ರಾಜರತ್ನ ಅಪ್ಪು ಹಾಗೂ ಡಿಬಾಸ್ ದರ್ಶನ್ ಆಶೀರ್ವಾದದಿಂದ ಸ್ಯಾಂಡಲ್ವುಡ್ಗೆ ಹೊಚ್ಚ ಹೊಸ ಹೀರೋ ಎಂಟ್ರಿ ಕೊಟ್ಟಿದ್ದಾರೆ. ಶಂಕ್ರಣ್ಣ, ಉಪ್ಪಿ, ದಚ್ಚು, ಗಣೇಶ್ ಬಳಿಕ ಅವ್ರದ್ದೇ ಸಾಲಿನಲ್ಲಿ ಆಟೋ ಡ್ರೈವರ್ ಆಗಿ ಬೆಳ್ಳಿತೆರೆ ಮೇಲೆ ಹೀರೋ ಖದರ್ ತೋರಿದ್ದಾರೆ ಶರತ್ ಕೃಷ್ಣ. ಇಷ್ಟಕ್ಕೂ ಆ ದೊಡ್ಮನ್ಸ ಹೇಗಿದ್ದಾನೆ..? ಕಥೆ ಏನು..? ಪ್ರೇಕ್ಷಕರು ಏನಂದ್ರು..? ಇಲ್ಲಿದೆ ಕಂಪ್ಲೀಟ್ ಕಹಾನಿ.
- ದೊಡ್ಮನ್ಸ ಶರತ್ ಕೃಷ್ಣಗೆ ಪ್ರೇಕ್ಷಕರ ಮೆಚ್ಚುಗೆಯ ಮಹಾಪೂರ
- ಇದು ಆಟೋ ಡ್ರೈವರ್ ಬದುಕು, ಬವಣೆ, ಕನಸುಗಳ ದಿಬ್ಬಣ
- ನಗುಮುಖದೊಡೆಯ ಅಪ್ಪು, ಡಿಬಾಸ್ ದಚ್ಚು ಆಶೀರ್ವಾದ
- ಸ್ಯಾಂಡಲ್ವುಡ್ಗೆ ಭರವಸೆಯ ಹೀರೋ ಗ್ರ್ಯಾಂಡ್ ಎಂಟ್ರಿ..!
ಯೆಸ್.. ಈ ವಾರ ತೆರೆಗೆ ಬರ್ತಿರೋ ಸಿನಿಮಾ ಈ ದೊಡ್ಮನ್ಸ. ದುಡ್ಡಿರೋನು ಅಲ್ಲ ದೊಡ್ಡ ಮನುಷ್ಯ.. ದೊಡ್ಡ ಮನಸ್ಸಿರೋನು ಅನ್ನೋದು ಈ ಚಿತ್ರದ ಅಡಿಬರಹವಾಗಿದೆ. ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಶರತ್ ಕೃಷ್ಣ ಕಾಲಿಟ್ಟಿದ್ದು, ಇಲ್ಲಿ ಲೀಡ್ನಲ್ಲಿ ನಟಿಸೋದ್ರ ಜೊತೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಕೂಡ ಅವರೇ ಹೇಳಿರೋದು ವಿಶೇಷ. ಇಡೀ ಸಿನಿಮಾ ಒಬ್ಬ ಆಟೋ ಡ್ರೈವರ್ನ ಬದುಕು, ಬವಣೆ, ಕನಸುಗಳನ್ನ ತೆರೆದಿಡುವ ಕಾರ್ಯ ಮಾಡಿದೆ. ಹಾಗಾಗಿ ರಾಜ್ಯದಲ್ಲಿರೋ ಅಷ್ಟೂ ಮಂದಿ ಆಟೋ ಡ್ರೈವರ್ಸ್ ಹಾಗೂ ಅವ್ರ ಕುಟುಂಬಸ್ಥರಿಗೆ ಇದು ಬೇಹ ಕನೆಕ್ಟ್ ಆಗಲಿದೆ.
