ಶಿವಣ್ಣನಲ್ಲಿ ಅಣ್ಣಾವ್ರ ಕಂಡ ಕಿಚ್ಚ ಸುದೀಪ್..‘ಬೇಲ್‌’ಗೆ ಭೇಷ್..!

ಧೈರ್ಯದ ಅಭಾವ ಇಲ್ಲದಿರೋದು ಶಿವಣ್ಣ ಸೌಭಾಗ್ಯ

Untitled design 2026 05 17T165609.199

ಲಿವಿಂಗ್ ಲೆಜೆಂಡ್ ಶಿವಣ್ಣನ ಬೇಲ್ ಚಿತ್ರದ ಟೀಸರ್‌ಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಶಿವಣ್ಣನಲ್ಲಿ ಡಾ ರಾಜ್‌ಕುಮಾರ್‌‌‌ರನ್ನ ಕಂಡ ಬಾದ್‌ಷಾ ಕಿಚ್ಚ ಸುದೀಪ್ ಹೇಳಿದ್ದೇನು..? ಟೀಸರ್ ಹೇಗಿದೆ ಅನ್ನೋದ್ರ ಜೊತೆಗೆ ಅಜನೀಶ್ ಲೋಕನಾಥ್ ಮೊಟ್ಟ ಮೊದಲ ಲೈವ್ ಕಾನ್ಸರ್ಟ್ ಹೇಗಿತ್ತು..? ಯಾವೆಲ್ಲಾ ಸ್ಟಾರ್ಸ್ ಬಂದಿದ್ರು ಅನ್ನೋದನ್ನ ಡಿಟೈಲ್ಡ್ ಸ್ಟೋರಿ ಇಲ್ಲಿದೆ.

ಇದು ಲಿವಿಂಗ್ ಲೆಜೆಂಡ್, ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್ ನಟನೆಯ ಹೊಚ್ಚ ಹೊಸ ಸಿನಿಮಾ ಬೇಲ್ ಟೀಸರ್‌ ಝಲಕ್. ಪೆದ್ದಿ ಚಿತ್ರದ ಗೌರ್ ನಾಯ್ಡು ಝಲಕ್ ಬಳಿಕ ರಿವೀಲ್ ಆಗಿರೋ ಈ ಬೇಲ್ ಟೀಸರ್‌ಗೆ ಎಲ್ಲೆಡೆಯಿಂದ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರ್ತಿದೆ. ಅದ್ರಲ್ಲೂ ಶಿವಣ್ಣನ ಲುಕ್ ಅಕ್ಷರಶಃ ಕಣ್ಣು ಕುಕ್ಕುವಂತಿದೆ.

ಯೆಸ್.. ಶಿವಣ್ಣನ ಬೇಲ್ ಚಿತ್ರದ ಲುಕ್‌ಗೆ ಬರೀ ಅವರ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಷ್ಟೇ ಅಲ್ಲ, ಇಡೀ ಸ್ಯಾಂಡಲ್‌ವುಡ್ ಕ್ಲೀನ್ ಬೋಲ್ಡ್ ಆಗಿದೆ. ಬಾದ್‌ಷಾ ಕಿಚ್ಚ ಸುದೀಪ್ ಕೂಡ ಶಿವಣ್ಣನಲ್ಲಿ ನಟಸಾರ್ವಭೌಮ ಡಾ ರಾಜ್‌‌ಕುಮಾರ್‌‌ನ ಕಂಡಿದ್ದಾರೆ. ಅದನ್ನ ಅಜನೀಶ್ ಲೋಕನಾಥ್ ಲೈವ್ ಕಾನ್ಸರ್ಟ್‌‌‌ ವೇದಿಕೆಯಲ್ಲೇ ಬಹಿರಂಗವಾಗಿ ಮೆಚ್ಚುಗೆ ವ್ಯಕ್ತಪಡಿಸಿ ಹಾಡಿ ಹೊಗಳಿದ್ದಾರೆ ಸುದೀಪ್.

