ಹಿಂದಿಯ ಜನಪ್ರಿಯ ಧಾರಾವಾಹಿ ‘ಅನುಪಮಾ’ ಶೂಟಿಂಗ್ ಸೆಟ್ನಲ್ಲಿ ಸಂಭವಿಸಿದ ಅಗ್ನಿ ಅವಘಡವು ಚಿತ್ರರಂಗದಲ್ಲಿ ಆಘಾತವನ್ನುಂಟು ಮಾಡಿದೆ. ಮುಂಬೈನ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ಸೆಟ್ಗೆ ಸೋಮವಾರ ಮುಂಜಾನೆ ಬೆಂಕಿ ತಗುಲಿದ್ದು, ಇಡೀ ಸ್ಟುಡಿಯೋ ಭಸ್ಮವಾಗಿದೆ. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಚಿತ್ರೀಕರಣ ನಡೆಯದೇ ಇದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಬೆಂಕಿ ಹೊತ್ತಿಕೊಂಡಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೂನ್ 23, 2025ರ ಸೋಮವಾರ ಮುಂಜಾನೆ ಈ ಅಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಆರಂಭಿಕ ಶಂಕೆ ವ್ಯಕ್ತವಾಗಿದೆ. ಭಾನವಾರ ಚಿತ್ರೀಕರಣಕ್ಕೆ ರಜೆ ಇದ್ದು, ಸೋಮವಾರದ ಶೂಟಿಂಗ್ ಆರಂಭವಾಗುವ ಮೊದಲೇ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಸೆಟ್ನಲ್ಲಿ ಕಲಾವಿದರು ಅಥವಾ ಸಿಬ್ಬಂದಿ ಯಾರೂ ಇರದ ಕಾರಣ ಜೀವಹಾನಿಯಿಂದ ತಪ್ಪಿಸಿಕೊಳ್ಳಲಾಗಿದೆ. ಆದಾಗ್ಯೂ, ಸೆಟ್ನ ಒಟ್ಟು ರಚನೆ ಸಂಪೂರ್ಣವಾಗಿ ನಾಶವಾಗಿದೆ.
VIDEO | Mumbai: Fire breaks out on the set of TV show ‘Anupamaa’ at Film City, Goregaon. Further details awaited.
(Source: Third Party)
(Full video available on PTI Videos – https://t.co/n147TvqRQz) pic.twitter.com/LyCY2wAUFx
— Press Trust of India (@PTI_News) June 23, 2025
ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟವು ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿರ್ಮಾಪಕರು, ವಾಹಿನಿಯವರು ಮತ್ತು ಫಿಲ್ಮ್ ಸಿಟಿ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದೆ. ಒಕ್ಕೂಟದ ಅಧ್ಯಕ್ಷ ಸುರೇಶ್ ಶ್ಯಾಮ್ಲಾಲ್ ಗುಪ್ತಾ, “ಈ ಅಗ್ನಿ ಅವಘಡದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತುಗೊಳಿಸಬೇಕು. ನಿರ್ಮಾಪಕರು ಕಾರ್ಮಿಕರ ಸುರಕ್ಷತೆಗೆ ಬದ್ಧರಾಗಿಲ್ಲ, ಇದರಿಂದ ಸಾವಿರಾರು ಕಾರ್ಮಿಕರ ಜೀವಕ್ಕೆ ಅಪಾಯವಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಕ್ಕೂಟವು ಇದನ್ನು ಕೇವಲ ಅವಘಡವೆಂದು ಪರಿಗಣಿಸದೇ, ವಿಮೆಯ ಹಣ ಪಡೆಯಲು ಬೇಕಂತಲೇ ಬೆಂಕಿ ಹಾಕಿರಬಹುದೇ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದೆ. “ನಿರ್ಮಾಪಕರು, ವಾಹಿನಿಯವರು, ಫಿಲ್ಮ್ ಸಿಟಿ ಮ್ಯಾನೇಜರ್, ಮತ್ತು ಕಾರ್ಮಿಕ ಆಯುಕ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ಘಟನೆಯ ಸಂಪೂರ್ಣ ತನಿಖೆಯಾಗಬೇಕು,” ಎಂದು ಒಕ್ಕೂಟ ಒತ್ತಾಯಿಸಿದೆ.
‘ಅನುಪಮಾ’ ಧಾರಾವಾಹಿಯ ನಿರ್ಮಾಣ ತಂಡವು ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, “ಅಗ್ನಿ ಅವಘಡದಿಂದ ಯಾವುದೇ ಜೀವಹಾನಿಯಾಗಿಲ್ಲ. ಯಾರಿಗೂ ತೊಂದರೆಯಾಗಿಲ್ಲ. ಘಟನೆಯ ಕಾರಣವನ್ನು ತನಿಖೆಯಿಂದ ತಿಳಿಯಲಾಗುವುದು,” ಎಂದು ಸ್ಪಷ್ಟಪಡಿಸಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳವು ಘಟನೆಯ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.