BBK 12: ಪಕ್ಷಪಾತದ ಆರೋಪಕ್ಕೆ ತಲೆಕೆಡಿಸಿಕೊಳ್ಳದ ಸುದೀಪ್: ಟ್ರೋಲ್‌ಗಳಿಗೆ ತಕ್ಕ ಉತ್ತರ ಕೊಟ್ಟ ಕಿಚ್ಚ..!

Untitled design (100)

ಕಳೆದ 12 ಸೀಸನ್‌ಗಳಿಂದ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನ ಅವಿಭಾಜ್ಯ ಅಂಗ ಎಂದರೆ ಅದು ಕಿಚ್ಚ ಸುದೀಪ್. ಸುದೀಪ್ ಇಲ್ಲದ ಬಿಗ್ ಬಾಸ್ ಅನ್ನು ಕಲ್ಪಿಸಿಕೊಳ್ಳುವುದೂ ಕಷ್ಟ ಎಂಬ ಮಾತಿದೆ. ಶೋನ ಟಿಆರ್‌ಪಿ ಏರಿಕೆಯಲ್ಲಿ ಸುದೀಪ್ ಅವರ ನಿರೂಪಣೆ ಪಾತ್ರ ವಹಿಸಿದೆ. ಆದಾಗ್ಯೂ, ಇತ್ತೀಚಿನ ಸೀಸನ್‌ಗಳಲ್ಲಿ ಸುದೀಪ್ ಅವರ ನಿರೂಪಣಾ ಶೈಲಿ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಿಗ್ ಬಾಸ್ ಸಂಚಿಕೆಗಳ ಬಗ್ಗೆ ವಿಮರ್ಶೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಸುದೀಪ್ ಅವರ ತೀರ್ಪುಗಳಲ್ಲಿ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ಬಿಗ್ ಬಾಸ್ ಕಾರ್ಯಕ್ರಮವನ್ನು ಇಷ್ಟೊಂದು ಜನರು ನೋಡುತ್ತಿದ್ದಾರೆ ಎಂಬುದು ಖುಷಿಯ ವಿಚಾರ. ನನ್ನ ಸ್ಥಾನ ಅನೇಕರಿಗೆ ಸ್ಫೂರ್ತಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಒಂದು ಪುಟ್ಟ ವೇದಿಕೆ ನಿರ್ಮಿಸಿಕೊಂಡು ವಿಮರ್ಶೆ ಮಾಡುತ್ತಿದ್ದಾರೆ. ಅವರು ನೀಡುವ ವಿವರಣೆಗಳಲ್ಲಿ ಕೆಲವೊಮ್ಮೆ ಅರ್ಥವೂ ಇರುತ್ತದೆ ಎಂದು ಸಕಾರಾತ್ಮಕವಾಗಿ ಹೇಳಿದ್ದಾರೆ.

ನಾನು ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ಎಂದು ಹೇಳಲಾರೆ, ಆದರೆ ಯಾವುದನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸುವುದಿಲ್ಲ ಎಂದ ಸುದೀಪ್ ಅವರು ಟೀಕೆ ಮಾಡುವವರಿಗೆ ಒಂದು ಉದಾಹರಣೆ ನೀಡಿದರು. ಒಂದು ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನ ಮಂತ್ರಿಯ ಮೇಲೆಯೂ ಜನರಿಗೆ ದೂರುಗಳಿರುತ್ತವೆ. ಆದರೆ ಅವರು ಆ ನಿರ್ಧಾರವನ್ನು ಯಾಕೆ ತೆಗೆದುಕೊಂಡಿದ್ದಾರೆ ಎಂಬುದು ಅವರಿಗೆ ಮಾತ್ರ ತಿಳಿದಿರುತ್ತದೆ. ಬಿಗ್ ಬಾಸ್ ವೇದಿಕೆಯ ಮೇಲೆ ನಿಂತಾಗ ಮಾತ್ರ ಅಲ್ಲಿನ ನೈಜ ಪರಿಸ್ಥಿತಿ ಏನು ಎಂಬುದು ಅರಿವಾಗುತ್ತದೆ ಎಂದು ಸುದೀಪ್‌ ವಿವರಿಸಿದರು.

ಬಿಗ್ ಬಾಸ್ ವೇದಿಕೆಯ ಮೇಲೆ ನಿಂತಾಗ ಇಡೀ ಕರ್ನಾಟಕವೇ ನೋಡುತ್ತಿರುತ್ತದೆ. ನಾನು ಸ್ಪರ್ಧಿಗಳ ಜೀವನವನ್ನು ಕೈಯಲ್ಲಿ ಇಟ್ಟುಕೊಂಡು ನಿಂತಿರುತ್ತೇನೆ. ಅಲ್ಲಿ ನನಗೆ ಯಾರೂ ಇಂತಹದ್ದೇ ಹೇಳಬೇಕು ಎಂದು ಹೇಳಿಕೊಡುವುದಿಲ್ಲ. ಸ್ಪರ್ಧಿಗಳು ಕೇಳುವ ಪ್ರಶ್ನೆಗೆ ಅಥವಾ ಅವರ ನಡವಳಿಕೆಗೆ ನಾನು ತಕ್ಷಣವೇ ಸ್ಪಂದಿಸಬೇಕಾಗುತ್ತದೆ. ಕೆಲವೊಮ್ಮೆ ನಾನು ಕಠಿಣವಾಗಿ ವರ್ತಿಸುತ್ತೇನೆ ಅಥವಾ ಬೈಯುತ್ತೇನೆ. ಅದಕ್ಕೆ ಕಾರಣವಿದೆ, ಇಂದು ಬೈಯ್ಯದೇ ಹೋದರೆ ಅವರು ಹಾದಿ ತಪ್ಪುತ್ತಾರೆ. ಇನ್ನು ಕೆಲವರಿಗೆ ಬೈಯುವ ಅವಶ್ಯಕತೆಯೇ ಇರುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಪಕ್ಷಪಾತದ ಆರೋಪಗಳ ಬಗ್ಗೆ ಮಾತನಾಡಿದ ಸುದೀಪ್, ನಾನು ಯಾಕೆ ಪಕ್ಷಪಾತ ಮಾಡಬೇಕು ? ಎಂತೆಂಥವರನ್ನೇ ಪಳಗಿಸಿಕೊಂಡು ಬಂದವನು ನಾನು, ಯಾರಿಗೂ ಹೆದರುವ ಅವಶ್ಯಕತೆ ನನಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನರು ನೀಡುವ ಅಭಿಪ್ರಾಯಗಳು ಅವರವರ ವೈಯಕ್ತಿಕ ಪ್ರೀತಿಯ ಸಂಕೇತ. 14 ಟಿವಿಆರ್ (TVR) ಸುಮ್ಮನೆ ಬರುವುದಿಲ್ಲ. ಜನರು ಪ್ರೀತಿಯಿಂದ ನೋಡುತ್ತಿರುವುದರಿಂದಲೇ ಇಷ್ಟೊಂದು ಚರ್ಚೆಗಳಾಗುತ್ತಿವೆ. ಒಬ್ಬ ವೀಕ್ಷಕನೂ ಸಹ ನನಗೆ ಮುಖ್ಯ ಅಂದಮೇಲೆ ಅವರು ನೀಡುವ ಪ್ರತಿಕ್ರಿಯೆಯನ್ನು ನಾವು ಸ್ವೀಕರಿಸಲೇಬೇಕು. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು ಗೌರವಿಸಬೇಕು ಎಂದಿದ್ದಾರೆ.

Exit mobile version