ಚಲನಚಿತ್ರ ನಿರ್ದೇಶಕ ರವಿಶಂಕರ್ ಕೌಶಿಕ್ ತಮ್ಮ ಸಿನಿಮಾ ‘ಲಾಪ್ಟೇನ್’ ಅನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES) ಪ್ರದರ್ಶಿಸಿದರು. ಈ ಕ್ಷಣವನ್ನು ತಮ್ಮ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಮತ್ತು ವೈಯಕ್ತಿಕವಾಗಿ ‘ಮನೆಗೆ ಮರಳಿದ ಸಂಭ್ರಮ’ ಎಂದರು. ಸುಮಾರು ಒಂದು ದಶಕದ ಹಿಂದೆ ಬೆಂಗಳೂರಿನ ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕೌಶಿಕ್, ತಾವು ಅಂದು ಕನಸಿನಲ್ಲೂ ಯೋಚಿಸದ ರೀತಿಯಲ್ಲಿ ಇಂದು ತಮ್ಮ ಚಿತ್ರದೊಂದಿಗೆ ಇದೇ ನಗರಕ್ಕೆ ಮರಳಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
‘ಲಾಪ್ಟೇನ್’ ಚಿತ್ರವು ಹರಿಯಾಣದ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಒಬ್ಬ ಮೂಕ ವಲಸೆ ಕೃಷಿ ಕೆಲಸದವರ 10 ವರ್ಷದ ಮಗನ ಮೇಲೆ ಕೊಲೆಯ ಆರೋಪ ಬಂದಾಗ, ಅವರ ಜೀವನ ಹೇಗೆ ತಲೆಕೆಳಗಾಗುತ್ತದೆ ಮತ್ತು ತನ್ನ ಮಗನನ್ನು ಉಳಿಸಿಕೊಳ್ಳಲು ನಡೆಸುವ ಭೀಕರ ಹೋರಾಟದ ಸುತ್ತ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ವಾಜಿದ್ ಅಲಿ, ಕಲಾವತಿ ದೇವಿ, ವಿಕ್ರಮ್ ಕೊಚ್ಚರ್ ಮತ್ತು ಗರ್ವಿತ್ ಮುದ್ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರ ಪ್ರದರ್ಶನದ ನಂತರ ಮಾತನಾಡಿದ ಕೌಶಿಕ್, ‘ಲಾಪ್ಟೇನ್’ ಚಿತ್ರದ ಉಗಮದ ಬಗ್ಗೆ ಮೆಲುಕು ಹಾಕಿದರು.
ಗ್ರಾಮೀಣ ಹರಿಯಾಣದ ಜಾತಿ ಸಮೀಕರಣಗಳು ಮತ್ತು ಅಧಿಕಾರಶಾಹಿಯ ವಾಸ್ತವ ಚಿತ್ರಣವನ್ನು ಈ ಸಿನಿಮಾ ಹೊಂದಿದೆ ಎಂದು ಕೌಶಿಕ್ ಹೇಳಿದರು. ಅನೇಕ ಸಿನಿಮಾಗಳು ಹಳ್ಳಿಯ ಜೀವನವನ್ನು ಆದರ್ಶಪ್ರಾಯವಾಗಿ ಮತ್ತು ಸುಂದರವಾಗಿ ಚಿತ್ರಿಸುತ್ತವೆ. ಆದರೆ, ‘ಲಾಪ್ಟೇನ್’ ಅಂತಹ ಚಿತ್ರಣದಿಂದ ದೂರವಿದ್ದು, ಸಮಾಜದಲ್ಲಿನ ಅಸಮಾನತೆಗಳನ್ನು ನೇರವಾಗಿ ತೆರೆಯ ಮೇಲೆ ತಂದಿದೆ ಎಂದು ಅವರು ಸ್ಪಷ್ಟಪಡಿಸಿದರು.
‘ಲಾಪ್ಟೇನ್’ ಅಂತಿಮವಾಗಿ ಘನತೆ ಮತ್ತು ಉಳಿವಿನ ಕಥೆಯಾಗಿದೆ ಎಂದು ಮಾತನಾಡಿದ ಅವರು. ʼಅಧಿಕಾರವನ್ನು ಪ್ರಶ್ನಿಸಲು ಧ್ವನಿಯಿಲ್ಲದ ಅಂಚಿನಲ್ಲಿರುವ ಜನರ ಮೇಲೆ ವ್ಯವಸ್ಥಿತ ಶೋಷಣೆ ಹೇಗೆ ನಡೆಯುತ್ತದೆ ಎಂಬುದನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ಪ್ರೇಕ್ಷಕರು ಇಂತಹ ವಾಸ್ತವಗಳನ್ನು ನಿರ್ಲಕ್ಷಿಸದೆ ಅವುಗಳ ಬಗ್ಗೆ ಆಳವಾಗಿ ಯೋಚಿಸುವಂತೆ ಮಾಡುವುದು ತಮ್ಮ ಉದ್ದೇಶ.
ಪೋಷಕತ್ವ ಮತ್ತು ಬದುಕುಳಿಯುವಿಕೆಯ ವಿಷಯಗಳು ಸಾರ್ವತ್ರಿಕವಾಗಿದ್ದು, ಇವುಗಳಿಗೆ ಭಾಷೆ ಅಥವಾ ಭೌಗೋಳಿಕ ಮಿತಿಗಳಿಲ್ಲ. ಕನಿಷ್ಠ ಸಂಭಾಷಣೆಗಳನ್ನು ಹೊಂದಿರುವ ಈ ಚಿತ್ರವು ದೃಶ್ಯ ವೈಭವದ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ಭಾವನಾತ್ಮಕ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆʼ ಎಂದು ಹೆಳಿದರು.
