮಾನ್ಯ ಹಳ್ಳಿಹೈದ, ಮೂರು ವರ್ಷ ಹಗಲಿರುಳು ಕಷ್ಟಪಟ್ಟಿದ್ದೆ. ಆದರೆ ಎಲ್ಲವನ್ನೂ ಮುಗಿಸಿದರು. ಆದರೆ ಕಲೆ ತಾಯಿ ಶಾರದೆ ಕೈ ಬಿಡುವುದಿಲ್ಲ. ಆಡಿಯೋ ನನ್ನದಲ್ಲ ಎಂದು ಚಾಲೆಂಜ್ ಮಾಡಲು ಆಗಲ್ಲ. ಆದರೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ,” ಎಂದು ಹೇಳಿದ್ದಾರೆ.“ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನನ್ನು ಮುಗಿಸಿದರು. ಸಾಕಷ್ಟು ಅಡೆತಡೆಗಳ ನಡುವೆಯೂ ನನ್ನ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ರಿಲೀಸ್ ಆಯಿತು.”

ಮಡೆನೂರು ಮನು ಅವರನ್ನು ಮೇ 2025ರಲ್ಲಿ ಅತ್ಯಾಚಾರ ಮತ್ತು ಕ್ರಿಮಿನಲ್ ಭೀತಿ ಆರೋಪದಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದರು. ಸಹ-ನಟಿಯೊಬ್ಬರು ದಾಖಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಆರೋಪಿಯ ಪರವಾಗಿ ಯಾವುದೇ ಖಾಸಗಿ ವಿಡಿಯೋ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನದ ಬಳಿಕ, ಮನು ಅವರಿಗೆ ಜಾಮೀನು ಸಿಕ್ಕಿದ್ದು, ಜೂನ್ 7, 2025ರಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಮಡೆನೂರು ಮನು ಅವರ ಬಿಡುಗಡೆ ಮತ್ತು ಅವರ ಸ್ಫೋಟಕ ಹೇಳಿಕೆಗಳು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ತಮ್ಮ ವಿರುದ್ಧ ಯೋಜಿತ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ಮನು, ನ್ಯಾಯಾಲಯದ ಮೂಲಕ ಸತ್ಯವನ್ನು ಬಯಲಿಗೆ ತರಲು ನಿರ್ಧರಿಸಿದ್ದಾರೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಏನೆಂದು ಕಾದು ನೋಡಬೇಕಿದೆ.

Exit mobile version