ನಿವೃತ್ತ ಯೋಧರಿಂದ ಬಿಡುಗಡೆಯಾಯಿತು “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ 

ಮಡನೂರ್ ಮನು - ಮೌನ ಗಡ್ಡೆಮನೆ ಅಭಿನಯದ‌ ಈ ಚಿತ್ರ ಮೇ 23 ರಂದು ಬಿಡುಗಡೆ

Untitled design 2025 05 11t210615.065

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ ನಟಿಸಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣವಾಯಿತು. ನಿವೃತ್ತ ಯೋಧರಾದ ಮಂಜುನಾಥ್, ಜಯರಾಮ್, ದೇವರಾಜ್, ಅಶೋಕ್ ಕುಮಾರ್, ಸತ್ಯಂ, ಮಧುಸೂದನ್, ಶೇಖರ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಕುಲದಲ್ಲಿ ಕೀಳ್ಯಾವುದೋ” ಟ್ರೇಲರ್ ದೇಶಕ್ಕೆ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಂದ ಬಿಡುಗಡೆಯಾಗಿದ್ದು ತುಂಬಾ ಖುಷಿ ಹಾಗೂ ಹೆಮ್ಮೆಯ ವಿಚಾರ. ಇನ್ನೂ ಚಿತ್ರದ ಬಗ್ಗೆ ಸಾಕಷ್ಟು ಹೇಳಿದ್ದೇನೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಮೇ 23 ರಂದು ಚಿತ್ರ ತೆರೆಗೆ ಬರಲಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಿ ಎಂದರು ನಿರ್ದೇಶಕ ರಾಮ್ ನಾರಾಯಣ್.

ದೇಶ ಕಾಯ್ದ ಯೋಧರಿಂದ ನಮ್ಮ ಚಿತ್ರದ ಬಿಡುಗಡೆಯಾಗಿದ್ದು ನನ್ನ‌ ಮನಸ್ಸಿಗೆ ಬಹಳ ಖುಷಿಯಾಗಿದೆ. ಈ ಸಂದರ್ಭದಲ್ಲಿ ನಾನು ಚಿತ್ರದ ವಿಚಾರಕ್ಕಿಂತ ಚಿತ್ರತಂಡದ ಕುರಿತು ಮಾತನಾಡುತ್ತೇನೆ. ಹೊಸ ನಿರ್ಮಾಪಕರನ್ನು ದುರ್ಬಳಿಕೆ ಮಾಡಿಕೊಳ್ಳುವವರು ಹೆಚ್ಚು ಅಂತ ನನಗೆ ಅನೇಕರು ಹೇಳಿದ್ದರು.

ಆದರೆ ನನ್ನ ಚಿತ್ರತಂಡ ನಿರ್ಮಾಪಕರ ಪರ ನಿಂತಿದೆ. ಯಾರಿಂದಲೂ ನನಗೆ ಯಾವ ವಿಷಯದಲ್ಲೂ ಬೇಜಾರಾಗಿಲ್ಲ. ಹಾಗಾಗಿ ಈ ಸಮಯದಲ್ಲಿ ನನಗೆ ಈ ತಂಡ ಪರಿಚಯಿಸಿದ ಯೋಗರಾಜ್ ಭಟ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಹಾಗೂ ನಮ್ಮ ಚಿತ್ರದಲ್ಲಿ ಬರುವ ಲಾಭದ ಮೂವತ್ತರಷ್ಟು ಭಾಗವನ್ನು ಯೋಧರಿಗೆ ಅರ್ಪಿಸುತ್ತೇನೆ ಎಂದು ನಿರ್ಮಾಪಕ ಸಂತೋಷ್ ಕುಮಾರ್ ತಿಳಿಸಿದರು. ನಿರ್ಮಾಪಕಿ ವಿದ್ಯಾ ಅವರು ಈ‌ ಸಂದರ್ಭದಲ್ಲಿದ್ದರು.

ನಮ್ಮ ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಒಂದೊಳ್ಳೆ ಕಥೆ ಮಾಡಿದ್ದಾರೆ. ಆ ಕಥೆ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸ ನನ್ನಗಿದೆ‌‌. ಹಾಗಾಗಿ ಕರ್ನಾಟಕದ ಉದ್ದಗಲಕ್ಕೂ ಪ್ರಚಾರ ಮಾಡುತ್ತಿದ್ದೇವೆ. ಇನ್ನೂ ನನ್ನ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರಿಗೆ, ನಿರ್ದೇಶಕರಿಗೆ, ವಿಶೇಷವಾಗಿ ಯೋಗರಾಜ್ ಭಟ್, ಶರಣಯ್ಯ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ ಎಂದರು ನಾಯಕ ಮಡೆನೂರ್ ಮನು.

ನಾಯಕಿ ಮೌನ ಗುಡ್ಡಮನೆ, ಕಲಾವಿದರಾದ ತಬಲ‌ನಾಣಿ, ಕರಿಸುಬ್ಬು, ಹರೀಶ್ ರಾಜ್, ಡ್ರ್ಯಾಗನ್ ಮಂಜು, ಸೀನ ಭಾಯ್ ಹಾಗೂ ಹಿರಿಯ ನಟ ಎಂ.ಎಸ್ ಉಮೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸೋನಾಲ್ ಮೊಂತೆರೊ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.

Exit mobile version