ಶಿವಾಜಿ ಸುರತ್ಕಲ್ ಚಿತ್ರದಲ್ಲಿ ನಟಿಸಿರುವ ನಟ ಧನುಷ್‌ ರಾಜ್‌‌ ಪತ್ನಿ ವಿರುದ್ಧ ಹಲ್ಲೆ ಆರೋಪ

BeFunky collage 2026 01 07T112428.593

ಕನ್ನಡ ಚಿತ್ರರಂಗ ಮತ್ತು ಧಾರಾವಾಹಿಯಲ್ಲಿ ಗುರುತಿಸಿಕೊಂಡಿರುವ ನಟ ಧನುಷ್ ರಾಜ್ ಅವರು ತಮ್ಮ ಪತ್ನಿ ಅರ್ಷಿತಾ ವಿರುದ್ಧ ಗಂಭೀರ ಆರೋಪಗಳೊಂದಿಗೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಶಿವಾಜಿ ಸುರತ್ಕಲ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಧನುಷ್ ರಾಜ್, ಪತ್ನಿಯಿಂದ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಮತ್ತು ಕೊಲೆ ಬೆದರಿಕೆಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಅರ್ಷಿತಾ ಅವರು ಧನುಷ್ ರಾಜ್ ಅವರ ಮೇಲೆ ಅನುಮಾನಗೊಂಡು ಆಗಾಗ ಹಲ್ಲೆ ನಡೆಸುತ್ತಿದ್ದರು. ವಿದೇಶ ಪ್ರವಾಸದಲ್ಲಿ ಬೇರೆ ಯುವತಿಯೊಂದಿಗೆ ಹೋಗಿದ್ದೀಯ ಎಂದು ಸುಳ್ಳು ಆರೋಪ ಮಾಡಿ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಇದಲ್ಲದೆ, ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಧನುಷ್ ಆರೋಪಿಸಿದ್ದಾರೆ. ವಿದೇಶಕ್ಕೆ ಹೋಗಿದ್ದು ಕೆಲಸದ ಮೇರೆಗೆ ಮಾತ್ರ ಎಂದು ಸ್ಪಷ್ಟೀಕರಣ ನೀಡಿದರೂ ಪತ್ನಿ ಕೇಳದೆ ಹಲ್ಲೆ ಮಾಡಿದ್ದಾರೆ ಎಂಬುದು ದೂರಿನಲ್ಲಿ ಉಲ್ಲೇಖವಿದೆ.

ಇದು ಸಾಕಾಗದೇ, ತಾನೇ ಹಲ್ಲೆ ಮಾಡಿದ್ದೇನೆ ಎಂದು ಬಿಂಬಿಸಲು ಪತ್ನಿ ನಾಟಕ ಮಾಡಿದ್ದಾರೆ ಎಂದು ಧನುಷ್ ಹೇಳಿದ್ದಾರೆ. ತಾನೆ ಬಾತ್‌ರೂಂ ಗಾಜಿಗೆ ಕೈ ಹೊಡೆದುಕೊಂಡು ಗಾಯ ಮಾಡಿಕೊಂಡು ನಾನೇ ಹಲ್ಲೆ ಮಾಡಿದ್ದೇನೆ ಎಂದು ತೋರಿಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಹಿಂಸೆಗಳಿಂದ ಬೇಸತ್ತು ಸದ್ಯ ಪತ್ನಿಯ ಕಾಟ ಸಹಿಸಲಾಗದೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಧನುಷ್ ರಾಜ್ ಕನ್ನಡ ಚಿತ್ರರಂಗದಲ್ಲಿ ಹಲವು ನಟ-ನಟಿಯರೊಂದಿಗೆ ಕೆಲಸ ಮಾಡಿ ಗುರುತಿಸಿಕೊಂಡವರು. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಮಿಂಚಿದ್ದ ಅವರು ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಆದರೆ ಈಗ ದಾಂಪತ್ಯ ಜೀವನದಲ್ಲಿ ಉಂಟಾದ ತೊಡಕುಗಳು ಅವರನ್ನು ಪೊಲೀಸ್ ಠಾಣೆ ಮೆಟ್ಟಿಲೇರಿಸಿವೆ. ಪತ್ನಿ ಅರ್ಷಿತಾ ಅವರ ಮೇಲಿನ ಅನುಮಾನ ಮತ್ತು ದೌರ್ಜನ್ಯದಿಂದ ಧನುಷ್ ದಿನನಿತ್ಯ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಆಘಾತಗೊಂಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಕೆ ಆರಂಭಿಸಿದ್ದಾರೆ. ದಂಪತಿಗಳ ನಡುವಿನ ಈ ವಿವಾದಕ್ಕೆ ಶೀಘ್ರ ನ್ಯಾಯ ದೊರೆಯಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ದಾಂಪತ್ಯ ಜೀವನದಲ್ಲಿ ಅನುಮಾನ ಮತ್ತು ಹಿಂಸೆಯಂತಹ ಸಮಸ್ಯೆಗಳು ಎಷ್ಟು ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.

ಸೆಲೆಬ್ರಿಟಿಗಳ ಖಾಸಗಿ ಜೀವನದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಲ್ಲ ಆದರೆ ಅವುಗಳು ಬಯಲಿಗೆ ಬಂದಾಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗುತ್ತವೆ. ಧನುಷ್ ರಾಜ್ ಅವರಂತೆ ಹಲವು ಕಲಾವಿದರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಪಡೆದರೂ ಖಾಸಗಿ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಾರೆ. ಪೊಲೀಸ್ ತನಿಕೆಯಿಂದ ಸತ್ಯಾಂಶಗಳು ಬಯಲಾಗಲಿ ಮತ್ತು ನ್ಯಾಯ ದೊರೆಯಲಿ ಎಂದು ಆಶಿಸುತ್ತೇವೆ.

Exit mobile version