ಕನ್ನಡಿಗರ ಹೃದಯ ಸಿಂಹಾಸನಕ್ಕೆ ಅಣ್ಣಾವ್ರೇ ‘ರಾಜ’!

19ನೇ ಪುಣ್ಯಸ್ಮರಣೆ.. ಕುಟುಂಬಸ್ಥರಿಂದ ವಿಶೇಷ ಪೂಜೆ

Film 2025 04 12t125032.619

ಡಾ. ರಾಜ್‌ಕುಮಾರ್‌.. ಗಂಧದಗುಡಿಯ ನಂದಾದೀಪ. ಚಂದನವನ ಕಂಡ ಅಪರೂಪದ ಕನ್ನಡದ ಕಣ್ಮಣಿ. ಅಮೋಘ ಅಭಿನಯದಿಂದಲೇ ಸಮಾಜದಲ್ಲಿ ಕ್ರಾಂತಿ ಮಾಡಿದವರು. ದೈಹಿಕವಾಗಿ ರಾಜಣ್ಣ ನಮ್ಮನ್ನಗಲಿ 19 ವರ್ಷಗಳಾಯ್ತು. ಆದ್ರೆ ಕನ್ನಡಿಗರ ಹೃದಯ ಸಿಂಹಾಸನಕ್ಕೆ ಇವ್ರೇ ಆಲ್ ಟೈಂ ‘ರಾಜ’ರು.

ರಸಿಕರ ರಾಜ, ರಾಜ ಮಾರ್ತಾಂಡ, ನಟಸಾರ್ವಭೌಮ, ಗಾನಗಂಧರ್ವ, ವೀರಕೇಸರಿ, ಕನ್ನಡ ಕಲಾತಪಸ್ವಿ, ಕನ್ನಡ ಜ್ಯೋತಿ, ಕಲಾ ರತ್ನ, ಕನ್ನಡ ಕೌಸ್ತುಭ, ಮರೆಯಲಾಗದ ಮುತ್ತು, ಕನ್ನಡಿಗರ ಸ್ವತ್ತು ಡಾ ರಾಜ್​ಕುಮಾರ್ ಇಂದು ನಮ್ಮೊಂದಿಗಿಲ್ಲ. ಭೌತಿಕವಾಗಿ ಅವರು ನಮ್ಮಿಂದ ದೂರವಾಗಿ 19 ವರ್ಷಗಳಾಯ್ತು. ಆದ್ರೆ ಸಿನಿಮಾಗಳು ಹಾಗೂ ಸಾಮಾಜಿಕ ಕಳಕಳಿಯ ಪಾತ್ರಗಳಿಂದ ಕನ್ನಡಿಗರ ಹೃದಯಂತರಾಳದಲ್ಲಿ ಅಣ್ಣಾವ್ರು ಸದಾ ಚಿರಾಯು.

ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಹೆಮ್ಮರವಾಗಿ ಬೆಳೆದ ಡಾ ರಾಜ್​ಕುಮಾರ್, ತಮ್ಮ ಅತ್ಯದ್ಭುತ ನಟನೆಯಿಂದಲೇ ಕನ್ನಡದ ಕಸ್ತೂರಿಯ ಮಕರಂಧವನ್ನ ವಿಶ್ವಕ್ಕೆ ಪಸರಿಸಿದವರು. ನಯಕ್ಕೆ ಇವ್ರದ್ದು ಪರ್ಯಾಯ ನಾಮ. ವಿನಯಕ್ಕೆ ಇವರು ಶ್ರೇಷ್ಠ ನಿದರ್ಶನ. ಈ ನಯ-ವಿನಯಗಳೇ ಅಣ್ಣಾವ್ರ ಅಭಿನಯ ಚತುರತೆಗೆ ಮೆರುಗು ನೀಡಿತು.

ಬಾಲ್ಯದಲ್ಲೇ ಹತ್ತು ಹಲವು ಅಗ್ನಿದಿವ್ಯಗಳನ್ನೆದುರಿಸಿ, ಪುಟಕ್ಕಿಟ್ಟ ಬಂಗಾರವಾದವ್ರು ಡಾ ರಾಜ್​ಕುಮಾರ್. ಸಂಸ್ಕಾರದಿಂದಲೇ ಅಪ್ಪಟ ಚಿನ್ನವಾಗಿ ಹೊರಹೊಮ್ಮಿದವ್ರು. ಅವ್ರ ನುಡಿ ಮುತ್ತಿನಹಾರದಂತೆ, ಅವ್ರ ಹಾಡು ಜೇನಿನ ಹೊಳೆಯಂತೆ. ಅವ್ರ ನಗು ಬೆಳದಿಂಗಳಷ್ಠೇ ಪರಿಶುದ್ಧ, ನಿಷ್ಕಲ್ಮಶ್ಮ.

ಸ್ವಚ್ಚ ಕನ್ನಡವನ್ನ ಉಚ್ಚರಿಸೋ ಅವ್ರ ಬಾಯಲ್ಲಿ ಕನ್ನಡವನ್ನ ಕೇಳೋದೇ ಒಂಥರಾ ಚೆಂದ. ಕಲ್ಲು ಸಕ್ಕರೆ ಸವಿದಂತೆ ಅದು ಶುದ್ದ, ಸರಳ, ಸೌಜನ್ಯಪೂರ್ಣ ಮತ್ತು ಸೌಹಾರ್ದಮಯ ಭಾಷೆ ಅನಿಸೋದ್ರಲ್ಲಿ ಎರಡು ಮಾತಿಲ್ಲ. ಅವರ ಭಾವವೂ ಕೂಡ ಹಾಗೆಯೇ ಇತ್ತು. ಹಾಗಾಗಿಯೇ ಮನೆಯವರ, ನೆರೆಯವರ, ಕುಲಕೋಟಿ ಕನ್ನಡಿಗರ ಮನಗೆದ್ದರು ಅಣ್ಣಾವ್ರು.

ಸೌತ್ ಸಿನಿ ದುನಿಯಾದ ಆಧಾರಸ್ತಂಭಗಳಲ್ಲಿ ಒಂದಾದ ಇವರು ಕರ್ನಾಟಕದ ನಿಜವಾದ ರತ್ನ. ಕನ್ನಡ ಚಿತ್ರಲೋಕದ ಬೆಳ್ಳಿಚುಕ್ಕಿಯಾಗಿ, ಪದ್ಮಭೂಷಣ ಡಾ ರಾಜ್​ಕುಮಾರ​ರಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾದರು. ಹಾಗಂತ ಎಂದೂ ಗಗನಚುಕ್ಕಿಯಾಗಿ ಮೆರೆದವರಲ್ಲ. ಭರಚುಕ್ಕಿಯಾಗಿ ಕನ್ನಡ ನಾಡು, ನುಡಿ, ಜಲಕ್ಕಾಗಿ ಅಪ್ಪಟ ಕನ್ನಡಿಗನಾಗಿ ಜನರ ಜೊತೆ ತಾನೂ ಬೀದಿಗಿಳಿದು ಹೋರಾಡಿದ್ದು ಇತಿಹಾಸ.

ಡಾ ರಾಜ್ ಬರೀ ವ್ಯಕ್ತಿ ಅಲ್ಲ.. ಅದೊಂದು ದಿವ್ಯ ಶಕ್ತಿ, ಅಭಿಮಾನಿಗಳನ್ನೇ ದೇವರುಗಳೆಂದ ಸರ್ವ ಶ್ರೇಷ್ಠ ನಟ

ಡಾ.ರಾಜ್​ರ ಕನ್ನಡ ಪ್ರೇಮದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು ಅಂತ ಬಯಿಸದವ್ರು. ಅಂದು, ಇಂದು ಮುಂದೆಂದೂ ಕನ್ನಡಿಗರೆಲ್ಲರ ಆಶಯ ಕೂಡ ಅದೇ ಆಗಿದೆ. ಕೋಟಿ ಕೋಟಿ ಕನ್ನಡಿಗರ ಹೃದಯದಲ್ಲಿ ನೆಲೆಸಿರೋ ರಾಜ್, ಯಾವತ್ತೂ ತಾನೊಬ್ಬ ಸೂಪರ್ ಸ್ಟಾರ್ ಅಂತ ಮೆರೆದವರಲ್ಲ. ನಾನು ಕನ್ನಡಿಗರ ಸ್ವತ್ತು, ಕನ್ನಡದ ಮಗ, ನಿಮ್ಮವ ಅಂತಲೇ ಹೇಳಿಕೊಂಡಿರೋ ಅಪರೂಪದ ವಿಡಿಯೋ ಒಮ್ಮೆ ನೋಡಿ.

ರಾಜ್​ಕುಮಾರ್ ಅನ್ನೋರು ಅವ್ರ ಸ್ವಂತದಿಂದ ಬಂದವ್ರಲ್ಲ. ಉದ್ಭವಮೂರ್ತಿ ಅಂತು ಅಲ್ಲವೇ ಅಲ್ಲ. ರಾಜಕುಮಾರ ಕನ್ನಡದವ್ರ ಸ್ವತ್ತು. ಕನ್ನಡದ ಮಗ. ಹಾಗಾಗಿ ರಾಜಕುಮಾರ ನಿಮಗೆ ಸಂಬಂಧಪಟ್ಟವರು, ನಿಮ್ಮವರು ಅಂತ ಹೇಳಿಬಿಟ್ಟರೆ ಸಾಕು.

ಇನ್ನು ಡಾ. ರಾಜ್ ಕುಮಾರ್ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದಂತೆ ಅದೊಂದು ಪವಾಡ ಕ್ಷೇತ್ರವಾಗಿಬಿಟ್ಟಿದೆ. ಅಲ್ಲಿ ಮಕ್ಕಳಿಗೆ ಹೆಸರಿಡಲಾಗುತ್ತೆ. ಮಾಂಗಲ್ಯ ಧಾರಣೆ ಆಗಲಿದೆ. ಪ್ರತೀ ದಿನ ರಾಜ್ಯ, ದೇಶ, ವಿದೇಶಗಳಿಂದ ಸಾವಿರಾರು ಮಂದಿ ಸ್ಮಾರಕಕ್ಕೆ ಬಂದು ಹೋಗ್ತಿದ್ದಾರೆ. ಇನ್ನು ಪ್ರತೀ ವರ್ಷ ಏಪ್ರಿಲ್ 12 ಹಾಗೂ ಏಪ್ರಿಲ್ 24ರಂದು ದೊಡ್ಮನೆಯ ಕುಟುಂಬಸ್ಥರು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಂದು ಕೂಡ ನಟ ರಾಘವೇಂದ್ರ ರಾಜ್‌ಕುಮಾರ್, ಅಣ್ಣಾವ್ರ ಪುತ್ರಿ ಲಕ್ಷ್ಮೀ, ಮೊಮ್ಮಗ ಷಣ್ಮುಖ ಸೇರಿದಂತೆ ರಾಜ್ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಿ, ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು.

ಒಟ್ಟಾರೆ ರಾಜ್‌‌ಕುಮಾರ್ ಬರೀ ಚಿತ್ರರಂಗದ ಆಸ್ತಿ ಅಲ್ಲ, ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಯಭಾರಿ. ಅದಕ್ಕೆ ಕನ್ನಡಿಗರಾದ ನಾವುಗಳು ಸದಾ ಆಭಾರಿ.

 

 

Exit mobile version