ಬೆಂಗಳೂರಿನ ಸಿನಿಮಾ ಪ್ರೇಮಿಗಳು ನಿರೀಕ್ಷಿಸುತ್ತಿದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 29 ರಂದು ಸಂಜೆ ವಿಧಾನಸೌಧದ ಮುಂಭಾಗ (ಪೂರ್ವದ್ವಾರ ಮೆಟ್ಟಿಲು) ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.
ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ಅವರು ಉಪಸ್ಥಿತರಿರುತ್ತಾರೆ. ಕನ್ನಡ ಚಿತ್ರರಂಗದ ಗಣ್ಯರು ದೇಶ – ವಿದೇಶದ ಅತಿಥಿಗಳು ಸಹ ಜೊತೆಗಿರಲಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಲುಲುಮಾಲ್ನಲ್ಲಿರುವ, ಸಿನೆಪೊಲಿಸ್ನ 11 ಸ್ಕ್ರೀನ್ಗಳಲ್ಲಿ ಜನವರಿ 30 ರಿಂದ ಫೆಬ್ರವರಿ 6 ರವರೆಗೆ ಚಲನಚಿತ್ರಗಳ ಪ್ರದರ್ಶನಗಳು ನಡೆಯಲಿವೆ. ಸಿನೆಪೊಲಿಸ್, ಲುಲುಮಾಲ್ ಜೊತೆಗೆ, ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಸಹ ಚಲನಚಿತ್ರ ಪ್ರದರ್ಶನಗಳು ನಡೆಯಲಿವೆ.
ಈ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ.
ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಆಷ್ಟ್ರಿಯಾ, ಬೆಲ್ಜಿಯಂ, ನೆದರ್ಲೆಂಡ್, ಫಿನ್ಲೆಂಡ್, ಇರಾನ್, ಅರ್ಜೆಂಟೈನಾ, ಕೆನಡಾ, ಡೆನ್ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಪೋಲೆಂಡ್, ರೊಮಾನಿಯಾ, ಜಪಾನ್, ಸ್ಪೇನ್, ಇಂಡೋನೇಷಿಯಾ, ಇಟಲಿ, ಆಸ್ಟ್ರೇಲಿಯಾ, ಚೀನಾ, ಕಿರ್ಗಿಸ್ತಾನ್ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಸಮಕಾಲೀನ ವಿಶ್ವಸಿನಿಮಾ ವಿಭಾಗದ ಮೂಲಕ “ಬೆಂಗಳೂರಿನಲ್ಲಿ ಜಗತ್ತು” ಎನ್ನುವ ಶೀರ್ಷಿಕೆಯಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸುವುದು ವೈಶಿಷ್ಟ್ಯವೇ ಆಗಿದೆ. ಈ ಬಾರಿಯ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ “ಸ್ತ್ರೀ ಎಂದರೆ ಅಷ್ಟೇ ಸಾಕೆ” ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಚಲನಚಿತ್ರೋತ್ಸವ ನಡೆಯುವ ದಿನಗಳಲ್ಲಿ ಪ್ರತೀದಿನ ಚಲನಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಅಕಾಡೆಮಿಕ್ ಕಾರ್ಯಕ್ರಮಗಳಿರುತ್ತವೆ.
ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ (ನಾವು, ಮತ್ತು ನಮ್ಮ ಸಿನಿಮಾ) ಕುರಿತ ಮಾಸ್ಟರ್ಕ್ಲಾಸ್. ಖ್ಯಾತ ಸಂಕಲನಕಾರರಾದ ಶ್ರೀಕರ್ ಪ್ರಸಾದ್ ಅವರಿಂದ ಚಲನಚಿತ್ರದ ಸಂಕಲನದ ಮಹತ್ವ ಕುರಿತ ಮಾಸ್ಟರ್ಕ್ಲಾಸ್. ನಿರ್ದೇಶಕ – ಸಂಕಲನಕಾರ ಮಹೇಶ್ ನಾರಾಯಣನ್ ಅವರಿಂದ ‘ಸಮಕಾಲೀನ ಚಲನಚಿತ್ರ ಕಥನ ನಿರೂಪಣೆ ಮತ್ತು ಶೈಲಿ ಬಗ್ಗೆ ಮಾಸ್ಟರ್ಕ್ಲಾಸ್ ಇರಲಿದೆ..
