ಹಾಸ್ಯ ಕಲಾವಿದ ಹಾಗೂ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಇತ್ತೀಚೆಗೆ ನಿಧನರಾದರು. ಅವರ ಅಂತಿಮಕಾರ್ಯ ಹುಟ್ಟೂರಿನಲ್ಲಿ ನಡೆಯಿತು. ರಾಕೇಶ್ ಅವರ ಅಂತಿಮ ದರ್ಶನಕ್ಕೆ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಹಲವು ಸಿನಿಮಾ ಸೆಲೆಬ್ರಿಟಿಗಳು, ಸಹ ಕಲಾವಿದರು ಆಗಮಿಸಿದ್ದರು. ನಿರ್ದೇಶಕ ಯೋಗರಾಜ್ ಭಟ್, ರಕ್ಷಿತಾ, ಅನುಶ್ರೀ, ಮಾಸ್ಟರ್ ಆನಂದ್ ಹಾಗೂ ಕಾಮಿಡಿ ಕಿಲಾಡಿಗಳ ಸ್ನೇಹಿತರು ರಾಕೇಶ್ಗೆ ಅಂತಿಮ ಗೌರವ ಸಲ್ಲಿಸಲು ತೆರಳಿದ್ದರು. ಆದರೆ, ‘ಕಾಂತಾರ ಚಾಪ್ಟರ್ 1’ ಸಿನಿಮಾದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ, ರಾಕೇಶ್ ಅವರ ಅಂತಿಮ ದರ್ಶನಕ್ಕೆ ಆಗಮಿಸದಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ರಿಷಬ್ ಶೆಟ್ಟಿ ಉಡುಪಿ ಬಳಿಯ ಬೈಂದೂರಿನಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ರಾಕೇಶ್ ಪೂಜಾರಿಯ ಮನೆಯಿಂದ ಬೈಂದೂರು ಕೇವಲ 30 ಕಿಮೀ ದೂರದಲ್ಲಿದೆ. ಆದರೂ, ರಿಷಬ್, ರಾಕೇಶ್ ಅವರ ಅಂತಿಮಕಾರ್ಯಕ್ಕೆ ಭಾಗಿಯಾಗಲಿಲ್ಲ. ಈ ಘಟನೆ ನಡೆದು ಮೂರು ದಿನ ಕಳೆದರೂ, ರಿಷಬ್ ಶೆಟ್ಟಿ, ರಾಕೇಶ್ ಅವರ ಕುಟುಂಬವನ್ನು ಭೇಟಿಯಾಗಿಲ್ಲ. ಇದು ನೆಟ್ಟಿಗರಲ್ಲಿ ಅಸಮಾಧಾನ ಹುಟ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ರಿಷಬ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ರಾಕೇಶ್ ಪೂಜಾರಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. “500 ಕಿಮೀ ದೂರದಿಂದ ಬಂದವರ ನಡುವೆ 30 ಕಿಮೀ ದೂರದಲ್ಲಿದ್ದ ರಿಷಬ್ಗೆ ಬರಲು ಸಮಯವಿಲ್ಲವೇ?” ಎಂದು ಕೆಲವರು ಪ್ರಶ್ನಿಸಿದ್ದಾರೆ. “ಕಲಾವಿದನಿಗಿಂತ ಕಮರ್ಷಿಯಲ್ ಲಾಭವೇ ಮುಖ್ಯವಾಯಿತೇ?” ಎಂದು ಇನ್ನೊಬ್ಬರು ಕಿಡಿಕಾರಿದ್ದಾರೆ. “ಸಹಕಲಾವಿದನ ಜೀವಕ್ಕೆ ಇಷ್ಟೊಂದು ಕಡಿಮೆ ಬೆಲೆಯೇ?” ಎಂಬ ಆಕ್ರೋಶದ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಿಷಬ್ ಶೆಟ್ಟಿ ರಾಕೇಶ್ ಅಂತಿಮ ದರ್ಶನಕ್ಕೆ ಆಗಮಿಸದಿದ್ದರೂ, ಅವರ ನಿಧನದ ದಿನವೇ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸಂದೇಶ ಹಂಚಿಕೊಂಡಿದ್ದರು. “ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಮತ್ತು ನಿನ್ನ ಮುಖದ ನಗು ಎಂದೆಂದಿಗೂ ನನ್ನ ಕಣ್ಣಿನಲ್ಲಿ ಶಾಶ್ವತ. ಕಲಾವಿದರಿಗೆ ಇದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ನಿನ್ನ ಕುಟುಂಬಕ್ಕೆ ಈ ಆಘಾತ ಸಹಿಸುವ ಶಕ್ತಿ ನೀಡಲಿ” ಎಂದು ರಾಕೇಶ್ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದರು. ಹೊಂಬಾಳೆ ಫಿಲಮ್ಸ್ ಕೂಡ ರಾಕೇಶ್ ನಿಧನಕ್ಕೆ ಸಂತಾಪ ಸೂಚಿಸಿತ್ತು.
ಆದರೆ, ಟ್ವೀಟ್ನಲ್ಲಿ ಸಂತಾಪ ಸೂಚಿಸುವುದರಿಂದ ಮಾತ್ರ ಸಾಕಾಗುತ್ತದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕೇವಲ 30 ಕಿಮೀ ದೂರದಲ್ಲಿದ್ದು, ಸಹಕಲಾವಿದನ ಅಂತಿಮಕಾರ್ಯಕ್ಕೆ ಆಗಮಿಸದಿರುವುದು ರಿಷಬ್ ಶೆಟ್ಟಿಯ ವೈಯಕ್ತಿಕ ಹಾಗೂ ವೃತ್ತಿಪರ ನಡವಳಿಕೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಕಲಾವಿದರೊಂದಿಗಿನ ಸಂಬಂಧ ಮತ್ತು ಸಹಾನುಭೂತಿಯನ್ನು ತೋರಿಸುವಲ್ಲಿ ರಿಷಬ್ ಕೈಗೊಂಡ ನಿರ್ಧಾರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಒಳಗಾಗಿದೆ.
