ಅಪ್ಪು ನೆಚ್ಚಿನ ಡೈರೆಕ್ಟರ್..‘ಕವಳ’ಗಾಗಿ ಕನ್ನಡಕ್ಕೆ ಸಮುದ್ರಕಣಿ..!

ಶಿವಣ್ಣ ಮೆಚ್ಚಿದ ಕವಳ.. ‘ಕಾಡು ಮಲ್ಲೇಶ್ವರ’ನ ಆಶೀರ್ವಾದ..!

Untitled design 2026 02 26T140541.958

ಗೂಗ್ಲಿ ಸಂದೀಪ್ ಈಸ್ ಬ್ಯಾಕ್. ಒಂದು ದೊಡ್ಡ ಗ್ಯಾಪ್‌‌ನ ಬಳಿಕ ಯಶ್ ಹುಡುಗ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ. ಕವಳ ಸಿನಿಮಾ ಅಫಿಶಿಯಲಿ ಸೆಟ್ಟೇರಿದ್ದು, ಅಪ್ಪು ನೆಚ್ಚಿನ ಡೈರೆಕ್ಟರ್ ಸಮುದ್ರಕಣಿ ಚಂದನವನಕ್ಕೆ ಮತ್ತೆ ಹೆಜ್ಜೆ ಇಟ್ಟಿದ್ದಾರೆ. ಇಷ್ಟಕ್ಕೂ ಕವಳ ಅಂಡರ್‌‌ವರ್ಲ್ಡ್‌ ಕಥೆನಾ..? ಯಾರೆಲ್ಲಾ ಇದ್ದಾರೆ..? ಟೀಂ ಏನು ಹೇಳುತ್ತೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.

ರಾಜರತ್ನ, ಕರ್ನಾಟಕ ರತ್ನ, ಡಾ. ಪುನೀತ್ ರಾಜ್‌‌ಕುಮಾರ್ ನಟನೆಯ ಹುಡುಗರು ಸಿನಿಮಾಗೆ ಕಥೆ ಬರೆದು, ಯಾರೇ ಕೂಗಾಡಲಿ ಸಿನಿಮಾಗೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದ ತಮಿಳಿನ ಖ್ಯಾತ ನಟ ಕಮ್ ನಿರ್ದೇಶಕ ಸಮುದ್ರಕಣಿ ಬಹಳ ವರ್ಷಗಳ ನಂತ್ರ ನಮ್ಮ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಿದ್ದಾರೆ. ಆದ್ರೆ ಈ ಬಾರಿ ಅವರು ನಿರ್ದೇಶಕರಾಗಿ ಅಲ್ಲ. ಬದಲಿಗೆ ನಟರಾಗಿ ಅನ್ನೋದು ವಿಶೇಷ. ಯೆಸ್.. ಇತ್ತೀಚೆಗೆ ಖಳನಾಯಕ ಹಾಗೂ ಪೋಷಕನಟನಾಗಿ ಮಿಂಚು ಹರಿಸುತ್ತಿರೋ ಸಮುದ್ರಕಣಿ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿರೋದು ವಿಶೇಷ.

ಅಂದಹಾಗೆ ಸಮುದ್ರಕಣಿ ನಟಿಸ್ತಿರೋ ಕನ್ನಡ ಸಿನಿಮಾದ ಹೆಸರು ಕವಳ. ಶಿವರಾತ್ರಿ ಹಬ್ಬದಂದೇ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌‌ಕುಮಾರ್ ತಮ್ಮ ನಿವಾಸದಲ್ಲಿ ಈ ಚಿತ್ರದ ಟೈಟಲ್ ಲಾಂಚ್ ಮಾಡಿದ್ರು. ಇದೀಗ ಈ ಸಿನಿಮಾ ಸೆಟ್ಟೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಬಂದು ಕ್ಲಾಪ್ ಮಾಡಿ, ಇಡೀ ಟೀಂಗೆ ಶುಭ ಹಾರೈಸಿದ್ದಾರೆ. ಇಂಟರೆಸ್ಟಿಂಗ್‌ ಅಂದ್ರೆ ಈ ಚಿತ್ರ ಮಲ್ಲೇಶ್ವರಂನಲ್ಲಿರೋ ಕಾಡು ಮಲ್ಲೇಶ್ವರನ ಆಲಯದಲ್ಲಿ ಮುಹೂರ್ತ ಕಂಡಿದೆ. ಅದಕ್ಕೆ ಸಮುದ್ರಕಣಿ ಕೂಡ ಸಾಕ್ಷಿ ಆಗಿರೋದು ಮತ್ತೊಂದು ಹೈಲೈಟ್.