ಹೆಸರಾಂತ ಧ್ವನಿ ವಿನ್ಯಾಸಕರಾದ ಬಿಶ್ವದೀಪ್ ಚಟರ್ಜಿ ಅವರಿಂದ ದೃಶ್ಯಾತೀತ ಧ್ವನಿ – ಆಡಿಯೋಗ್ರಫಿಯ ಕಲೆ ಬಗ್ಗೆ ಮಾಸ್ಟರ್ ಕ್ಲಾಸ್.. ಅನುರಾಗ್ ಕಶ್ಯಪ್ರವರಿಂದ ಸಾಂಪ್ರದಾಯಿಕ ಕಲ್ಪನೆಗಳಾಚೆಗಿನ – ಚಲನಚಿತ್ರ ಕಥನಗಾರಿಕೆ ಕುರಿತ ಮಾಸ್ಟರ್ ಕ್ಲಾಸ್. ಹೆಸರಾಂತ ಸಿನಿಮಾಟೋಗ್ರಫರ್ ವಿ.ಕೆ. ಮೂರ್ತಿ ವಾರ್ಷಿಕ ಸ್ಮಾರಕ ಉಪನ್ಯಾಸ – ‘ಲೆನ್ಸ್ಗಳ ಆಯ್ಕೆ, ಬೆಳಕಿನ ವಿನ್ಯಾಸ ಮತ್ತು ಛಾಯಾಗ್ರಹಣ ಕಲೆ’ ಕುರಿತ ಮಾಸ್ಟರ್ ಕ್ಲಾಸ್, ಹಿರಿಯ ಛಾಯಾಗ್ರಾಹಕರಾದ ಜಿ.ಎಸ್ ಭಾಸ್ಕರ್ ಅವರಿಂದ ಕಾರ್ಯಕ್ರಮ ನಿರ್ವಹಣೆ. ಗಿರೀಶ್ ಕಾಸರವಳ್ಳಿ, ಡಾ. ಸಾಧು ಕೋಕಿಲ, ಡಾ. ಜಯಮಾಲ ಹಾಗೂ ಇತರರೊಂದಿಗೆ
ಕಳೆದ ನಾಲ್ಕು ದಶಕಗಳ ಕನ್ನಡ ಸಿನಿಮಾ ಬಗ್ಗೆ ಸಂವಾದ. ಗಿರೀಶ್ ಕಾಸರವಳ್ಳಿ ಅವರಿಂದ ʼಚಲನಚಿತ್ರ ಕಥನಗಳಲ್ಲಿ ನಮ್ಮತನ ಮತ್ತು ನೈಜತೆʼ ಕುರಿತ ಮಾಸ್ಟರ್ಕ್ಲಾಸ್. ಚಿತ್ರೋತ್ಸವದ ಧ್ಯೇಯವಾಕ್ಯ ಕೇಂದ್ರಿತ ಸಂವಾದ ಕಾರ್ಯಕ್ರಮ, ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಡೆಯಲಿದೆ.
ʼಬಡವರ ರಾಜಕುಮಾರʼ ಪುಸ್ತಕದ ಕುರಿತು ಮಾತುಕತೆ : ಭಾಗವಹಿಸುವವರು ಪುಸ್ತಕದ ಲೇಖಕ ಮಂಜುನಾಥ ಅದ್ದೆ, ಸಾಹಿತಿ -ಪತ್ರಕರ್ತರಾದ ಚ.ಹಾ ರಘುನಾಥ್ ಮತ್ತು ಡಾ. ಸಾಧುಕೋಕಿಲ, ಡಾ.ಮುರಳಿ ಮೋಹನ ಕಾಟಿ ಸಂವಾದ ನಡೆಸಿಕೊಡಲಿದ್ದಾರೆ.
