ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಗ್ರೀನ್ ಸಿಗ್ನಲ್: ಹೈಕೋರ್ಟ್ ತಡೆಯಾಜ್ಞೆ ತೆರವು

ಕೇರಳ ರಾಜ್ಯ ಮತ್ತು ಅಲ್ಲಿನ ಜನರನ್ನು ತಪ್ಪು ದಾರಿಯಲ್ಲಿ ಚಿತ್ರಿಸಲಾಗಿದೆ ಎಂಬ ಆರೋಪದ ನಡುವೆ, ‘ದಿ ಕೇರಳ ಸ್ಟೋರಿ 2’ ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಶುಕ್ರವಾರ ಅನುಮತಿ ನೀಡಿದೆ. ಈ ಹಿಂದೆ ಏಕಸದಸ್ಯ ಪೀಠವು ನೀಡಿದ್ದ 15 ದಿನಗಳ ತಡೆಯಾಜ್ಞೆಯನ್ನು ರದ್ದುಗೊಳಿಸಿದೆ.

ಈ ಮೊದಲು ಚಿತ್ರದ ಟ್ರೇಲರ್ ಮತ್ತು ಟೀಸರ್ ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದ ಏಕಸದಸ್ಯ ಪೀಠವು, ಚಿತ್ರವು ಕೋಮು ಸಾಮರಸ್ಯಕ್ಕೆ ಧಕ್ಕೆ ತರಬಹುದು ಮತ್ತು ಕೇರಳದ ಜನರನ್ನು ‘ಸ್ಟೀರಿಯೊಟೈಪ್’ (ಒಂದೇ ಮಾದರಿಯ ಕೆಟ್ಟ ಚಿತ್ರಣ) ಮಾಡಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿಯ (CBFC) ಪ್ರಮಾಣಪತ್ರವಿದ್ದರೂ 15 ದಿನಗಳ ಕಾಲ ಬಿಡುಗಡೆಗೆ ಮಧ್ಯಂತರ ತಡೆ ನೀಡಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಚಿತ್ರದ ಬಿಡುಗಡೆಯನ್ನು ತಡೆಯುವುದು ಸರಿಯಲ್ಲ ಎಂದು ತೀರ್ಪು ನೀಡಿದೆ.

ವಿವಾದದ ಹಿನ್ನೆಲೆ ಏನು ?

ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರವು ಆನ್‌ಲೈನ್‌ನಲ್ಲಿ ಟೀಸರ್ ಬಿಡುಗಡೆಯಾದ ದಿನದಿಂದಲೇ ವಿವಾದದ ಸುಳಿಗೆ ಸಿಲುಕಿತ್ತು. ಶ್ರೀದೇವ್ ನಂಬೂದಿರಿ ಎಂಬುವವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಈ ಚಿತ್ರವು ಕೇರಳದ ಅಸ್ಮಿತೆಯನ್ನು ಕೆಡಿಸುತ್ತದೆ ಮತ್ತು ಸಮಾಜದಲ್ಲಿ ದ್ವೇಷ ಬಿತ್ತುತ್ತದೆ. ಆದ್ದರಿಂದ ಇದರ U/A ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಚಿತ್ರತಂಡವು ಇದು ಸತ್ಯ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಪ್ರತಿಪಾದಿಸುತ್ತಲೇ ಬಂದಿದೆ. ಆದರೆ, ಸೆನ್ಸಾರ್ ಮಂಡಳಿಯು ಸರಿಯಾಗಿ ಪರಿಶೀಲಿಸದೆ ಚಿತ್ರಕ್ಕೆ ಅನುಮೋದನೆ ನೀಡಿದೆ ಎಂದು ನ್ಯಾಯಾಲಯದ ಆರಂಭಿಕ ವಿಚಾರಣೆಯಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.

ಸನ್‌ಶೈನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಈಗ ಕಾನೂನು ಹೋರಾಟದಲ್ಲಿ ಜಯಗಳಿಸಿದೆ. ವಿಭಾಗೀಯ ಪೀಠದ ಈ ತೀರ್ಪಿನಿಂದಾಗಿ ಚಿತ್ರವು ನಿಗದಿತ ದಿನದಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ.

Exit mobile version