ಪ್ಯಾಲೆಸ್ಟೀನ್ ಸಿನಿಮಾಗಳಿಗೆ ನೋ ಎಂಟ್ರಿ.. ವೇದಿಕೆಯಲ್ಲೇ ಪ್ರತಿರೋಧಿಸಿದ ಪ್ರಕಾಶ್ ರೈ..!

ಸಿನಿಮಾ ಹಬ್ಬದಲ್ಲಿ ರಾಜಕೀಯ ನೆರಳು..ಭುಗಿಲೆದ್ದ ವಿವಾದ

Untitled design 2026 01 30T192548.374

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಬೆಂಗಳೂರಿನ ಹೃದಯವಾದ ವಿಧಾನಸೌಧದ ಪೂರ್ವದ್ವಾರದ ಮುಂದೆ ಬೆಳಗಿದ ಚಿತ್ರೋತ್ಸವದ ವೇದಿಕೆ ಬೆಳಕು, ಕ್ಯಾಮೆರಾ, ಸಂಭ್ರಮ ಎಲ್ಲವೂ ಇತ್ತು. ಆದರೆ ಈ ಬಾರಿ ಚಪ್ಪಾಳೆಗಿಂತ ಜಾಸ್ತಿ ಕೇಳಿಸಿತು ಪ್ರತಿರೋಧದ ಧ್ವನಿ. ವಿಶ್ವದ ನಾನಾ ದೇಶಗಳ ಚಿತ್ರಗಳು ಒಂದೇ ವೇದಿಕೆಯಲ್ಲಿ ಸೇರುವ ಹಬ್ಬ. ಆದರೆ ಈ ಬಾರಿ ಆ ಹಬ್ಬಕ್ಕೆ ರಾಜಕೀಯದ ನೆರಳು ಬಿದ್ದಿದೆ ಎನ್ನುವ ಆರೋಪ ಜೋರಾಗಿದೆ. ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಎಂಬ ಸುದ್ದಿ ಚಿತ್ರಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸಿನಿಮಾ ಸಂಭ್ರಮದ ವೇದಿಕೆ. ಆದರೆ ಈ ಬಾರಿ ರೆಡ್ ಕಾರ್ಪೆಟ್ ಮೇಲೆ ಸಿನಿಮಾ ಗ್ಲಾಮರ್ ಮಾತ್ರ ಅಲ್ಲ, ರಾಜಕೀಯ ಸಿಡಿಲು ಕೂಡ ಸದ್ದು ಮಾಡಿತು. 17ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲೇ ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಅನ್ನೋ ವಿಷಯ ಚರ್ಚೆಗೆ ಎದ್ದಿದೆ. ವೇದಿಕೆಯಲ್ಲಿ ನಟ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮೈಕ್ ಹಿಡಿದ ಕ್ಷಣವೇ ವಾತಾವರಣ ಬದಲಾಯ್ತು. ಪ್ರಕಾಶ್ ರೈ ವೇದಿಕೆಯಲ್ಲೇ ಗಟ್ಟಿಯಾದ ಪ್ರತಿರೋಧ ವ್ಯಕ್ತಪಡಿಸಿದರು. ಸಿನಿಮಾ ವೇದಿಕೆ ಒಂದು ಕ್ಷಣ ರಾಜಕೀಯ ವೇದಿಕೆಯಂತಾಗಿತ್ತು.

ಪ್ಯಾಲೆಸ್ಟೀನ್ ಸಿನಿಮಾಗಳಿಗೆ ‘ನೋ ಎಂಟ್ರಿ’ ಕೇಂದ್ರದ ನಿರ್ಬಂಧ ವಿವಾದ

ಸಿನಿಮಾ ಹಬ್ಬದಲ್ಲಿ ರಾಜಕೀಯ ನೆರಳು..ಭುಗಿಲೆದ್ದ ವಿವಾದ

ವಿಧಾನಸೌಧದ ಪೂರ್ವದ್ವಾರದ ಎದುರು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಪ್ಯಾಲೆಸ್ಟೀನ್ ಕುರಿತು ಒಂದು ಕವಿತೆ ಓದಿದರು  ಯುದ್ಧಗಳು ಕೊನೆಗೊಳ್ಳುತ್ತವೆ… ನಾಯಕರು ಕೈಕುಲುಕಿ ತೆರಳುತ್ತಾರೆ ಆದರೆ ಆ ವೃದ್ಧೆ ತನ್ನ ಮಗನಿಗಾಗಿ ಕಾಯುತ್ತಿರುತ್ತಾಳೆ ಎಂಬ ಸಾಲುಗಳು ವೇದಿಕೆಯಲ್ಲಿ ಮೌನ ಮೂಡಿಸಿತು. ಇದು ಕೇವಲ ಕವಿತೆ ಅಲ್ಲ, ಪ್ರತಿರೋಧದ ಧ್ವನಿ. ಪ್ರೇಕ್ಷಕರ ಗಮನ ಕ್ಷಣಾರ್ಧದಲ್ಲಿ ಸೆಳೆಯಿತು.