ಪೊಲಿಷ್ ಇನ್ಸ್ಟಿಟ್ಯೂಟ್, ನವದೆಹಲಿ ಸಹಯೋಗದೊಂದಿಗೆ ಪ್ರಖ್ಯಾತ ಪೋಲೆಂಡಿನ ಚಲನಚಿತ್ರ ನಿರ್ದೇಶಕರಾದ ʼಆಂದ್ರೆ ವಾಜ್ಡಾ- ಶತಮಾನೋತ್ಸವ ಸ್ಮರಣೆʼ, ಉಪನ್ಯಾಸ ಮತ್ತು ಪೋಲಿಷ್ ಚಲನಚಿತ್ರ ಸಂಸ್ಕೃತಿ ಕುರಿತು ಸಂವಾದ ಇರಲಿದೆ. ಎನ್ಎಫ್ಡಿಸಿ–ಎನ್ಎಫ್ಎಐ, ಪುಣೆ ಸಹಯೋಗದಲ್ಲಿ ಕ್ಲಾಸಿಕ್ ಚಲನಚಿತ್ರಗಳ ಸಂರಕ್ಷಣೆ, ಸಂಗ್ರಹ, ಡಿಜಿಟಲೀಕರಣದ ಮಹತ್ವದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಇರಲಿದೆ.
‘ಫಿಪ್ರೆಸ್ಕಿ 100 ವರ್ಷ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ) ಚಲನಚಿತ್ರ ವಿಮರ್ಶೆ : ಮುಂದಿನ ಹಾದಿ (ಸವಾಲುಗಳು ಮತ್ತು ಸಾಧ್ಯತೆಗಳು)’ :- ಈ ವಿಚಾರ ಸಂಕಿರಣದಲ್ಲಿ ಹಿರಿಯ ಚಲನಚಿತ್ರ ವಿಮರ್ಶಕರು ಭಾಗವಹಿಸಲಿದ್ದಾರೆ.ಮಾಯಾ ಚಂದ್ರ ಅವರಿಂದ ಫಿಲ್ಮ್ ಮೇಕಿಂಗ್ ಪ್ರಕ್ರಿಯೆ ಬಗ್ಗೆ ಮಾಸ್ಟರ್ಕ್ಲಾಸ್ ಇರಲಿದೆ.
ಖ್ಯಾತ ನಿರ್ಮಾಪಕರಾದ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್, ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಎಸ್.ವಿ ರಾಜೇಂದ್ರಸಿಂಗ್ ಬಾಬು, ಚಲನಚಿತ್ರ ಛಾಯಾಗ್ರಾಹಕರಾದ ಎಸ್. ರಾಮಚಂದ್ರ, ಜನಪ್ರಿಯ ಕಲಾವಿದರಾದ ಡಾ.ಜಯಮಾಲ ಅವರು ಕನ್ನಡ ಚಲನಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ಅವರ ಮಹತ್ವದ ಚಲನಚಿತ್ರಗಳ ಪ್ರದರ್ಶನವಿರಲಿದೆ.
ಪ್ರಸಿದ್ಧ ಗಾಯಕರು, ಸಂಗೀತ ನಿರ್ದೇಶಕರಾದ ಭಾರತ ರತ್ನ ಭುಪೆನ್ ಹಜಾರಿಕಾ ಮತ್ತು ಈಜಿಪ್ಟ್ನ ಖ್ಯಾತ ನಿರ್ದೇಶಕ ಯೂಸುಫ್ ಷಹೀನ್ ಅವರ ಶತಮಾನೋತ್ಸವ ಸಂಸ್ಕರಣೆ ಹಾಗೂ ಅವರ ಮಹತ್ವದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಇತ್ತೀಚೆಗೆ ನಿಧನರಾದ ʼಅಭಿನಯ ಸರಸ್ವತಿ, ಪದ್ಮಭೂಷಣ, ಡಾ ಬಿ. ಸರೋಜಾ ದೇವಿʼ (ರೀಸ್ಟೋರ್ ಮಾಡಲಾದ ʼಅಮರಶಿಲ್ಪಿ ಜಕಣಾಚಾರಿʼ ಚಲನಚಿತ್ರ ಪ್ರದರ್ಶನ) ಮತ್ತು ಹಿರಿಯ ಕಲಾವಿದರಾದ ಎಂ. ಎಸ್. ಉಮೇಶ್ ಅವರ ನೆನಪು ʼಗೋಲ್ಮಾಲ್ ರಾಧಾಕೃಷ್ಣʼ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
DCP ಫಾರ್ಮ್ಯಟ್ನಲ್ಲಿ ಡಿಜಿಟಲೈಜ್ ಆಗಿರುವ ಕನ್ನಡದ ʼಆಕ್ಸಿಡೆಂಟ್ ʼ ಚಲನಚಿತ್ರದ ಪ್ರದರ್ಶನ ಮತ್ತು ಜನಪ್ರಿಯ ನಟ, ನಿರ್ದೇಶಕರಾದ ಶಂಕರ ನಾಗ್ ಅವರ ಕಲಾತ್ಮಕತೆಯ ಸಂಭ್ರಮ ಹಾಗೂ ನೆನಪು ಕಾರ್ಯಕ್ರಮವಿದೆ.
