ಲವ್ ಮಾಕ್ಟೇಲ್-3 ಚಿತ್ರದ ಕಥೆ ವಿವಾದ ಸುಖಾಂತ್ಯ

Untitled design (27)

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದ ‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ಕಥಾ ವಿವಾದ ಅಂತಿಮವಾಗಿ ಸುಖಾಂತ್ಯ ಕಂಡಿದೆ. ಚಿತ್ರದ ಕಥೆ ನಮ್ಮದು ಎಂದು ಆರೋಪಿಸಿದ್ದ ನಿರ್ದೇಶಕ ಗುರು ದೇಶಪಾಂಡೆ ಮತ್ತು ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ನಡುವಿನ ಕಿತ್ತಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಸಮ್ಮುಖದಲ್ಲಿ ಪೂರ್ಣವಿರಾಮ ಬಿದ್ದಿದೆ.

ವಿವಾದದ ಹಿನ್ನೆಲೆ:

ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಅವರು ‘ಲವ್ ಮಾಕ್ಟೇಲ್ 3’ ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಕೋರ್ಟ್ ರೂಂ ದೃಶ್ಯಗಳು ಮತ್ತು ಒಟ್ಟಾರೆ ಕಥೆಯ ಎಳೆ ತಮ್ಮದು ಎಂದು ಆರೋಪಿಸಿದ್ದರು. ನಾವು ಈ ಹಿಂದೆ ಕೃಷ್ಣ ಅವರಿಗೆ ಕಥೆ ಹೇಳಿದ್ದೆವು, ಆದರೆ ಆಗ ಅವರು ಒಪ್ಪಿರಲಿಲ್ಲ. ಈಗ ಸಿನಿಮಾ ನೋಡಿದ ಮೇಲೆ ಅದು ನಮ್ಮದೇ ಕಥೆ ಎಂದು ಅನಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಕೃಷ್ಣ ಅವರು ಸುದ್ದಿಗೋಷ್ಠಿ ನಡೆಸಿ, ಈ ಆರೋಪ ಸುಳ್ಳು ಎಂದು ಹೇಳಿದ್ದಲ್ಲದೆ ಗುರು ದೇಶಪಾಂಡೆ ಅವರ ವೈಯಕ್ತಿಕ ವಿಚಾರಗಳನ್ನು ಎಳೆದು ಅವರ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದು ವಿವಾದದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿತ್ತು.

ಮಾರ್ಚ್ 27ರಂದು ಹಿರಿಯ ನಟಿ ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸುದೀರ್ಘ ಸಭೆ ನಡೆಯಿತು. ಸಭೆಯಲ್ಲಿ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಮತ್ತು ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು. ಉಭಯ ತಂಡಗಳು ತಮ್ಮ ವಾದ-ಪ್ರತಿವಾದಗಳನ್ನು ಮಂಡಳಿಯ ಮುಂದೆ ಇರಿಸಿದವು.

ಸುದೀರ್ಘ ಚರ್ಚೆಯ ನಂತರ, ಇಬ್ಬರೂ ಕಥೆಗಾರರು ಒಂದೇ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದ್ದರೂ, ಇಬ್ಬರ ಚಿತ್ರಕಥೆ (Screenplay) ಸಂಪೂರ್ಣವಾಗಿ ಭಿನ್ನವಾಗಿದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಕಥೆಯಲ್ಲಿ ಸಾಮ್ಯತೆ ಇದ್ದರೂ ನಿರೂಪಣಾ ಶೈಲಿ ಬೇರೆ ಇರುವುದರಿಂದ ಇದು ಕದ್ದ ಅಥೆಯಲ್ಲ ಎಂದು ನಿರ್ಧರಿಸಲಾಯಿತು.

ಕ್ಷಮೆ ಕೇಳಿದ ಕೃಷ್ಣ

ಈ ವಿವಾದದ ನಡುವೆ ಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಗುರು ದೇಶಪಾಂಡೆ ಅವರ ಖಾಸಗಿ ಬದುಕಿನ ಬಗ್ಗೆ ನೀಡಿದ್ದ ಹೇಳಿಕೆಗಳು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು. ಸಭೆಯ ವೇಳೆ ಕೃಷ್ಣ ಅವರು ವೈಯಕ್ತಿಕ ನಿಂದನೆ ಮಾಡಿದ್ದಕ್ಕಾಗಿ ಗುರು ದೇಶಪಾಂಡೆ ಅವರಲ್ಲಿ ಅಧಿಕೃತವಾಗಿ ಕ್ಷಮೆ ಕೇಳಿದರು.

ರಾಘವೇಂದ್ರ ನಾಯ್ಕ್ ಮುಂದಿನ ನಡೆ ಏನು ?

ಈ ಹಿಂದೆ ರಾಘವೇಂದ್ರ ನಾಯ್ಕ್ ಅವರು ‘ಕೂಡಲಸಂಗಮ’ ಹೆಸರಿನ ಸಿನಿಮಾ ಮಾಡಲು ಸಜ್ಜಾಗಿದ್ದರು. ಅದರ ಕಥೆಯೂ ಇದೇ ಮಾದರಿಯಲ್ಲಿತ್ತು ಎನ್ನಲಾಗಿತ್ತು. ಈಗ ವಿವಾದ ಬಗೆಹರಿದಿರುವುದರಿಂದ ರಾಘವೇಂದ್ರ ನಾಯ್ಕ್ ತಮ್ಮ ಸ್ವಂತ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Exit mobile version