ಏಳುಮಲೆ ಸೆನ್ಸಾರ್ ಪಾಸ್.. ತರುಣ್ ಪ್ರಾಮಿಸಿಂಗ್ ಪ್ರಾಜೆಕ್ಟ್

U/A ಪ್ರಮಾಣ ಪತ್ರ.. ಸೆ- 5ಕ್ಕೆ ಏಳುಮಲೆ ಗ್ರ್ಯಾಂಡ್ ರಿಲೀಸ್..!

Untitled design 2025 08 27t144402.603

ಏಳುಮಲೆ.. ಕಂಟೆಂಟ್‌‌ನಿಂದಲೇ ಭರವಸೆ ಮೂಡಿಸಿರೋ ಸ್ಯಾಂಡಲ್‌ವುಡ್‌‌ನ ಅಪ್‌ಕಮಿಂಗ್‌ ಪ್ರಾಜೆಕ್ಟ್. ಅದಕ್ಕೆ ಕಾರಣ ಸಕ್ಸಸ್‌‌ಫುಲ್ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ತರುಣ್ ಸುಧೀರ್. ಯೆಸ್.. ತರುಣ್ ಒಂದೊಳ್ಳೆ ತಂಡ ಕಟ್ಟಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸೋಕೆ ಬರ್ತಿದ್ದಾರೆ. ಅದು ಸೆನ್ಸಾರ್ ಕೂಡ ಪಾಸ್ ಆಗಿದ್ದು, ಕಂಪ್ಲೀಟ್ ಕಹಾನಿ ಇಲ್ಲಿದೆ.

ಏಳುಮಲೆ.. ಮೈಸೂರಿನ ಚಾಮರಾಜನಗರ ಹಾಗೂ ತಮಿಳುನಾಡು ಬಾರ್ಡರ್‌‌ನಲ್ಲಿ ನಡೆಯುವ ಕಥಾನಕದ ಚಿತ್ರ. ಒಂದಷ್ಟು ನೈಜ ಘಟನೆಗಳನ್ನ ಆಧರಿಸಿ ತಯಾರಾಗಿರೋ ಈ ಸಿನಿಮಾ, ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಟನಾಗಿ ಬಣ್ಣ ಹಚ್ಚಿರೋ ಈ ಚಿತ್ರಕ್ಕೆ ಮಹಾನಟಿ ಫೇಮ್ ಪ್ರಿಯಾಂಕಾ ನಾಯಕಿ.

ಇವರಿಬ್ಬರ ನವಿರಾದ ಪ್ರೇಮಕಥೆ ಕ್ರೈಂ ಕಥೆಯಾಗಿ ಮಾರ್ಪಾಡಾಗುವ ಚಿತ್ರವಿದು. ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಸಿನಿಮಾದ ಟೀಸರ್ ಹಾಗೂ ಸಾಂಗ್ಸ್ ಸಖತ್ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಅದಕ್ಕೆ ಪ್ರಮುಖ ಕಾರಣ ತರುಣ್ ಸುಧೀರ್. ಹೌದು.. ಚೌಕ, ರಾಬರ್ಟ್‌ ಹಾಗೂ ಕಾಟೇರ ಚಿತ್ರಗಳ ನಿರ್ದೇಶಕ, ಸಾಲು ಸಾಲು ಶರಣ್ ಸಿನಿಮಾಗಳ ಹಿಂದಿನ ಮಾಸ್ಟರ್‌ಮೈಂಡ್ ತರುಣ್. ಈ ಚಿತ್ರದ ನಿರ್ಮಾಪಕರೂ ಹೌದು.

