ಕಾಲ್ತುಳಿತ ಪ್ರಕರಣದಲ್ಲಿ ‘ಪುಷ್ಪ’ ಸ್ಟಾರ್‌ಗೆ ಸಂಕಷ್ಟ: ಆರೋಪಪಟ್ಟಿಯಲ್ಲಿ ಅಲ್ಲು ಅರ್ಜುನ್ ಹೆಸರು!

Untitled design 2025 12 27T174508.825

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ‘ಪುಷ್ಪ’ ಸಿನಿಮಾದ ಮೂಲಕ ದೇಶಾದ್ಯಂತ ಅಭಿಮಾನಿಗಳ ಮನ ಗೆದ್ದಿರುವ ಅಲ್ಲು ಅರ್ಜುನ್ ಅವರಿಗೆ ಇದೀಗ ದೊಡ್ಡ ಶಾಕ್‌ ಎದುರಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್‌ನ ಚಿತ್ರಮಂದಿರದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ಹೆಸರು ಅಧಿಕೃತವಾಗಿ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.

ಪುಷ್ಪ 2 ಸಿನಿಮಾ ಬಿಡುಗಡೆಯಾದ ದಿನ ನಟ ಅಲ್ಲು ಅರ್ಜುನ್ ಯಾವುದೇ ಮುನ್ನೋಟ ಅಥವಾ ಅಧಿಕೃತ ಮಾಹಿತಿ ನೀಡದೇ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅವರ ಆಗಮನದಿಂದಾಗಿ ಅಭಿಮಾನಿಗಳ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಾಗಿ, ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದರು.

ಈ ಪ್ರಕರಣದ ತನಿಖೆ ನಡೆಸಿದ್ದ ಹೈದರಾಬಾದ್ ಪೊಲೀಸರು ಇದೀಗ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ನಟ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯಾಗಿ ಪಟ್ಟಿ ಮಾಡಿದ್ದಾರೆ. ಅಲ್ಲದೇ ಅವರ ವೈಯಕ್ತಿಕ ಮ್ಯಾನೇಜರ್ ಹೆಸರನ್ನೂ ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ. ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕ ಸ್ಥಳಕ್ಕೆ ಭೇಟಿ ನೀಡಿದ್ದು, ಕಾಲ್ತುಳಿತಕ್ಕೆ ದಾರಿ ಮಾಡಿಕೊಟ್ಟಿತು ಎಂಬ ಆರೋಪವನ್ನು ದಾಖಲಿಸಲಾಗಿದೆ.

ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿ ಚಿತ್ರಮಂದಿರದ ಆಡಳಿತ ಮಂಡಳಿ, ಭದ್ರತಾ ಸಿಬ್ಬಂದಿ, ಹಾಗೂ ಪುಷ್ಪ 2 ಸಿನಿಮಾ ತಂಡದ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಘಟನೆಗೆ ಸಂಬಂಧಪಟ್ಟ ಎಲ್ಲಾ ಜವಾಬ್ದಾರಿಯ ಅಂಶಗಳನ್ನು ಪರಿಶೀಲಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಘಟನೆ ನಡೆದ ಬಳಿಕ ಅಲ್ಲು ಅರ್ಜುನ್ ಅವರು ಮೃತ ಮಹಿಳೆಯ ಕುಟುಂಬಕ್ಕೆ ಸಂತಾಪ ಸೂಚಿಸಿ, ನೆರವು ನೀಡಿದ್ದರು.

Exit mobile version