ಕೊತ್ತಲವಾಡಿಗೆ ಭರ್ಜರಿ ರೆಸ್ಪಾನ್ಸ್.. ಕ್ವಾಲಿಟಿಯಲ್ಲಿ ಯಶ್ ತಾಯಿ ನೋ ಕಾಂಪ್ರಮೈಸ್..!

ಕೊತ್ತಲವಾಡಿಗೆ ಭರ್ಜರಿ ರೆಸ್ಪಾನ್ಸ್..ಯಶ್ ತಾಯಿ ಖುಷ್

Web 2025 08 01t144405.686

ಮೊದಲ ಬಾಲ್‌ನಲ್ಲಿ ಬೌಂಡರಿ ಬಾರಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ. ನೆಗೆಟೀವ್ ಆಗಿ ಟ್ರೋಲ್ ಮಾಡ್ತಿದ್ದವ್ರಿಗೆ ಕೊತ್ತಲವಾಡಿ ಸಕ್ಸಸ್ ಮೂಲಕ ಗತ್ತಲ್ಲಿ ಉತ್ತರ ಕೊಟ್ಟಿದ್ದಾರೆ ಪುಷ್ಪ ಅರುಣ್‌‌ಕುಮಾರ್. ಹಾಗಾದ್ರೆ ಹೇಗಿದೆ ಕೊತ್ತಲವಾಡಿ..? ಕಥೆ ಏನು..? ಪೃಥ್ವಿ-ಗೋಪಾಲ್ ಕೃಷ್ಣ ದೇಶಪಾಂಡೆ ಜುಗಲ್ಬಂದಿ ಹೇಗಿದೆ.

ಅಣ್ತಮ್ಮಾ ಕಾಲು ಎಳೆಯೋರು ಯಾವಾಗ್ಲೂ ಕಾಲ ಕೆಳಗೇ ಇರ್ತಾರೆ ಅಂತ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಡೈಲಾಗ್ ಹೊಡೆದಿದ್ರು. ಇದೀಗ ಆಡಿಕೊಳ್ಳೋರ ಮುಂದೆ ಒಂದೊಳ್ಳೆ ಆಟ ಆಡಿ ತೋರಿಸಿದ್ದಾರೆ ರಾಕಿಭಾಯ್ ತಾಯಿ ಪುಷ್ಪ ಅರುಣ್ ಕುಮಾರ್. ಕೊತ್ತಲವಾಡಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ನ ಅನ್ನದಾತೆ ಆದ ಪುಷ್ಪ ಅವ್ರನ್ನ ಇತ್ತೀಚೆಗೆ ಇನ್ನಿಲ್ಲದೆ ಟ್ರೋಲ್ ಮಾಡಲಾಗಿತ್ತು. ಆದ್ರೀಗ ಜನ ಮೆಚ್ಚೋ ಸಿನಿಮಾ ನೀಡಿ, ಮೊದಲ ಬಾಲ್‌‌ನಲ್ಲೇ ಬೌಂಡರಿ ಬಾರಿಸಿದ್ದಾರೆ.

ಇದಲ್ಲವೇ ರಾಕಿಂಗ್‌ ಗತ್ತು, ಗಮ್ಮತ್ತು ಅಂತ ಎಲ್ಲಾ ಬಾಯ್ ಮೇಲೆ ಬೆರಳಿಟ್ಕೊಳ್ತಿದ್ದಾರೆ.  ಯಶ್ ಅವರ ತಾಯಿ ಪುಷ್ಪ ಅರುಣ್‌‌ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಕೊತ್ತಲವಾಡಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಪ್ರೇಕ್ಷಕರ ಜೊತೆ ವಿಮರ್ಶಕರಿಂದಲೂ ಭೇಷ್ ಅನಿಸಿಕೊಳ್ತಿದೆ. ರಿಲೀಸ್‌ಗೂ ಮೊದಲೇ ನಾಲ್ಕು ಪೇಯ್ಡ್ ಪ್ರೀಮಿಯರ್ ಶೋಗಳನ್ನ ಮಾಡಿದ್ದ ಚಿತ್ರತಂಡಕ್ಕೆ ಚಿತ್ರಪ್ರೇಮಿಗಳಿಂದ ಶಹಬ್ಬಾಸ್‌ಗಿರಿ ಸಿಕ್ಕಿದೆ.