ಚಿತ್ರೋತ್ಸವಕ್ಕೆ ಆಯ್ಕೆಯಾದ ಐದು ಪ್ಯಾಲೆಸ್ಟೀನ್ ಸಿನಿಮಾಗಳ ಪೈಕಿ ‘All That’s Left of You’, ‘The Voice of Hind Rajab’, ‘Put Your Soul on Your Hand and Walk’ ಹಾಗೂ ‘Yes’ ಸೇರಿ ನಾಲ್ಕು ಸಿನಿಮಾಗಳಿಗೆ ಪ್ರದರ್ಶನ ಅನುಮತಿ ಸಿಕ್ಕಿಲ್ಲ. ಇದೇ ವಿಷಯಕ್ಕೆ ಪ್ರಕಾಶ್ ರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಚಿತ್ರೋತ್ಸವಗಳು ಮಾನವೀಯ ಬಾಂಧವ್ಯ ಬೆಳೆಸುವ ವೇದಿಕೆ. ಇಲ್ಲಿ ರಾಜಕೀಯ ಪ್ರವೇಶಿಸಬಾರದು ಎಂದು ಸ್ಪಷ್ಟವಾಗಿ ಹೇಳಿದರು. ಮುಖ್ಯಮಂತ್ರಿಗಳು ಗಟ್ಟಿಯಾದ ನಿಲುವು ತಾಳಬೇಕು ಎಂದು ಕರೆ ನೀಡಿದರು.

ಬಿಐಎಫ್‌ಎಫ್‌ನಲ್ಲಿ ಫ್ರೀಡಮ್ ಫೈಟ್..ಕಲೆಗೆ ಕಟ್ಟುಪಾಡು?

ವೇದಿಕೆಯಲ್ಲೇ ಕವಿತೆ ಓದಿ ಪ್ರಕಾಶ್ ರೈ ಪ್ರತಿರೋಧ..!

ಆದ್ರೆ ಯಾಕೆ ಪ್ಯಾಲೆಸ್ಟೀನ್ ಸಿನಿಮಾಗಳಿಗೆ ನೋ ಎಂಟ್ರಿ ?  ಅಧಿಕೃತವಾಗಿ ಹೇಳಲಾಗಿರುವ ಕಾರಣ ಏನಂದ್ರೆ, ಪ್ರಸ್ತುತ ಅಂತಾರಾಷ್ಟ್ರೀಯ ರಾಜಕೀಯ ಪರಿಸ್ಥಿತಿ, ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದ ಸೂಕ್ಷ್ಮತೆ, ಮತ್ತು ರಾಜತಾಂತ್ರಿಕ ಸಂಬಂಧಗಳ ಸಮತೋಲನ. ಇಂತಹ ವಿಷಯಗಳು ಸಾರ್ವಜನಿಕ ಪ್ರದರ್ಶನದಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಅಥವಾ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಅಂದಾಜು ಕೇಂದ್ರದದ್ದು ಎಂದು ಮೂಲಗಳು ಹೇಳುತ್ತಿವೆ. ಆದರೆ ಪ್ರಶ್ನೆ ಏನೆಂದರೆ ಸಿನಿಮಾ ಕಲೆನಾ ? ಅಥವಾ ರಾಜಕೀಯ ಅಖಾಡನಾ ? ಮಾನವೀಯ ಕಥೆಗಳನ್ನು ಹೇಳುವುದೇ ತಪ್ಪಾ ? ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಇದೀಗ ಪ್ರಶ್ನೆ ಒಂದೇ ಇದು ಕೇವಲ ಚಿತ್ರೋತ್ಸವದ ವಿವಾದವೇ? ಅಥವಾ ಕಲೆ ಮತ್ತು ರಾಜಕೀಯದ ನಡುವೆ ನಡೆಯುತ್ತಿರುವ ದೊಡ್ಡ ಯುದ್ಧದ ಮತ್ತೊಂದು ಅಧ್ಯಾಯವೇ? ಬೆಂಗಳೂರು ಚಿತ್ರೋತ್ಸವದ ವೇದಿಕೆ ಈಗ ಸಿನಿಮಾ ಪರ ಹೋರಾಟದ ಸಂಕೇತವಾಗಿಬಿಟ್ಟಿದೆ.

 

Exit mobile version