ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಸ್ಯಾಂಡಲ್ವುಡ್ನ ಚಾಕೊಲೇಟ್ ಹೀರೊ ದಿಗಂತ್ ಮಂಚಾಲೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡ್ತಿದೆ. ಕೆಲಸವಿಲ್ಲದೆ ಬಾಡಿಗೆ ಮನೆಯ ಹಣ ನಂಬಿಕೊಂಡಿದ್ದಾರೆ ಅನ್ನೋ ಪೋಸ್ಟ್ವೊಂದು ಸಖತ್ ವೈರಲ್ ಆಗ್ತಿದೆ. ಆದ್ರೆ ಇದೀಗ ಸ್ವತಃ ದೂದ್ ಪೇಡ ದಿಗಂತ್ ಈ ಸುದ್ದಿಗೆ ಟಾಂಗ್ ಕೊಟ್ಟಿದ್ದಾರೆ. ಈ ಸುದ್ದಿ ಹಬ್ಬಿಸಿದವರಿಗೆ ದಿಗಂತ್ ಕೊಟ್ಟ ಆ ಒಂದೇ ಒಂದು ರಿಯಾಕ್ಷನ್ ಏನು..?ಹಾಗಾದ್ರೆ ದಿಗಂತ್ ಬಗ್ಗೆ ಹಬ್ಬಿರೋ ಸುದ್ದಿ ನಿಜಾನಾ..?ಫೇಕ್ ಆ..?ಅಸಲಿ ಸಮಾಚಾರವೇನು? ಹೇಳ್ತೀವಿ ಈ ಸ್ಟೋರಿ ನೋಡಿ.
- ದಿಗಂತ್ ಆರ್ಥಿಕ ಸ್ಥಿತಿ ಹೇಗಿದೆ..? ವೈರಲ್ ಸುದ್ದಿ ನಿಜಾನಾ..?!
- ಫೇಕ್ ನ್ಯೂಸ್ಗೆ ದೂದ್ ಪೇಡ ದಿಗಂತ್ ಚಾಟಿಯೇಟು..!
- ಸಮಂತಾ ಜೊತೆ ತೆಲುಗಿನಲ್ಲೂ ದಿಗಂತ್ ಜಾದೂ..!
- 20 ವರ್ಷದ ಸಕ್ಸಸ್ಫುಲ್ ಜರ್ನಿಗೆ ಗಾಸಿಪ್ಗಳೇ ಶತ್ರು
ಕನ್ನಡ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳಿಂದ ಸಕ್ರಿಯವಾಗಿರೋ ದಿಗಂತ್ ಮಂಚಾಲೆ ಅವರ ಕೆರಿಯರ್ ಬಗ್ಗೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿಯ ಪೋಸ್ಟ್ ಒಂದು ಕಾಣಿಸಿಕೊಂಡಿತ್ತು. ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಕೊರತೆಯಿದೆ, ಗೆಲುವಿನ ಬರ ಎದುರಾಗಿದೆ, ಇದರಿಂದ ದಿಗಂತ್ ಅವರು ಆತಂಕಕ್ಕೊಳಗಾಗಿದ್ದಾರೆ ಎಂದು ಬಿಂಬಿಸಲಾಗಿತ್ತು. ಅಷ್ಟೇ ಅಲ್ಲ, ಜೀವನ ನಡೆಸಲು ದಿಗಂತ್ ಅವರು ತಮ್ಮ ಬಾಡಿಗೆ ಮನೆಯಿಂದ ಬರೋ ಹಣವನ್ನೇ ನಂಬಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂಬಂತೆ ಸುದ್ದಿಯನ್ನು ತಿರುಚಲಾಗಿತ್ತು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಒಂದು ಕ್ಷಣ ದಿಗಂತ್ ಅವರಿಗೆ ನಿಜವಾಗಿಯೂ ಇಂತಹ ಪರಿಸ್ಥಿತಿ ಬಂದಿದೆಯೇ ಎಂದು ಕಂಗಾಲಾಗಿದ್ದರು.