ಇಂದು ಅನುಮಪ ಚಿತ್ರಮಂದಿರದಲ್ಲಿ ಕನ್ನಡ ಚಿತ್ರರಸಿಕರ ಜೊತೆ ತಮ್ಮ ಮೊದಲ ನಿರ್ಮಾಣದ ಸಿನಿಮಾ ವೀಕ್ಷಿಸಿದ ಪುಷ್ಪ ಅವರಿಗೆ ಡೈರೆಕ್ಟರ್ ಶ್ರೀರಾಜ್, ನಾಯಕನಟ ಪೃಥ್ವಿ ಅಂಬರ್ ಹಾಗೂ ನಾಯಕಿ ಕಾವ್ಯ ಶೈವಾ ಕೂಡ ಸಾಥ್ ನೀಡಿದ್ರು. ಪ್ರೇಕ್ಷಕರು ನೀಡಿದ ಭರ್ಜರಿ ರೆಸ್ಪಾನ್ಸ್‌ಗೆ ಕೃತಜ್ಞತೆ ಅರ್ಪಿಸಿದ ಪುಷ್ಪ, ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನ ಮಾಡುವ ಭರವಸೆ ನೀಡಿದ್ರು.

ಅಂದಹಾಗೆ ಕಾವೇರಿ ನದಿಯ ದಡದಲ್ಲಿರೋ ಕೊತ್ತಲವಾಡಿ ಅನ್ನೋ ಊರು, ಮರಳು ಮಾರಿಕೊಂಡು ಜೀವನ ಸಾಗಿಸೋ ಜನ, ಅಲ್ಲಿನ ಲೋಕಲ್ ಪಾಲಿಟಿಕ್ಸ್, ಪೊಲೀಸ್ ವ್ಯವಸ್ಥೆ ಮೇಲೆ ಈ ಚಿತ್ರ ಬೆಳಕು ಚೆಲ್ಲಿದೆ. ಪೃಥ್ವಿ ಅಂಬರ್ ಮೋಹನ ಪಾತ್ರದಲ್ಲಿ ಮನಮೋಹಕವಾಗಿ ಅಭಿನಯಿಸಿದ್ದಾರೆ. ಕಾವ್ಯ ಶೈವಾ ಚೊಚ್ಚಲ ಚಿತ್ರದಲ್ಲೇ ಬೆಳ್ಳಿತೆರೆಯ ಬಂಗಾರದ ನಟಿಯಾಗೋ ಸೂಚನೆ ನೀಡಿದ್ದಾರೆ. ಕಥಾನಾಯಕ ಪೃಥ್ವಿ ಆದ್ರೂ ಗೋಪಾಲ್ ದೇಶ್‌‌ಪಾಂಡೆ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.

ಗೋಪಾಲ್ ದೇಶ್‌ಪಾಂಡೆ ಮೊದಲಾರ್ಧ ಒಳ್ಳೆಯವನಾಗಿ ದ್ವಿತಿಯಾರ್ಧದಲ್ಲಿ ನೆಗೆಟೀವ್ ಶೇಡ್‌‌ನಲ್ಲಿ ಕರಿಯಲ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಸ್ಕ್ರೀನ್‌ ಸ್ಪೇಸ್ ನೀಡೋದ್ರ ಜೊತೆಗೆ ಗೋಪಾಲ ಕೃಷ್ಣ ದೇಶ್‌ಪಾಂಡೆಯಲ್ಲಿರೋ ಅದ್ಭುತ ಕಲಾವಿದನನ್ನ ಹೊರತೆಗೆಯುವ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ ಡೈರೆಕ್ಟರ್. ಇನ್ನು ಪೃಥ್ವಿ ಮತ್ತಷ್ಟು ಮಾಗಿದ್ದು, ಆ್ಯಕ್ಷನ್, ಲವ್, ಎಮೋಷನಲ್ ಹೀಗೆ ಎಲ್ಲಾ ಸೀಕ್ವೆನ್ಸ್‌‌ಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಚೇತನ್ ಗಂಧರ್ವ ವಿಲನ್ ಆಗಿ ಕಾಣಸಿಗಲಿದ್ದು, ಕಾಂತಾರದಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಪೋಷಿಸಿದ್ದ ಮಾನಸಿ ಸುಧೀರ್, ರಾಜಕಾರಣಿಯಾಗಿ ಮಿಂಚಿದ್ದಾರೆ. ಮಾನಸಿ ಅವ್ರ ಪಾತ್ರ ಕೂಡ ಗಮನ ಸೆಳೆಯಲಿದ್ದು, ಈ ಪಾತ್ರವನ್ನು ಯಶ್ ಅವರ ತಾಯಿ ಪುಷ್ಪ ಅವರೇ ಮಾಡಿದ್ದಿದ್ರೆ, ಸಿನಿಮಾ ಮತ್ತಷ್ಟು ಹೈಪ್ ಪಡೆಯುತ್ತಿತ್ತು ಅನಿಸದೇ ಇರದು. ಇನ್ನು ರಾಜೇಶ್ ನಟರಂಗ, ಅವಿನಾಶ್ ಎಸ್‌ಪಿ ಹಾಗೂ ಕಮಿಷನರ್‌‌ಗಳಾಗಿ, ಇನ್ಸ್‌ಪೆಕ್ಟರ್ ಆಗಿ ಬಲರಾಜ್ವಾಡಿ ಖಾಕಿ ಖದರ್ ತೋರಿದ್ದಾರೆ.