ಸ್ಪರ್ಧಾ ವಿಭಾಗಗಳು
ಎಂದಿನಂತೆ ಈ ಬಾರಿಯೂ ಚಿತ್ರೋತ್ಸವದಲ್ಲಿ ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳಿರಲಿವೆ. ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು.
ಚಿತ್ರೋತ್ಸವದ ವಿವಿಧ ವಿಭಾಗಗಳು ಮತ್ತು ಕಾರ್ಯಕ್ರಮಗಳು
1. ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ
2. ಚಿತ್ರ ಭಾರತಿ-ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ
3. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ
4. ಸಮಕಾಲೀನ ವಿಶ್ವ ಸಿನಿಮಾ
5. ಕನ್ನಡ ಜನಪ್ರಿಯ ಸಿನಿಮಾ
6. ಫಿಪ್ರೆಸ್ಕಿ – ವಿಮರ್ಶಕರ ವಾರ
7. ಜೀವನ ಕಥನ ಆಧಾರಿತ ಚಿತ್ರಗಳು
8. ದೇಶ ಕೇಂದ್ರಿತ ವಿಶೇಷ: ಪೋಲೆಂಡ್
9. ಭಾರತೀಯ ಉಪಭಾಷಾ ಚಲನಚಿತ್ರಗಳು
10. ಪುನರಾವಲೋಕನ
ಸಮಾರೋಪ ಸಮಾರಂಭ
ಫೆಬ್ರವರಿ 6 ರಂದು ಸಂಜೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನ ಚಿತ್ರಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ಚಂದ್ಗೆಹ್ಲೋಟ್ಅವರು ಅಧ್ಯಕ್ಷತೆ ವಹಿಸುತ್ತಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಪ್ರತಿನಿಧಿ ನೋಂದಣಿ
ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಜನವರಿ 16 ರಿಂದ ಪ್ರಾರಂಭವಾಗಿದೆ. ಆಸಕ್ತರು ಚಿತ್ರೋತ್ಸವದ ಜಾಲತಾಣಕ್ಕೆ ಭೇಟಿ ನೀಡಿ (biffes.org) ಚಿತೋತ್ಸವದ ನೀತಿ ನಿಯಮಾವಳಿಗಳನ್ನು ಅನುಸರಿಸಿ, ಪ್ರತಿನಿಧಿ ನೊಂದಣಿ ಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟ ಸಿನಿಮಾಸಕ್ತರು ಪ್ರತಿನಿಧಿಗಳಾಗಿ ನೊಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ.
ಚಿತ್ರೋತ್ಸವದ ಪ್ರತಿನಿಧಿ ನೊಂದಣಿ ಶುಲ್ಕ
ಸಾರ್ವಜನಿಕರಿಗೆ ರೂ. 800/-
ಚಲನಚಿತ್ರೋದ್ಯಮದ ಸದಸ್ಯರು, ಚಿತ್ರಸಮಾಜಗಳ (ಫಿಲಂ ಸೊಸೈಟಿ) ಸದಸ್ಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಿಗೆ ರೂ.400/-
ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ಪ್ರತಿನಿಧಿಗಳು ನೊಂದಣಿಯಾದ 3 ದಿನಗಳ ಬಳಿಕ ಈ ಕೆಳಕಂಡ ನಿಮ್ಮ ಆಯ್ಕೆಯ ಸ್ಥಳಗಳಲ್ಲಿ ಚಲನಚಿತ್ರೋತ್ಸವದ ಪ್ರತಿನಿಧಿ ಕಾರ್ಡ್ಗಳನ್ನು ಪಡೆಯಬಹುದು. ಕರ್ನಾಟಕ ಚಲನಚಿತ್ರ ಅಕಾಡೆಮಿ, ನಂದಿನಿ ಲೇಔಟ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಶಿವಾನಂದ ಸರ್ಕಲ್, ಸಿನೆಪೊಲಿಸ್, ಲುಲುಮಾಲ್, ರಾಜಾಜಿನಗರ
ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2ನೇ ಹಂತ.