ಆದರೆ, ಯಾವಾಗ ಈ ಸುದ್ದಿ ದಿಗಂತ್ ಅವರ ಗಮನಕ್ಕೆ ಬಂತೋ, ಆಗ ಅವರು ಕೊಟ್ಟ ರಿಯಾಕ್ಷನ್ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಸುಳ್ಳು ಸುದ್ದಿ ಹಬ್ಬಿಸಿದ ಆ ಪೇಜ್ಗೆ ದಿಗಂತ್ ಅವರು ಕೇವಲ ಒಂದು ‘ನಗುವ ಎಮೋಜಿ’ ಕಮೆಂಟ್ ಮಾಡುವ ಮೂಲಕ ಸುದ್ದಿಯ ಹಸಿಬಿಸಿ ಸುಳ್ಳನ್ನು ಬಯಲು ಮಾಡಿದ್ದಾರೆ. ಈ ಮೂಲಕ ತಮಗೆ ಅಂತಹ ಯಾವುದೇ ಪರಿಸ್ಥಿತಿ ಬಂದಿಲ್ಲ, ಇದೆಲ್ಲಾ ಬರೀ ಗಾಸಿಪ್ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ದಿಗಂತ್ ಅವರ ಈ ಸಿಂಪಲ್ ಆದ್ರೂ ಪವರ್ಫುಲ್ ರಿಯಾಕ್ಷನ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಸುಳ್ಳು ಸುದ್ದಿ ಹಬ್ಬಿಸುವವರಿಗೆ ಸರಿಯಾದ ಚಾಟಿಯೇಟು ನೀಡಿದ್ದಾರೆ
ಇನ್ನು ದಿಗಂತ್ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಎರಡು ದಶಕಗಳ ತಮ್ಮ ಜರ್ನಿಯಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರೋ ದಿಗಂತ್, ಇಂದಿಗೂ ಬಿಝಿ ನಟರಲ್ಲಿ ಒಬ್ಬರು. ಕೇವಲ ಕನ್ನಡ ಮಾತ್ರವಲ್ಲದೆ ಬಾಲಿವುಡ್ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಟಾಲಿವುಡ್ ನಟಿ ಸಮಂತಾ ಜೊತೆ ಮಾ ಇಂಟಿ ಬಂಗಾರಂ ಸಿನಿಮಾದಲ್ಲೂ ದಿಗಂತ್ ನಾಯಕನಹಿ ಅಭಿನಯಿಸಿದ್ದಾರೆ ಈ ಸಿನಿಮಾ ಮೇ ನಲ್ಲಿ ರಿಲೀಸ್ ಆಗ್ತಿದೆ. ಇತೀಚೆಗಷ್ಟೇ ರುದ್ರಾ ಕಾಲ ಕನ್ನಡ ಸಿನಿಮಾ ಕೂಡ ಸೆಟ್ ಏರಿದ್ದು ದಿಗಂತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ದಿಗಂತ್ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದಾರೆ ಹಾಗೆ ಸ್ಯಾಮ್ ಜೊತೆಗಿನ ಒಡನಾಟ, 20ವರ್ಷದ ಸಿನಿ ಜರ್ನಿ.. ಮುಂಗಾರು ಮಳೆ ಸಿನಿಮಾ ನೆನೆದ ದಿಗಂತ್ ಏನು ಹೇಳಿದ್ರು ನೋಡಿ.
ಪ್ರಸ್ತುತ ದಿಗಂತ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಇತ್ತೀಚಿನ ವರ್ಷಗಳಲ್ಲಿ ಅವರು ಕೇವಲ ಹೀರೊ ಆಗಿ ಮಾತ್ರವಲ್ಲದೆ, ವಿಭಿನ್ನ ಪಾತ್ರಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಿನಿಮಾ ಜೊತೆಗೆ ತಮ್ಮ ತೋಟದ ಮನೆ, ಪ್ರವಾಸ ಮತ್ತು ವೈಯಕ್ತಿಕ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡೋ ದಿಗಂತ್ ಅವರಿಗೆ ಹಣದ ಮುಗ್ಗಟ್ಟು ಎದುರಾಗಿದೆ ಎನ್ನುವುದು ನೂರಕ್ಕೆ ನೂರರಷ್ಟು ಸುಳ್ಳು. ಸದ್ಯಕ್ಕೆ ಕನ್ನಡ ಚಿತ್ರರಂಗ ಸಣ್ಣ ಮಟ್ಟಿನ ಹಿನ್ನಡೆ ಅನುಭವಿಸುತ್ತಿರಬಹುದು, ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಸ್ಟಾರ್ ನಟರ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ.
ಒಟ್ಟಿನಲ್ಲಿ ಈ ವೈರಲ್ ಪೋಸ್ಟ್ ಈಗ ಸಿನಿರಸಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಿಗಂತ್ ಕೊಟ್ಟ ಆ ನಗುವಿನ ರಿಯಾಕ್ಷನ್ ಒಂದೇ ಸಾಕು, ಈ ಸುದ್ದಿಯ ಅಸಲಿಯತ್ತು ಏನೆಂದು ಹೇಳಲು. “ಸುಳ್ಳು ಹೇಳೋರಿಗೂ ಒಂದು ಮಿತಿ ಇರಬೇಕು” ಅಂತಾ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ದಿಗಂತ್ ಅವರ ಕೆರಿಯರ್ ಗ್ರಾಫ್ ಇಂದಿಗೂ ಸ್ಟೇಬಲ್ ಆಗಿದ್ದು, ಅವರು ಸದ್ಯದಲ್ಲೇ ಹೊಸ ಪ್ರಾಜೆಕ್ಟ್ಗಳ ಮೂಲಕ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಅಲ್ಲಿಯವರೆಗೆ ಇಂತಹ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ.