ಸದಾ ಪ್ರೇಕ್ಷಕರಿಗೆ ರುಚಿಸುವಂತಹ ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ಕೊಡೋದ್ರಲ್ಲಿ ತರುಣ್ ಪಂಟರ್. ಹೌದು.. 2022ರಲ್ಲಿ ನಟ ಶರಣ್‌‌ ಜೊತೆ ಗುರುಶಿಷ್ಯರು ಸಿನಿಮಾನ ನಿರ್ಮಾಣ ಮಾಡಿ, ಅದಕ್ಕೆ ಕ್ರಿಯೇಟಿವ್ ಹೆಡ್ ಆಗಿಯೂ ಕೆಲಸ ಮಾಡಿದ್ರು ತರುಣ್. ಇದೀಗ ಮೂರು ವರ್ಷಗಳ ನಂತ್ರ ಏಳುಮಲೆ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಇಲ್ಲಿಯೂ ತಮ್ಮ ಕ್ರಿಯಾಶೀಲತೆ ಮೆರೆದಿದ್ದಾರೆ. ಅಂದಹಾಗೆ ಏಳುಮಲೆ ಸಿನಿಮಾ ಇದೇ ಸೆಪ್ಟೆಂಬರ್ 5ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಸೆನ್ಸಾರ್‌‌ನಿಂದ ಯುಎ ಪ್ರಮಾಣ ಪತ್ರ ದೊರೆತಿದೆ.

ಹೌದು.. ಟೀಸರ್ ನೋಡಿದಾಗ ನಮಗೆ ಇದೊಂದು ಕ್ರೈಂ ಥ್ರಿಲ್ಲರ್ ಅನಿಸಲಿದೆ. ಕ್ರೈಂ ಅಂದಾಕ್ಷಣ ಮಕ್ಕಳು ಹಾಗೂ ಫ್ಯಾಮಿಲಿ ಆಡಿಯೆನ್ಸ್ ಥಿಯೇಟರ್‌ ಕಡೆ ಬರೋದು ಕಮ್ಮಿ ಆಗಲಿದೆ. ಆದ್ರೆ ಸೆನ್ಸಾರ್ U/A ಸರ್ಟಿಫಿಕೇಟ್ ನೀಡಿದ್ದು, ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಅನಿಸಿಕೊಂಡಿದೆ. ಡಿ ಇಮ್ಮಾನ್ ಸಂಗೀತ ಸಂಯೋಜನೆಯ ಹಾಡುಗಳು ಒಂದಕ್ಕಿಂತ ಒಂದು ಇಂಪ್ರೆಸ್ಸೀವ್ ಆಗಿದ್ದು, ಗೌರಿ-ಗಣೇಶ ಹಬ್ಬದ ವಿಶೇಷ ಬಿಡುಗಡೆ ಆಗಿರೋ ಆನುಮಳೆ ಜೇನುಮಳೆ ಸಾಂಗ್ ಸಖತ್ ವೈಬ್ರೆಂಟ್ ಆಗಿದೆ.

ಏಕ್ ಲವ್ ಯಾ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದ ರಾಣಾಗೆ ಈ ಸಿನಿಮಾ ಬಹುದೊಡ್ಡ ಹೆಸರು ತಂದುಕೊಡೋ ಸಾಧ್ಯತೆಯಿದೆ. ನಟನೆಯಲ್ಲಿ ಮತ್ತಷ್ಟು ಮಾಗಿರೋ ರಾಣಾ, ಪ್ರಾಮಿಸಿಂಗ್ ಆಗಿ ಕಾಣ್ತಿದ್ದಾರೆ. ಇನ್ನು ಮಹಾನಟಿ ಶೋನಲ್ಲಿ ಪ್ರಿಯಾಂಕಾ ಆಚಾರ್ ನಟನೆ ಮೆಚ್ಚಿ, ತರುಣ್ ಸುಧೀರ್ ಅವರೇ ನಾಯಕಿಯಾಗಿ ಆಕೆಗೆ ಬಡ್ತಿ ನೀಡಿದ್ದಾರೆ. ಸೋ ಏಳುಮಲೆ ಅಸಲಿ ಕಥೆ ಸೆಪ್ಟೆಂಬರ್ 5ಕ್ಕೆ ಬೆಳ್ಳಿಪರದೆ ಮೇಲೆ ಬಹಿರಂಗವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version