ಕಾರ್ತಿಕ್ ಸಿನಿಮಾಟೋಗ್ರಫಿ, ವಿಕಾಸ್ ವಸಿಸ್ಠ ಸಂಗೀತ, ರಾಮಿಶೆಟ್ಟಿ ಪವನ್ ಸಂಕಲನ ಚಿತ್ರಕ್ಕೆ ಪ್ಲಸ್ ಆಗಿದ್ದು, ಡೈರೆಕ್ಟರ್ ಇನ್ನು ಕೊಂಚ ಹೋಮ್‌ ವರ್ಕ್‌ ಮಾಡಬೇಕಿತ್ತು ಅನಿಸಲಿದೆ. ಲಾಂಗ್ ಡ್ರೈವ್ ಅನ್ನೋ ಸಿನಿಮಾ ಮಾಡಿದ್ದ ಶ್ರೀರಾಜ್, ಕಥೆ, ಪಾತ್ರಗಳು ಹಾಗೂ ಮೇಕಿಂಗ್‌ ವಿಚಾರದಲ್ಲಿ ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ದಾರೆ ಆದ್ರೂ, ಕೆಲವೊಂದು ದೃಶ್ಯಗಳಲ್ಲಿ ನಿರೀಕ್ಷಿತ ಮಟ್ಟದ ಕ್ರೌಡ್‌‌ನ ತಂದು ಚಿತ್ರಿಸುವಲ್ಲಿ ವಿಫಲವಾಗಿದ್ದಾರೆ. ಅದೊಂದು ಬಿಟ್ಟರೆ ಸ್ಯಾಂಡಲ್‌ವುಡ್ ಮಟ್ಟಿಗೆ ಕೊತ್ತಲವಾಡಿ ಒಳ್ಳೆಯ ಪ್ರಯೋಗ.

ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರೋ ಮಗ ಯಶ್‌ರನ್ನು ಬಳಸಿಕೊಳ್ಳದೆ, ಪಿಎ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ತಾಯಿ ಪುಷ್ಪ ಹಾಗೂ ತಂದೆ ಅರುಣ್‌ಕುಮಾರ್ ಚಿತ್ರರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಕಂಟೆಂಟ್ ಬೇಸ್ಡ್ ಸಿನಿಮಾ ಮೂಲಕ ಜನಕ್ಕೆ ಮಸ್ತ್ ಮನರಂಜನೆ ಕೊಡೋ ಪ್ರಾಜೆಕ್ಟ್ ಕೊಡುಗೆಯಾಗಿ ನೀಡಿದ್ದಾರೆ. ಅವ್ರ ಸಿನಿಮೋತ್ಸಾಹ ಇದ್ರಿಂದ ಇಮ್ಮಡಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಎಕ್ಕ, ಸು ಫ್ರಮ್ ಸೋ, ಜೂನಿಯರ್ ಸಕ್ಸಸ್ ಬೆನ್ನಲ್ಲೇ ಕೊತ್ತಲವಾಡಿ ಕೂಡ ಪ್ರೇಕ್ಷಕರ ದಿಲ್ ದೋಚುತ್ತಿರೋದು ಸ್ಯಾಂಡಲ್‌ವುಡ್‌ಗೆ ನಿಜಕ್ಕೂ ಶ್ರಾವಣದಲ್ಲಿ ಶುಕ್ರದೆಸೆ ಬಂದಂತಾಗಿದೆ.

Exit mobile version