ಧೈರ್ಯದ ಅಭಾವ ಇಲ್ಲದಿರೋದು ಕೆಲವರ ಸ್ವಭಾವ ಎನ್ನುವ ಮಾಸ್ ಡೈಲಾಗ್ ಬೇಲ್ ಚಿತ್ರದ ಟೀಸರ್‌‌ನ ಅಟ್ರ್ಯಾಕ್ಷನ್. ಇನ್‌ಫ್ಯಾಕ್ಟ್ ಸಾವು ಗಡೆದ್ದು ಬಂದ ಮಿಸ್ಟರ್ ಮೃತ್ಯುಂಜಯ ಶಿವಣ್ಣ ಈ ಬಾರಿ ಮತ್ತಷ್ಟು ವೈಬ್ರೆಂಟ್ ಆಗಿ ಕಾಣಿಸ್ತಿದ್ದಾರೆ. ಧುಮ್ಮಿಕ್ಕಿ ಸುರಿಯುತ್ತಿರೋ ಮಳೆ, ಅದ್ರಿಂದ ಕತ್ತಲಾದ ಕಂಪ್ಲೀಟ್ ಸಿಟಿ, ಕತ್ತಲಲ್ಲೇ ನೆಚ್ಚಿನ ಶ್ವಾನಕ್ಕೆ ಫೀಡ್ ಮಾಡ್ತಿರೋ ಹೀರೋ. ಮಿಂಚು ಬಂದಾಗ ಅದ್ರ ಬೆಳಕಲ್ಲಿ ಹೀರೋನ ಇಂಟ್ರಡ್ಯೂಸ್ ಮಾಡಿರೋ ಪರಿ ಅದ್ಭುತ.

ಸದ್ಯ ಎಲ್ಲೆಲ್ಲೂ ವಿಜಯ್‌‌ದೇ ಅಬ್ಬರ ಆರ್ಭಟ. ಹೌದು.. ತಮಿಳುನಾಡಿನಲ್ಲಿ ಸಿಎಂ ವಿಜಯ್ ಮಿಂಚುತ್ತಿದ್ರೆ, ಇಲ್ಲಿ ಬೇಲ್ ಚಿತ್ರದ ನಾಯಕನಟ ಶಿವಣ್ಣನ ಪಾತ್ರದ ಹೆಸರು ಕೂಡ ವಿಜಯ್ ಕುಮಾರ್. ರಾಬರ್ಟ್ ಅನ್ನೋ ವ್ಯಕ್ತಿಯಿಂದ ವಿಜಿಗೆ ಕಾಲ್ ಬರುತ್ತೆ. ಅದನ್ನ ಸೂಕ್ಷ್ಮವಾಗಿ ತೋರಿಸಿದ್ದಾರೆ ಡೈರೆಕ್ಟರ್ ಪವನ್ ಒಡೆಯರ್. ರಾಬರ್ಟ್ ಪಾತ್ರದಲ್ಲಿ ನಟ ಸಾಯಿಕುಮಾರ್ ಬಣ್ಣ ಹಚ್ಚಿದ್ದು, ಅವ್ರ ವಾಯ್ಸ್ ಅದು ಡೈಲಾಗ್ ಕಿಂಗ್ ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ.

ಪವನ್ ಒಡೆಯರ್ ಬರೋಬ್ಬರಿ 4 ವರ್ಷಗಳ ನಂತ್ರ ಮತ್ತೆ ಡೈರೆಕ್ಷನ್‌ಗೆ ವಾಪಸ್ ಆಗಿದ್ದಾರೆ. 2022ರಲ್ಲಿ ರೆಮೋ ಚಿತ್ರ ಮಾಡಿದ ಒಡೆಯರ್, ಅದಾದ ಬಳಿಕ ಬಾಲಿವುಡ್‌ಗೆ ಹಾರಿದ್ರು. ಅಲ್ಲಿ ಕೂಡ ಅವಸ್ಥಿ ವರ್ಸಸ್ ಅವಸ್ಥಿ ಅನ್ನೋ ಸಿನಿಮಾನ ಡೈರೆಕ್ಟ್ ಮಾಡಿದ್ದು, ಸದ್ಯದಲ್ಲೇ ಅದೂ ತೆರೆಗಪ್ಪಳಿಸಲಿದೆ. ಅಲ್ಲದೆ, ಕನ್ನಡದಲ್ಲಿ ವೆಂಕ್ಯ ಹಾಗೂ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರಗಳನ್ನ ನಿರ್ಮಾಣ ಕೂಡ ಮಾಡಿದ್ರು. ಆದ್ರೀಗ ಬೇಲ್ ಚಿತ್ರದಿಂದ ಪವನ್ ಒಡೆಯರ್ ಈಸ್ ಬ್ಯಾಕ್ ಎನ್ನುವಂತಿದೆ.

ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗಿರೋ ಬೇಲ್ ಸಿನಿಮಾ ಕೋರ್ಟ್ ಡ್ರಾಮಾ ಕಮ್ ಥ್ರಿಲ್ಲರ್ ಜಾನರ್ ಕಥಾನಕ ಹೊಂದಿದೆ. ಬೇಲ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇದೇ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಆಗಸ್ಟ್‌‌ನಲ್ಲಿ ತೆರೆಗೆ ಬರೋಕೆ ಸಜ್ಜಾಗಿದೆ. ಇನ್ನೂ ಪವನ್ ಒಡೆಯರ್‌ಗೆ ಅವರ ಪತ್ನಿ ಅಪೇಕ್ಷಾ ಕೂಡ ಸಾಥ್ ನೀಡಿದ್ದು, ಹಾಡೊಂದಕ್ಕೆ ಕಂಪ್ಲೀಟ್ ಕಾಸ್ಟ್ಯೂಮ್ಸ್‌ನ ಅವರೇ ಮಾಡಿರೋದು ಇಂಟರೆಸ್ಟಿಂಗ್.

ಸ್ಯಾಂಡಲ್‌ವುಡ್‌ನ ಮೋಸ್ಟ್ ಹ್ಯಾಪನಿಂಗ್ ಹಾಗೂ ಸ್ಟಾರ್ ಮ್ಯೂಸಿಕ್ ಕಂಪೋಸರ್ ಅಂದ್ರೆ ಅದು ಅಜನೀಶ್ ಲೋಕನಾಥ್. ಪವನ್ ಒಡೆಯರ್-ಶಿವಣ್ಣ ಬೇಲ್ ಚಿತ್ರಕ್ಕೂ ಅಜ್ಜುನೇ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನ ಮಾಲ್‌ವೊಂದರಲ್ಲಿ ಲೈವ್ ಕಾನ್ಸರ್ಟ್ ಮಾಡಿದ್ರು. ಅಜನೀಶ್‌ಗಾಗಿ ಶಿವಣ್ಣ-ಗೀತಕ್ಕ ದಂಪತಿ, ಸುದೀಪ್-ಪ್ರಿಯಾ ಸುದೀಪ್ ದಂಪತಿ, ಪವನ್ ಒಡೆಯರ್-ಅಪೇಕ್ಷಾ ಪವನ್ ಒಡೆಯರ್ ದಂಪತಿ, ಕೆವಿಎನ್ ಸೇರಿದಂತೆ ಸಾಕಷ್ಟು ಮಂದಿ ಅದಕ್ಕೆ ಸಾಕ್ಷಿ ಆಗಿದ್ದು ವಿಶೇಷ.

ಸುದೀಪ್ ಪುತ್ರಿ ಸಾನ್ವಿ ಸುದೀಪ್, ಗಾಯಕಿ ಮಂಗ್ಲಿ, ಗಾಯಕ ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಸೇರಿದಂತೆ ಸಾಕಷ್ಟು ಸ್ಟಾರ್ ಸಿಂಗರ್ಸ್ ಲೈವ್ ಕಾನ್ಸರ್ಟ್‌‌ಗೆ ಮೆರುಗು ತಂದರು. ಅದ್ರಲ್ಲೂ ಸುದೀಪ್ ತನ್ನ ಮಗಳಿಗಾಗಿ ವೇದಿಕೆಗೆ ಬಂದು, ಪತ್ನಿಯನ್ನೂ ವೇದಿಕೆಗೆ ಕರೆದು, ಮೆಚ್ಚುಗೆಯ ಮಾತುಗಳಾಡಿದ್ದು ವಿಶೇಷ.

ಇಂಟರೆಸ್ಟಿಂಗ್ ಅಂದ್ರೆ ಅಜನೀಶ್ ಲೈವ್ ಕಾನ್ಸರ್ಟ್‌‌ನಲ್ಲಿ ಅವ್ರ ಡ್ಯಾನ್ಸ್ ಸಖತ್ ಹೈಲೈಟ್ ಆಯ್ತು. ಹೌದು.. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮ್ಯೂಸಿಕ್ ಕಂಪೋಸ್ ಮಾಡುತ್ತಲೇ ಸಿಕ್ಕಾಪಟ್ಟೆ ಬ್ಯುಸಿ ಇರ್ತಿದ್ದ ಅಜನೀಶ್, ತಮ್ಮ ಮೊದಲ ಕಾನ್ಸರ್ಟ್‌‌ಗಾಗಿ ಜಿಮ್‌‌ನಲ್ಲಿ ಬೆವರಿಳಿಸಿ, ಹೊಟ್ಟೆ ಕೂಡ ಕಡಿಮೆ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರೊಫೆಷನಲ್ ಡ್ಯಾನ್ಸರ್ಸ್ ರೀತಿ, ಹುಬ್ಬೇರಿಸೋ ರೀತಿಯಲ್ಲಿ ಸ್ಟೆಪ್ ಹಾಕಿದ್ದು ಸಖತ್ ಸರ್‌‌ಪ್ರೈಸಿಂಗ್ ಆಗಿತ್ತು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version