ನನ್ನ ಫೇವರಿಟ್ ಹೀರೋ ಪುನೀತ್ ರಾಜ್‌ಕುಮಾರ್ ಎಂದ ಸಮುದ್ರಕಣಿ, ಇಲ್ಲಿ ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿ ಅಂತೇನಿಲ್ಲ. ನಮ್ಮದೆಲ್ಲಾ ಇಂಡಿಯನ್ ಇಂಡಸ್ಟ್ರಿ ಎಂದರು. ಅಲ್ಲದೆ ಕವಳ ಚಿತ್ರದಲ್ಲಿ ತಮ್ಮ ಪಾಲ್ಕೆ ರೋಲ್ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಶ್ರೀಜೈ ನಿರ್ದೇಶನದಲ್ಲಿ ತಯಾರಾಗ್ತಿರೋ ಈ ಸಿನಿಮಾ ಔಟ್ ಅಂಡ್ ಔಟ್ ಮಾಸ್ ಆ್ಯಕ್ಷನ್ ವೆಂಚರ್ ಆಗಿರಲಿದೆ. ಒಂದಷ್ಟು ನೈಜ ಘಟನೆ ಆಧಾರಿತ ಅಂಶಗಳ ಮೇಲೆ ಈ ಚಿತ್ರ ಕೂಡಿರಲಿದ್ದು, ನಾಯಕಿ ಫೈನಲ್ ಆಗಬೇಕಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಕಿಶೋರ್, ಬಲರಾಜ್ವಾಡಿ, ಪ್ರಕಾಶ್ ತುಮ್ಮಿನಾಡ್ ಸೇರಿದಂತೆ ಸಾಕಷ್ಟು ಮಂದಿ ನುರಿತ ಕಲಾವಿದರ ದಂಡು ಈ ಚಿತ್ರಕ್ಕಿರಲಿದೆ.

ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದಿದ್ದ ಸಂದೀಪ್ ಈ ಕವಳ ಚಿತ್ರದ ನಾಯಕನಟ. ಯಶ್ ಹುಡುಗ ಈ ಬಾರಿ ಸಿಕ್ಸರ್ ಹೊಡೆಯಲೇಬೇಕು ಅಂತ ಟೊಂಕ ಕಟ್ಟಿ ನಿಂತಿದ್ದಾರೆ. ಹಾಫ್ ಮೆಂಟ್ಲು ಚಿತ್ರದ ಮೂಲಕ ತಮ್ಮ ನಟನಾ ಗತ್ತು ತೋರಿದ್ದ ಸಂದೀಪ್, ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆದ್ರೀಗ ಒಂದು ಭಿನ್ನ ಕಥೆಯ ಮುಖೇನ ವಿಭಿನ್ನ ಬಗೆಯ ಸಿನಿಮಾ ಹಾಗೂ ಜನರಿಗೆ ರುಚಿಸೋ ಚಿತ್ರ ನೀಡೋಕೆ ಸಜ್ಜಾಗಿದ್ದಾರೆ.

ಸಂದೀಪ್ ಮತ್ತೆ ಹೀರೋ ಆಗಿ ಬೆಳ್ಳಿತೆರೆ ಮೇಲೆ ರಾರಾಜಿಸೋಕೆ ಹಾಗೂ ಆತನ ಕನಸನ್ನ ನನಸು ಮಾಡೋಕೆ ನಿರ್ಮಾಪಕ ಅಡವಯ್ಯ ಪೂಜಾರ್ ಮತ್ತು ಲೋಕೇಶ್ ಬಿ ಸಾಥ್ ನೀಡ್ತಿದ್ದಾರೆ. ಸಂದೀಪ್‌‌ಗೆ ಬಹಳ ವರ್ಷಗಳ ಸ್ನೇಹಿತರಾಗಿರೋ ನಿರ್ಮಾಪಕರು, ಈ ಸಿನಿಮಾನ ಬಹುಕೋಟಿ ವೆಚ್ಚದಲ್ಲಿ, ಬಿಗ್ ಸ್ಕೇಲ್‌‌ನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version