ಬಿಗ್‌‌ ಸರ್‌‌‌ಪ್ರೈಸ್ ಕೊಟ್ಟ ಕಿಚ್ಚ ಸುದೀಪ್..4 ಚಿತ್ರ..ಒಂದಕ್ಕೆ ಡೈರೆಕ್ಷನ್

BRB, ರಾಮ್‌ಕಾಮ್, ಸಮುದ್ರಕಣಿ ಚಿತ್ರಗಳಲ್ಲಿ ಕಿಚ್ಚ ಬ್ಯುಸಿ

ರೆಸ್ಟ್‌ ಮೋಡ್‌‌ನಲ್ಲಿದ್ದ ಬಾದ್‌ಷಾ ಕಿಚ್ಚ ಸುದೀಪ್ ಬಿಗ್ ಬ್ರೇಕಿಂಗ್ ನ್ಯೂಸ್ ಕೊಡೋಕೆ ಸಜ್ಜಾಗಿದ್ದಾರೆ. ಗಾಯಗೊಂಡ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅಂತಾರಲ್ವಾ..? ಅದೇ ರೀತಿ ಒಂದಲ್ಲ ಎರಡಲ್ಲ ಬರೋಬ್ಬರಿ 4 ಸಿನಿಮಾಗಳ ಮೂಲಕ ಬಿಗ್ ಸರ್‌‌ಪ್ರೈಸ್ ಕೊಡ್ತಿದ್ದಾರೆ ಅಭಿನಯ ಚಕ್ರವರ್ತಿ. ಆ ಪೈಕಿ ಒಂದಕ್ಕೆ ಅವರೇ ಡೈರೆಕ್ಷನ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿಯುತ್ತಿರೋದು ಹೈಲೈಟ್. ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ…

ಮ್ಯಾಕ್ಸ್ ಮತ್ತು ಮಾರ್ಕ್.. ಕಿಚ್ಚ ಸುದೀಪ್ ಕರಿಯರ್‌ನ ಹೈ-ವೋಲ್ಟೇಜ್ ಮಾಸ್ ಎಂಟರ್‌ಟೈನರ್ಸ್. ಮಾರ್ಕ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹಾಗೂ ಪ್ರಮೋಷನ್ಸ್ ವೇಳೆ ಮಾರ್ಕ್ ಮೈ ವರ್ಡ್ಸ್.. ಇನ್ಮೇಲೆ ವರ್ಷಕ್ಕೆ ಒಂದು ಅಥ್ವಾ ಎರಡು ಸಿನಿಮಾ ಕೊಟ್ಟೇ ಕೊಡ್ತೀನಿ ಅನ್ನೋ ಭರವಸೆ, ಆಶ್ವಾಸನೆ ನೀಡಿದ್ರು ಸುದೀಪ್. ಆದ್ರೆ ಅದು ಸುಳ್ಳಾಯ್ತು. ಯಾಕಂದ್ರೆ ಮಾರ್ಕ್ ಬಳಿಕ ಆಲ್ಮೋಸ್ಟ್ ಅರ್ಧ ವರ್ಷ ಕಳೆದು ಹೋಯ್ತು. ಇಲ್ಲಿಯ ತನಕ ಕಿಚ್ಚ ಯಾವುದೇ ಚಿತ್ರಕ್ಕಾಗಿ ಬಣ್ಣ ಹಚ್ಚಲೇ ಇಲ್ಲ. ಕಂಪ್ಲೀಟ್ ರೆಸ್ಟ್ ಮೋಡ್‌‌ನಲ್ಲಿದ್ದಾರೆ.

ಮಾರ್ಕ್ ಚಿತ್ರದ ವೇಳೆಯೇ ಬಿಡುವು ಮಾಡಿಕೊಂಡು ಕೆಡಿ ಚಿತ್ರದಲ್ಲಿ ಭಾಗಿಯಾಗಿದ್ರು ಸುದೀಪ್. ಆ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆ ಕೂಡ ಆಯ್ತು. ಆದ್ರೀಗ ಇಷ್ಟು ದಿನ ಸೈಲೆಂಟ್ ಆಗಿದ್ದ ಕಿಚ್ಚ, ಇದೀಗ ನಿರೀಕ್ಷೆ ಮೀರಿದ ರೇಂಜ್‌ಗೆ ಬ್ಯುಸಿ ಆಗಲು ಸಜ್ಜಾಗಿದ್ದಾರೆ. ಹೌದು.. ಈ ವರ್ಷ ಒಂದಲ್ಲ ಎರಡಲ್ಲ ಬರೋಬ್ಬರಿ 4 ಸಿನಿಮಾಗಳನ್ನ ಅನೌನ್ಸ್ ಮಾಡ್ತಿದ್ದಾರೆ. ಆ ಪೈಕಿ ಒಂದಕ್ಕೆ ಅವರೇ ಆ್ಯಕ್ಷನ್ ಕಟ್ ಹೇಳಿ, ಲೀಡ್‌‌ನಲ್ಲಿ ನಟಿಸ್ತಾರಂತೆ.