ಸಿನಿಮಾ ಬಿಡುಗಡೆಗೆ ಮೊದಲೇ ಮಾಗಡಿ ರಸ್ತೆಯ ವಿಕ್ಟರಿ ಮೂವೀಸ್ನಲ್ಲಿ ದೊಡ್ಮನ್ಸ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋ ಆಯೋಜಿಸಿತ್ತು ಚಿತ್ರತಂಡ. ಅಲ್ಲಿ ನೂರಾರು ಮಂದಿ ಆಟೋ ಡ್ರೈವರ್ಗಳು ಕುಟುಂಬ ಸಮೇತ ಬಂದು ಚಿತ್ರವನ್ನ ಕಣ್ತುಂಬಿಕೊಂಡರು. ಕಲೆ ಅನ್ನೋದು ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಅದ್ರಲ್ಲೂ ದುಡ್ಡಿದ್ದವ್ರಿಗೆ ಮಾತ್ರ ಅದು ಒಲಿಯುತ್ತೆ ಅನ್ನೋದು ತಪ್ಪು. ಪ್ರತಿಭೆ ಇದ್ದವನೇ ಬಾಸು ಅನ್ನೋದು ಇದ್ರ ಎಳೆಯಾಗಿದೆ. ಶರತ್ ಕೃಷ್ಣ ಜೊತೆ ನಾಯಕನಟಿ ರೇಷ್ಮಾ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್, ಬಲ ರಾಜ್ವಾಡಿ ಸೇರಿದಂತೆ ಚಿತ್ರದಲ್ಲಿ ಸಾಕಷ್ಟು ಕಲಾವಿದರಿದ್ದಾರೆ.
ಶಂಕರ್ನಾಗ್, ವಿಷ್ಣುವರ್ಧನ್, ದರ್ಶನ್, ಗಣೇಶ್, ಉಪೇಂದ್ರ ರೀತಿ ಯುವ ಸಿನಿಮೋತ್ಸಾಹಿ ಪ್ರತಿಭೆ ಶರತ್ ಕೃಷ್ಣ ಕೂಡ ಆಟೋ ಡ್ರೈವರ್ ಆಗಿ ಗುರ್ತಿಸಿಕೊಂಡಿದ್ದಾರೆ. ಅವರದ್ದೇ ಹಾದಿಯಲ್ಲಿ ಬೆಳ್ಳಿತೆರೆಗೆ ಚೊಚ್ಚಲ ಹೆಜ್ಜೆ ಇಟ್ಟಿದ್ದಾರೆ. ಅದ್ರಲ್ಲೂ ಅಪ್ಪು ಹಾಗೂ ಡಿಬಾಸ್ ದಚ್ಚು ಆಶೀರ್ವಾದದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋದು ಮತ್ತೊಂದು ಹೈಲೈಟ್. ಚಿತ್ರದಲ್ಲಿ ಶಂಕ್ರಣ್ಣ ಹಾಗೂ ದರ್ಶನ್ ಕುರಿತ ಅಭಿಮಾನದ ಡೈಲಾಗ್ಸ್ ಶಿಳ್ಳೆ, ಚಪ್ಪಾಳೆ ತರಿಸುತ್ತವೆ. ಒಟ್ಟಾರೆ ದೊಡ್ಮನ್ಸ ಚಿತ್ರ ಕಣ್ತುಂಬಿಕೊಂಡ ಪ್ರೇಕ್ಷಕರು ಹಾಗೂ ಆಟೋ ಡ್ರೈವರ್ಗಳು ಚಿತ್ರದ ನಾಯಕನಟ ಕಮ್ ಡೈರೆಕ್ಟರ್ ಹಾಗೂ ಇಡೀ ತಂಡಕ್ಕೆ ಬಹುಪರಾಕ್ ಅಂತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
