ಕನ್ನಡ ಚಿತ್ರರಂಗದಲ್ಲಿ ಕಮಲ್ ಹಾಸನ್ ಒಬ್ಬ ಪ್ರತಿಭಾವಂತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಂದೇ ಖ್ಯಾತರಾಗಿದ್ದಾರೆ. ಆದರೆ, ಇತ್ತೀಚೆಗೆ ಕನ್ನಡ ಭಾಷೆಯ ಕುರಿತು ಖ್ಯಾತ ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆಯು ಕನ್ನಡಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಕನ್ನಡ ಚಿತ್ರರಂಗದ ಸಂಭಾಷಣೆಗಾರ ಮಾಸ್ತಿ ಉಪ್ಪಾರಹಳ್ಳಿ ಅವರು ಕೂಡ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ರವರ ವಿವಾದಾತ್ಮಕ ಹೇಳಿಕೆ ಕುರಿತು, ಮಾಸ್ತಿಯವರು ಕನ್ನಡದ ಬಗ್ಗೆ ಅವರಿಗೆ ಸರಿಯಾದ ತಿಳಿವಳಿಕೆ ಇಲ್ಲ ಎಂದು ಆರೋಪಿಸಿದ್ದಾರೆ.
ಒಂದು ಬಾರಿ ಕಮಲ್ ಹಾಸನ್ರವರು ಒಬ್ಬ ನಿರ್ದೇಶಕನನ್ನು ಕತೆ ಕೇಳಲು ತಮ್ಮ ಮನೆಗೆ ಆಹ್ವಾನಿಸಿದ್ದರು. ನಿರ್ದೇಶಕನೊಬ್ಬರು ಕಮಲ್ರವರ ಬಂಗಲೆಗೆ ಆಗಮಿಸಿ, ಮೊದಲನೇ ಮಹಡಿಯ ವರಾಂಡದಲ್ಲಿ ಕುಳಿತು ಕಾಫಿ ಸೇವಿಸುತ್ತಾ ಕತೆಯನ್ನು ವಿವರಿಸಿದರು. ಕತೆ ಮುಗಿದ ನಂತರ ಕಮಲ್ರವರು ಆ ಕತೆ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ತಿರಸ್ಕರಿಸಿದರು. ಆಗ ಆಘಾತಗೊಂಡ ನಿರ್ದೇಶಕರು ಜೋರಾಗಿ ಮೇಜಿನ ಮೇಲೆ ಕೈ ಕುಟ್ಟಿ, “ಈ ಕತೆ ಹಂಡ್ರೆಡ್ ಪರ್ಸೆಂಟ್ ವರ್ಕ್ ಆಗುತ್ತದೆ ಸಾರ್” ಎಂದು ಆತ್ಮವಿಶ್ವಾಸದಿಂದ ಹೇಳಿ ಅಲ್ಲಿಂದ ಹೊರಟುಬಿಟ್ಟರು.
ಗಾಬರಿಯಾದ ಕಮಲ್ರವರು ತಮ್ಮ ಸಹಾಯಕನಿಗೆ ಆ ನಿರ್ದೇಶಕರನ್ನು ವಾಪಸ್ ಕರೆತರಲು ಹೇಳಿದರು. ಮೆಟ್ಟಿಲಿಳಿಯುತ್ತಿದ್ದ ನಿರ್ದೇಶಕರನ್ನು ಕರೆತಂದು ಮತ್ತೆ ಕಾಫಿ ಕುಡಿಸಿ, ಕಮಲ್ರವರು ಪ್ರಶ್ನಿಸಿದರು, “ನೀವು ಈ ಕತೆಯ ಬಗ್ಗೆ ಇಷ್ಟು ಆತ್ಮವಿಶ್ವಾಸದಿಂದ ಹೇಗೆ ಮಾತನಾಡುತ್ತೀರಿ?” ಎಂದು ಪ್ರೆಶ್ನಿಸಿದರು.. “ನೀವು ನನ್ನನ್ನು ಕರೆಸಿದ್ದೇ ನಾನು ಒಂದು ಯಶಸ್ವಿ ಚಿತ್ರ ಕೊಟ್ಟಿದ್ದಕ್ಕೆ. ಆದರೆ, ನಾನು ಇಲ್ಲಿ ಬಂದು ಹೇಳಿದ ಕತೆಯೇ ಈಗ ಥಿಯೇಟರ್ನಲ್ಲಿ ಓಡುತ್ತಿರುವ, ಯಶಸ್ವಿಯಾದ ಚಿತ್ರದ ಕತೆ. ನೀವು ಅದನ್ನು ನೋಡಿಲ್ಲ ಎಂದು ತಿಳಿದುಬಂದಾಗ, ನಿಮಗೆ ಕತೆಯ ಬಗ್ಗೆ ಜ್ಞಾನವಿಲ್ಲ ಎಂದು ಅರ್ಥವಾಯಿತು,” ಎಂದು ನಿರ್ದೇಶಕರು ತಿರುಗೇಟು ನೀಡಿದರು.
ಕತೆಯ ಬಗ್ಗೆಯೇ ಸರಿಯಾದ ತಿಳಿವಳಿಕೆ ಇಲ್ಲದ ಕಮಲ್ರವರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಚಿತ್ರರಂಗದ ಹಿನ್ನೆಲೆಯ ಬಗ್ಗೆ ತಿಳಿವಳಿಕೆ ಇರಲು ಸಾಧ್ಯವೇ ಎಂದು ಆಕ್ಷೇಪಿಸಿದ್ದಾರೆ. ಕನ್ನಡ ನೆಲೆಯ ಬಗ್ಗೆ ಸರಿಯಾಗಿ ತಿಳಿಯದೆ ಕನ್ನಡದ ಬಗ್ಗೆ ಮಾತನಾಡುವುದು ಅಕ್ಷಮ್ಯ ತಪ್ಪು ಎಂದು ಮಾಸ್ತಿಯವರು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. “ನಾಲಿಗೆ ಇರುವುದು ನಮ್ಮ ಆಹಾರಕ್ಕಾಗಿ, ಮತ್ತೊಬ್ಬರ ನಾಲಿಗೆಗೆ ಆಹಾರವಾಗಲು ಅಲ್ಲ” ಎಂದು ಬರೆದುಕೊಂಡಿದ್ದಾರೆ.