ಯೆಸ್.. ಮಾಣಿಕ್ಯ ಚಿತ್ರದ ಬಳಿಕ ತಮ್ಮಲ್ಲಿರೋ ನಿರ್ದೇಶಕನಿಗೆ ಬಿಗ್ ರೆಸ್ಟ್ ನೀಡಿದ್ದ ಕಿಚ್ಚ, ಇದೀಗ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು, ಆ್ಯಕ್ಷನ್ ಕಟ್ ಹೇಳೋಕೆ ರೆಡಿ ಆಗಿದ್ದಾರಂತೆ. ಮೂರು ವರ್ಷಗಳ ಹಿಂದೆಯೇ ಬರ್ತ್ ಡೇ ದಿನ ಡೈರೆಕ್ಷನ್ ಮಾಡೋದಾಗಿ ಅನೌನ್ಸ್ ಮಾಡಿದ್ರು ಸುದೀಪ್. ಅದಕ್ಕೀಗ ಸಮಯ ಕೂಡಿ ಬಂದಿದೆ. ಸದ್ಯದಲ್ಲೇ ತಾವು ನಿರ್ದೇಶಿಸಿ, ನಟಿಸಲಿರೋ ಸಿನಿಮಾ ಕುರಿತ ಅಧಿಕೃತ ಡಿಟೈಲ್ಸ್ ಹೊರಬೀಳಲಿದೆ.

ಇಂಟರೆಸ್ಟಿಂಗ್ ಅಂದ್ರೆ ಈಗಾಗ್ಲೇ ಒಂದು ಶೆಡ್ಯೂಲ್ ಮುಗಿಸಿರೋ ಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಕೂಡ ಸದ್ಯದಲ್ಲೇ ಕಿಕ್‌‌ಸ್ಟಾರ್ಟ್ ಆಗಲಿದೆಯಂತೆ. ಯಾಕಂದ್ರೆ ಅದೊಂದು ಮಹತ್ವಾಕಾಂಕ್ಷೆಯ ಬಿಗ್ ಬಜೆಟ್ ಚಿತ್ರವಾಗಿದ್ದು, ಬಹಳಷ್ಟು ತಯಾರಿ ಬೇಕಾಗಿದೆ. ಸೋ.. ಅನೂಪ್ ಭಂಡಾರಿ ಅದ್ರ ಪೂರ್ವ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಯಾವಾಗಿಂದ ಚಿತ್ರೀಕರಣ ಮತ್ತೆ ಶುರುವಾಗ್ತಿದೆ ಅನ್ನೋದ್ರ ಮಾಹಿತಿ ಸದ್ಯದಲ್ಲೇ ನೀಡಲಿದ್ದಾರೆ.

ಇವಲ್ಲದೆ ಸುಕುಮಾರ್ ಶಿಷ್ಯ ನಿರ್ದೇಶನದಲ್ಲಿ ಒಂದೊಳ್ಳೆ ರಾಮ್‌ಕಾಮ್ ಜಾನರ್ ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ರು ಬಾದ್‌ಷಾ. ಬಿಲ್ಲ ರಂಗ ಬಾಷ ಚಿತ್ರದ ಜೊತೆ ಜೊತೆಗೆ ಅದರ ಶೂಟಿಂಗ್ ಶುಭಾರಂಭ ಆಗಲಿದೆ ಎನ್ನಲಾಗ್ತಿದೆ. ಅಲ್ಲದೆ, ಇತ್ತೀಚೆಗೆ ಯಾರೇ ಕೂಗಾಡಲಿ ಸಿನಿಮಾ ಖ್ಯಾತಿಯ ಬಹುಭಾಷಾ ನಿರ್ದೇಶಕ ಕಮ್ ನಟ ಸಮುದ್ರಕಣಿ ಜೊತೆ ಸುದೀಪ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬೋನಲ್ಲಿ ನ್ಯೂ ಪ್ರಾಜೆಕ್ಟ್ ಆರಂಭ ಆಗಲಿದೆ ಅನ್ನೋ ಖುಷಿ ನ್ಯೂಸ್ ಕೂಡ ಹೊರಬಿದ್ದಿದೆ.

ಇವಲ್ಲದೆ, ತಮ್ಮ ಸೋದರಳಿಯ ಸಂಚಿತ್‌‌ನ ಸಿಲ್ವರ್ ಸ್ಕ್ರೀನ್‌ಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ ಸುದೀಪ್. ಮ್ಯಾಂಗೋ ಪಚ್ಚ ನೆಕ್ಸ್ಟ್ ವೀಕ್ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಅದರ ಫಸ್ಟ್ ಕಾಪಿ ತಯಾರಿಸಿ, ಕ್ಯೂಬ್ & ಯುಎಫ್‌ಓಗೆ ಕೊಡೋದ್ರಲ್ಲಿ ಕಿಚ್ಚ ಬ್ಯುಸಿ. ಇನ್ನೂ ಈ ನಾಲ್ಕು ಪ್ರಾಜೆಕ್ಟ್‌‌ಗಳ ಜೊತೆ ಜೊತೆಗೆ ಬಿಗ್‌ಬಾಸ್ ಮುಂದಿನ ಸೀಸನ್‌ಗೂ ಸದ್ಯದಲ್ಲೇ ಬಣ್ಣ ಹಚ್ಚಲಿದ್ದಾರೆ. ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‌‌ಗೂ ಚಾಲನೆ ನೀಡಲಿದ್ದಾರೆ ಸುದೀಪ್. ಸೋ.. ಬಾದ್‌ಷಾ ಫ್ಯಾನ್ಸ್‌ಗೆ ಕಿಚ್ಚನಿಂದ ಧಮಾಕೇದಾರ್ ನ್ಯೂಸ್ ಹೊರಬೀಳುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version